ಬಂಡಿಪುರ ಕಾಡಂಚಿನ ಜನರ ನೆಮ್ಮದಿ ಕಸಿದ ಕಾಡುಪ್ರಾಣಿಗಳು
ಚಾಮರಾಜನಗರ, ನವೆಂಬರ್ 13: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಲ್ಲಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಜನರಿಗೆ ಇದೀಗ ಚಿರತೆ, ಹುಲಿ ಸೇರಿದಂತೆ ವನ್ಯ ಪ್ರಾಣಿಗಳ ಭಯ ಆರಂಭವಾಗಿದೆ.
ಈ ಬಾರಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿದ್ದರಿಂದ ಕಳೆದ ಕೆಲವು ವರ್ಷಗಳಿಂದ ಪಾಳು ಬಿದ್ದಿದ್ದ ಜಮೀನಿನಲ್ಲಿ ಬೆಳೆ ಬೆಳೆದು ಆರ್ಥಿಕವಾಗಿ ಸದೃಢತೆ ಕಂಡುಕೊಳ್ಳುವ ಕನಸು ಅವರದಾಗಿತ್ತು. ಆದರೆ ಕಾಡುಪ್ರಾಣಿಗಳ ಭಯದಿಂದ ಆ ಕನಸು ನನಸಾಗುವ ಭರವಸೆ ಇಲ್ಲದಂತಾಗಿದೆ.

ಕಾಡಾನೆಗಳು, ಕಾಡುಹಂದಿಗಳು ಜಮೀನಿಗೆ ನುಗ್ಗಿ ಫಸಲು ನಾಶ ಮಾಡಿದರೆ, ಚಿರತೆ ಕೊಟ್ಟಿಗೆಗೆ ನುಗ್ಗಿ ಜಾನುವಾರು, ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇದರ ಜತೆಗೆ ಹುಲಿಯೂ ಅಡ್ಡಾಡುತ್ತಿರುವ ಬಗ್ಗೆ ಹೆಜ್ಜೆ ಗುರುತು ಕಂಡು ಬಂದಿದ್ದು ಇದರಿಂದ ಹೆದರಿದ ಜನ ರಾತ್ರಿ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಬಂಡೀಪುರ ಹುಲಿಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಫಸಲನ್ನು ಕಾಯಲು ರೈತರು ಜಮೀನಿನಲ್ಲೇ ವಾಸ್ತವ್ಯ ಹೂಡಿದ್ದು ಈ ವೇಳೆ ಹುಲಿಯನ್ನು ನೋಡಿದ್ದಾರೆ. ಹೆಗ್ಗವಾಡಿ, ಗುಡಿಮನೆ ಹಾಗೂ ಚಿರಕನಹಳ್ಳಿ ಗ್ರಾಮಗಳ ಬಳಿ ಭಾರೀ ಗಾತ್ರದ ಹುಲಿಯು ಅಡ್ಡಾಡುತ್ತಿರುವುದು ಭಯಕ್ಕೆ ಕಾರಣವಾಗಿದೆ.
ಈ ವ್ಯಾಪ್ತಿಯ ಕೆರೆಯ ಸಮೀಪ ದೊಡ್ಡ ಗಾತ್ರದ ಹುಲಿಯ ಹೆಜ್ಜೆಯ ಗುರುತುಗಳು ಕಂಡು ಬಂದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮತ್ತೆ ಹುಲಿ ಕಂಡುಬಂದರೆ ಸೆರೆಹಿಡಿಯುವ ಭರವಸೆ ನೀಡಿದ್ದಾರೆ. ಆದರೆ ಜನ ಮಾತ್ರ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಕಾರಣ ಈ ಹುಲಿ ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಎಂಬುದನ್ನು ಹೇಳುವುದೇ ಕಷ್ಟವಾಗಿದೆ.
ಮತ್ತೊಂದೆಡೆ ಓಂಕಾರ್ ವಲಯದ ಅರಣ್ಯದ ಕಾಡಂಚಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ರಾಘವಾಪುರ ಗ್ರಾಮದ ಜಮೀನುಗಳ ಸುತ್ತಲೂ ಈ ಚಿರತೆ ಸಂಚರಿಸುತ್ತಿದ್ದು, ಸಾಕುನಾಯಿಗಳನ್ನು ಬೇಟೆಯಾಡಿ ತಿನ್ನುತ್ತಿದೆ. ಯಾವಾಗ ದನದ ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯವೂ ರೈತರದ್ದಾಗಿದೆ. ಒಟ್ಟಾರೆ ಕಾಡುಪ್ರಾಣಿಗಳು ಇಲ್ಲಿನ ಗ್ರಾಮಗಳ ಜನರನ್ನು ಆತಂಕಕ್ಕೆ ತಳ್ಳಿದ್ದಂತೂ ನಿಜ.












Click it and Unblock the Notifications