ಮಹದೇವ ಪ್ರಸಾದ್ ಸ್ಥಾನ ತುಂಬುವವರು ಯಾರು?
ಚಾಮರಾಜನಗರ, ಜನವರಿ 4: ಕಾಂಗ್ರೆಸ್ ಪ್ರಬಲ ನಾಯಕರಾಗಿದ್ದ ಎಚ್.ಎಸ್. ಮಹದೇವ ಪ್ರಸಾದ್ ನಿಧನ ಪಕ್ಷವನ್ನು ಬಡವಾಗಿಸಿದರೆ, ಚಾಮರಾಜನಗರಕ್ಕೆ ಉತ್ತಮ ನಾಯಕನ ಕೊರತೆಯನ್ನುಂಟು ಮಾಡಿದೆ. ಇನ್ನು ಅವರ ಸ್ಥಾನಕ್ಕೆ ಸಿದ್ದರಾಮಯ್ಯ ಯಾರನ್ನು ತರಲಿದ್ದಾರೆ ಎಂದು ಪಕ್ಷದಲ್ಲಿಯೇ ಚರ್ಚೆ ಪ್ರಾರಂಭವಾಗಿದೆ.[ಮಹದೇವ ಪ್ರಸಾದ್ ನಿಧನ : ಮುಖಂಡರ ಅಂತಿಮ ನುಡಿ]
ಮಹದೇವ ಪ್ರಸಾದ್ ಅವರಿಗೆ ಮಗನನ್ನು ರಾಜಕೀಯ ತರಬೇಕೆಂಬ ಆಕಾಂಕ್ಷೆ ಇತ್ತೆ ಅದು ಯಾರಿಗೂ ಗೊತ್ತಿಲ್ಲ. ಅದರೆ ಗಣೇಶ್ ಪ್ರಸಾದ್ ಬಿ.ಕಾಂ ಮುಗಿಸಿ ಎಂ ಸ್ಯಾಂಡ್ ಘಟಕವೊಂದರ ಪಾಲುದಾರಿಕೆ ಹೊಂದಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಪತ್ನಿ ಡಾ. ಎಂ.ಸಿ ಮೋಹನಕುಮಾರಿ ಪಿಎಚ್ ಡಿ ಪದವಿ ಮುಗಿಸಿ ಸಾಹಿತ್ಯಾಸಕ್ತಿಯಿಂದ ಕವಿಗೋಷ್ಠಿ ಕವನವಾಚನ, ಪುಸ್ತಕ ಪ್ರಕಟಣೆಗಳಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದರು. ಆದರೆ ಅವರೂ ಪತಿಯ ರಾಜಕೀಯ ವಿಷಯದಲ್ಲಿ ತಲೆಕೆಡಿಸಿಕೊಂಡಿರಲಿಲ್ಲ.
ಇನ್ನು ಮಹದೇವ ಪ್ರಸಾದ್ ಅವರ ತಮ್ಮ ನಂಜುಂಡ ಪ್ರಸಾದ್ ಅಣ್ಣನ ಬೆನ್ನೆಲುಬಾಗಿ ಎಲ್ಲ ಕಾರ್ಯಗಳಲ್ಲೂ ತೊಡಗಿಕೊಂಡಿದ್ದರು. ಈಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜಕೀಯದ ಬಲಗೈಯಂತಿದ್ದ ಮಹದೇವ ಪ್ರಸಾದ್ ಅಗಲಿಕೆ ತುಂಬಲಾರದ ನಷ್ಟ ತಂದೊಡ್ಡಿದೆ. ಪಕ್ಷದಲ್ಲಿ ಸಹಕಾರಿ ಮತ್ತು ಸಕ್ಕರೆ ಸಚಿವ ಸ್ಥಾನವನ್ನು ಸಿಎಂ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಕಾಡಲು ಪ್ರಾರಂಭವಾಗಿದೆ.[ಎಚ್ಎಸ್ಎಂ ನಿಧನ : ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ]
ಮಹದೇವ ಪ್ರಸಾದ್ ಅವರ ಪತ್ನಿಯನ್ನು ಸಿಎಂ ರಾಜಕೀಯ ರಂಗಕ್ಕೆ ತರತ್ತಾರೆಂಬ ಗಾಳಿಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಮಹದೇವ ಪ್ರಸಾದ್ ಅವರ ತಮ್ಮ ನಂಜುಂಡಪ್ರಸಾದ್ ಅವರನ್ನು ತರಲಿರುವರೇ ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಇದೆ. ಇನ್ನು ಮಗ ಗಣೇಶ್ ಪ್ರಸಾದ್ ಅವರು ಹೊಸದಾಗಿ ರಾಜಕೀಯ ಪಾಠ ಕಲಿತು ಅಪ್ಪನ ಸ್ಥಾನವನ್ನು ಮುಂದಿನ ದಿನಗಳಲ್ಲಿ ತುಂಬಲಿರುವರೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕಾಗಿದೆ.