ಹುಷಾರ್; ನಾಗಮಣಿ ಆಸೆಗೆ ಬಿದ್ದರೆ ಬದುಕು ಮೂರಾಬಟ್ಟೆ!
ಚಾಮರಾಜನಗರ, ಜುಲೈ 29; ನಾಗಮಣಿಯನ್ನು ಅದ್ಯಾರು ನೋಡಿದ್ದಾರೋ ಗೊತ್ತಿಲ್ಲ. ಆದರೆ ಅದರ ಹೆಸರಿನಲ್ಲಿ ವಂಚನೆಗಳು ಮಾತ್ರ ಎಗ್ಗಿಲ್ಲದೆ ನಡೆಯುತ್ತಿದ್ದು, ಅದೃಷ್ಟದ ಬೆನ್ನೇರಿ ಹೋದವರು ವಂಚನೆಗೊಳಗಾಗಿ ತಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿಕೊಳ್ಳುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅದೃಷ್ಟ ನಂಬುವವರನ್ನು, ದಿಢೀರ್ ಶ್ರೀಮಂತರಾಗಬೇಕೆಂಬ ಮನಸ್ಥಿತಿ ಹೊಂದಿದವರನ್ನು ವಂಚಿಸಲು ಈ ನಾಗಮಣಿ ತಂತ್ರ ಬಲು ಸುಲಲಿತವಾಗುತ್ತಿರುವುದು ಹಲವು ಪ್ರಕರಣಗಳಿಂದ ಸಾಬೀತಾಗಿದೆ.
ಶಾಸಕರ ಹೆಸರೇಳಿ ಶಾಸಕಿ ರೂಪಾಲಿ ನಾಯ್ಕ್ಗೆ 50 ಸಾವಿರ ರೂ. ವಂಚನೆ
ಇಷ್ಟಕ್ಕೂ ನಾಗಮಣಿ ಇದೆಯಾ? ಅದನ್ನು ನೋಡಿದವರು ಇದ್ದಾರೆಯಾ? ಎಂಬಿತ್ಯಾದಿಯ ಪ್ರಶ್ನೆಗಳಿಗೆ ಉತ್ತರಗಳು ಸಿಗದೆ ಹೋದರೂ ಕಟ್ಟು ಕತೆಗಳು ಮಾತ್ರ ಜನರ ಬಾಯಲ್ಲಿ ಪುಂಖಾನುಪುಂಖವಾಗಿ ಬರುತ್ತಿದ್ದು, ಇದರಿಂದಾಗಿಯೇ ಜನಕ್ಕೆ ನಾಗಮಣಿ ಎಂದಾಕ್ಷಣ ಕಿವಿ ನಿಮಿರಿ ಅದೃಷ್ಟ ಮನೆ ಬಾಗಿಲಿಗೆ ಬಂದು ಬಿಡುತ್ತದೆ ಎಂಬ ಭ್ರಮೆಯಲ್ಲಿ ತೇಲಾಡಿ ವಂಚಕರಿಗೆ ತಮ್ಮ ಜುಟ್ಟನ್ನು ಕೊಟ್ಟು ಬಿಡುತ್ತಾರೆ.
ಕೋಟ್ಯಾಂತರ ರೂಪಾಯಿ ವಂಚನೆ; ಸಚಿವ ಶ್ರೀರಾಮುಲು ಪಿಎ ಬಂಧನ
ಈಗೀಗ ನಾಗಮಣಿ ಹೆಸರಿನಲ್ಲಿ ವಂಚಿಸುವ ವಂಚಕರು ಹೆಚ್ಚಾಗುತ್ತಿದ್ದು, ಹಣ ಲಪಟಾಯಿಸಲು ಇವರಿಗೆ ನಾಗಮಣಿ ಹೆಸರೇ ಆಸರೆಯಾಗುತ್ತಿದೆ. ಇದುವರೆಗೆ ಅದೆಷ್ಟು ಮಂದಿ ನಾಗಮಣಿ ಆಸೆಗೆ ಬಿದ್ದು ಹಣ ಕಳೆದು ಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಕೆಲವರು ಕೊಟ್ಟ ದೂರಿನಿಂದ ಮಾತ್ರ ಆಗೊಮ್ಮೆ, ಈಗೊಮ್ಮೆ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಪಿಎನ್ ಬಿ ವಂಚನೆ ಪ್ರಕರಣ: ಭಾರತಕ್ಕೆ ಆರೋಪಿ ಮೆಹುಲ್ ಚೋಕ್ಸಿ ಗಡಿಪಾರು
ಚಾಮರಾಜನಗರದಲ್ಲಿ ಹೆಚ್ಚು; ಚಾಮರಾಜನಗರದಲ್ಲಿ ಇಂತಹ ಮೋಸಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಕೇರಳ ಮತ್ತು ತಮಿಳುನಾಡಿಗೆ ಹೊಂದಿಕೊಂಡಂತೆ ಇರುವುದರಿಂದ ಮೋಸಗಾರರಿಗೆ ರಾಜ್ಯದೊಳಗೆ ಪ್ರವೇಶಿಸಲು ಮತ್ತು ಬೇರೆಡೆಗೆ ತೆರಳಲು ಇದೊಂದು ರೀತಿಯ ರಾಜ ಮಾರ್ಗವಾಗಿದೆ. ಹೀಗಾಗಿಯೇ ಇಲ್ಲಿ ಆಗೊಮ್ಮೆ, ಈಗೊಮ್ಮೆ, ನಾಗಮಣಿ, ರೈಸ್ ಫುಲ್ಲಿಂಗ್ ನಂತಹ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ.
ಚಾಮರಾಜನಗರದ ಇಬ್ಬರು ವ್ಯಕ್ತಿಗಳು ಸೇರಿ ನಕಲಿ ನಾಗಮಣಿಯನ್ನು ಸೃಷ್ಟಿಸಿ ಅದನ್ನು ಬೆಂಗಳೂರಿನ ವ್ಯಕ್ತಿಗೆ ಮೂವತ್ತು ಲಕ್ಷಕ್ಕೆ ಮಾರಾಟ ಮಾಡಿ ಇದೀಗ ಸಿಕ್ಕಿ ಬಿದ್ದು ಜೈಲು ಸೇರಿದ್ದಾರೆ. ಈ ಘಟನೆ ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ ದುರಾಸೆಗೆ ತಕ್ಕಶಾಸ್ತಿ ಆಗುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ.
ಈ ಪ್ರಕರಣದಲ್ಲಿ ಕೊಳ್ಳೇಗಾಲ ತಾಲ್ಲೂಕು ಸರಗೂರು ಗ್ರಾಮದ ನಿವಾಸಿ ರಾಜು ಅಲಿಯಾಸ್ ಪುಟ್ಟಸ್ವಾಮಿ ಆರಾಧ್ಯ ಎಂಬಾತ ಮಹಾನ್ ವಂಚಕನಾಗಿದ್ದು, ದಿಢೀರ್ ಹಣ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದನು. ಈ ವೇಳೆ ಇವನ ಆಲೋಚನೆಗೆ ಬಂದಿದ್ದು ನಾಗಮಣಿ. ಹೀಗಾಗಿ ಖತರ್ನಾಕ್ ಗೆಳೆಯರಾದ ಯರಂಬಾಡಿ ಗ್ರಾಮದ ಸಣ್ಣಪ್ಪಗೌಡ ಮತ್ತು ಕೂಡಲೂರು ಗ್ರಾಮದ ತಂಗವೇಲು ಎಂಬಿಬ್ಬರನ್ನು ಸೇರಿಸಿಕೊಂಡು ನಕಲಿ ನಾಗಮಣಿಯನ್ನು ಸೃಷ್ಟಿ ಮಾಡಿದ್ದನು.
ಒಂದು ಮರದ ಪುಟ್ಟ ಪೆಟ್ಟಿಗೆಯಲ್ಲಿ ಹತ್ತಿ ತುಂಬಿಸಿ ಅದರೊಳಗೆ ಎಲೆಕ್ಟ್ರಿಕಲ್ ಚಾರ್ಜರ್ ಅಳವಡಿಸಿ ಹತ್ತಿ ಮೇಲೆ ಹೊಳೆಯುವ ಮಣಿಯೊಂದನ್ನು ಇಟ್ಟಿದ್ದನು. ಬಾಕ್ಸ್ ಮುಚ್ಚಳ ತೆಗೆಯುತ್ತಿದ್ದಂತೆಯೇ ಒಳಗೆ ಹೊಳೆಯುವ ನಾಗಮಣಿ ಕಾಣಿಸುತ್ತಿತ್ತು. ನೋಡಲು ಆಕರ್ಷಕವಾಗಿದ್ದ ಈ ಮಣಿಯನ್ನು ತಕ್ಷಣಕ್ಕೆ ನೋಡಿದವರು ನಾಗಮಣಿ ಎಂದು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.
30 ಲಕ್ಷಕ್ಕೆ ಮಾರಾಟ; ಇದಾದ ನಂತರ ನಕಲಿ ನಾಗಮಣಿಯನ್ನು ಹೇಗಾದರು ಮಾಡಿ ಮಾರಾಟ ಮಾಡಬೇಕೆಂಬ ಹಠಕ್ಕೆ ಬಿದ್ದ ರಾಜು ಅಲಿಯಾಸ್ ಪುಟ್ಟಸ್ವಾಮಿ ಆರಾಧ್ಯ ನೇರವಾಗಿ ಬೆಂಗಳೂರಿಗೆ ತೆರಳಿ ಒಂದಷ್ಟು ಮಂದಿಯ ಸಂಪರ್ಕ ಸಾಧಿಸಿ ನಾಗಮಣಿ ಮಾರಾಟಕ್ಕೆ ಯತ್ನ ನಡೆಸಿದ್ದನು.
ಈ ವೇಳೆ ಬೆಂಗಳೂರಿನ ಮನೇಶ್ ರವಿ ಪರಿಚಯವಾಗಿದ್ದನು. ಆತನಿಗೆ ನಾಗಮಣಿ ಕತೆ ಹೇಳಿ ತಲೆ ಸವರಿದ ರಾಜು ಮತ್ತು ತಂಡ ಸುಮಾರು 30 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದನು. ನಾಗಮಣಿ ತನ್ನ ಬಳಿ ಬಂದರೆ ಶ್ರೀಮಂತನಾಗ ಬಹುದು ಎಂಬ ಆಶೆಗೆ ಬಿದ್ದಿದ್ದ ಮನೀಶ್ ರವಿ ನಾಗಮಣಿಯನ್ನು ಖರೀದಿಸಲು ಮುಂದಾಗಿದ್ದನು. ಹೀಗಾಗಿ ಖರೀದಿದಾರ ಮನೇಶ್ ರವಿಗೆ ಹಣದೊಂದಿಗೆ ಊರಿಗೆ ಬಂದು ಮಣಿಯನ್ನು ಕೊಂಡೊಯ್ಯುವಂತೆ ವಂಚಕ ರಾಜು ಹೇಳಿದ್ದನು.
ಖರೀದಿ ಮಾಡಿದ್ದು ನಕಲಿ ನಾಗಮಣಿ; ಮನೇಶ್ ರವಿ ಜುಲೈ 17ರಂದು ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ಕೊಳ್ಳೇಗಾಲದ ಕೌದಳ್ಳಿ ಗ್ರಾಮದ ಬಳಿಯ ಎಂ. ಜಿ. ದೊಡ್ಡಿ ಬಸ್ ನಿಲ್ದಾಣದ ಬಂದಿದ್ದನು. ಈ ವೇಳೆ ವಂಚಕರಾದ ರಾಜು, ತಂಗವೇಲು, ಸಣ್ಣಪ್ಪ ಗೌಡನೊಂದಿಗೆ ಸ್ಕಾರ್ಪಿಯೋ ಕಾರಿನಲ್ಲಿ ತೆರಳಿ ಮನೇಶ್ ರವಿಯನ್ನು ಕರೆದುಕೊಂಡು ಬಂದು ಅವರಿಗೆ ತನ್ನ ಬಳಿಯಲ್ಲಿದ್ದ ನಕಲಿ ನಾಗಮಣಿಯನ್ನು ನೀಡಿ ಹಣವನ್ನು ವಸೂಲಿ ಮಾಡಿಕೊಂಡು ಅಲ್ಲಿಂದ ಜಾಗ ಖಾಲಿಮಾಡಿದ್ದರು.
ಇತ್ತ ಖುಷಿಯಿಂದಲೇ ಮನೆಗೆ ನಾಗಮಣಿಯನ್ನು ಕೊಂಡೊಯ್ದ ಮನೇಶ್ ರವಿ ಬಳಿಕ ಪರಿಶೀಲಿಸಿದಾಗ ಅದು ನಕಲಿ ನಾಗಮಣಿ ಎಂಬುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ತಾನು ಮೂವತ್ತು ಲಕ್ಷ ರೂಪಾಯಿ ನಾಮ ಹಾಕಿಸಿಕೊಂಡಿರುವುದು ಕೂಡ ಅರಿವಿಗೆ ಬಂದಿದೆ.
ತಕ್ಷಣ ವಂಚಕ ರಾಜುವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ವಂಚಕರನ್ನು ಹುಡುಕಿಕೊಂಡು ಜುಲೈ 26 ರಂದು ಚಾಮರಾಜನಗರಕ್ಕೆ ಬಂದ ಮನೇಶ್ ರವಿ ಬೇರೆ ದಾರಿ ಕಾಣದೆ ರಾಮಾಪುರ ಪೊಲೀಸ್ಠಾಣೆಗೆ ದೂರು ನೀಡಿದ್ದಾರೆ.
ಇಬ್ಬರ ವಂಚಕರ ಸೆರೆ; ದೂರು ದಾಖಲಿಸಿಕೊಂಡ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಕೆ.ಎಸ್. ಸುಂದರ್ರಾಜ್ರವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಉಪವಿಭಾಗ ಪೊಲಿಸ್ ಉಪಾಧೀಕ್ಷಕ ನಾಗರಾಜು ಜಿ. ನೇತೃತ್ವದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ನಂಜುಂಡಸ್ವಾಮಿ ಹಾಗೂ ಸಬ್ ಇನ್ಸ್ ಪೆಕ್ಟರ್ ಮಂಜುನಾಥಪ್ರಸಾದ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿ ನಕಲಿ ನಾಗಮಣಿ ನೀಡಿ ವಂಚಿಸಿದ ವಂಚಕರಿಗಾಗಿ ಹುಡುಕಾಟ ಆರಂಭಿಸಲಾಗಿತ್ತು.
ಈ ನಡುವೆ ವಂಚಕರ ಹುಡುಕಾಟದಲ್ಲಿದ್ದ ತನಿಖಾ ತಂಡಕ್ಕೆ ಆರೋಪಿಗಳು ಒಂದೆಡೆ ಇರುವ ಬಗ್ಗೆ ಖಚಿತ ವರ್ತಾಮಾನ ದೊರೆತ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಆರೋಪಿಗಳಾದ ಸಣ್ಣಪ್ಪಗೌಡ ಮತ್ತು ತಂಗವೇಲು ಸಿಕ್ಕಿಬಿದ್ದಿದ್ದು, ಅವರ ಬಳಿಯಿಂದ ತಲಾ ಎರಡು ಲಕ್ಷದಂತೆ ನಾಲ್ಕು ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
Recommended Video
ಆದರೆ ಪ್ರಕರಣದ ಪ್ರಮುಖ ಆರೋಪಿ ರಾಜು ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಪ್ರಮುಖ ಆರೋಪಿ ರಾಜು ಅಲಿಯಾಸ್ ಪುಟ್ಟಸ್ವಾಮಿ ಆರಾಧ್ಯ ಸಿಕ್ಕಿಬಿದ್ದಿದ್ದೇ ಆದರೆ ಈ ವಂಚಕರು ನಾಗಮಣಿ ಹೆಸರಲ್ಲಿ ಇನ್ನೆಷ್ಟು ಮಂದಿಗೆ ನಾಮ ಹಾಕಿದ್ದಾರೆ ಎಂಬುದು ಗೊತ್ತಾಗಲಿದೆ.