ಬಂಡೀಪುರ: ಕ್ಷಣಾರ್ಧದಲ್ಲಿ ಪ್ರವಾಸಿಗರ ಮುಂದೆ ಕಾಡೆಮ್ಮೆಯನ್ನು ಚಪ್ಪರಿಸಿ ತಿಂದ ವ್ಯಾಘ್ರ, ವಿಡಿಯೋ ವೈರಲ್
ಚಾಮರಾಜನಗರ, ಜುಲೈ, 24: ಚಾಮರಾಜನಗರ ಜುಲ್ಲೆಯಲ್ಲಿ ಕಾಡುಪ್ರಾಣಿಳ ಹಾವಳಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಾಗೆಯೇ ಇದೀಗ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಭರ್ಜರಿ ಬೇಟೆ ಆಡಿ ಪ್ರವಾಸಿಗರ ಮುಂದೆ ಕಾಡೆಮ್ಮೆಯನ್ನು ಚಪ್ಪರಿಸಿ ತಿಂದಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಹಚ್ಚ ಹಸಿರಿನ ಹುಲ್ಲಿನ ಮೇಲೆ ವಿರಾಜಮಾನವಾದ ವ್ಯಾಘ್ರ ಕಾಡೆಮ್ಮೆಯ ಮಾಂಸವನ್ನು ಕಿತ್ತು ತಿನ್ನುತ್ತಿರುವ ರೋಮಾಂಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.

ಬಂಡೀಪುರದ ಕೆರೆ ಬಳಿ ಕಾಡೆಮ್ಮೆ ಬೇಟೆಯಾಡಿ ತಿನ್ನುತ್ತಿದ್ದು, ಪ್ರವಾಸಿಗರು ಎದುರಾದರೂ ಯಾವುದಕ್ಕೂ ಕೇರ್ ಮಾಡದೇ ಹಸಿವು ನೀಗಿಸಿಕೊಂಡಿದೆ. ಸಫಾರಿಗರ ಸದ್ದಿಗೆ ಸಫಾರಿಯಲ್ಲಿ ಪ್ರವಾಸಿಗರ ಕಣ್ಣಿಗೆ ಹುಲಿರಾಯ ರಸದೌತಣ ನೀಡಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.
ಸಿಡಿಮದ್ದು ಜಗಿದು ಜಾಂಬವಂತ ಸಾವು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಜಮೀನನಲ್ಲಿ ಹಂದಿಗಳ ಬೇಟೆಗೆ ಇಟ್ಟಿದ್ದ ನಾಡ ಸಿಡಿಮದ್ದು ಸಿಡಿದು ಕರಡಿ ಸಾವಿಗೀಡಾದ ಘಟನೆ ನಡೆದಿದೆ.
ಗ್ರಾಮದ ಮಹದೇವಪ್ಪ ಎಂಬುವರ ಮಗ ಮಹದೇವಸ್ವಾಮಿ ಎಂಬುವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಇಟ್ಟಿದ್ದ ಸಿಡಿಮದ್ದು ತಿನ್ನಲು ಹೋಗಿದ್ದ 6 ವರ್ಷ ವಯಸ್ಸಿನ ಗಂಡು ಕರಡಿಯ ಬಾಯಿಗೆ ಸಿಡಿದು ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ವಿಷಯ ತಿಳಿದ ಓಂಕಾರ್ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಇನ್ನು ಸಿಡಿಮದ್ದು ಇಟ್ಟಿದ್ದ ಜಮೀನು ಮಾಲೀಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕರಡಿಯ ಕಳೇಬರವನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದುಬಂದಿದೆ.
ವಾಹನ ಡಿಕ್ಕಿಯಾಗಿ ಜಾಂಬವಂತ ಸಾವು: ಚಿತ್ರದುರ್ಗ ನಗರದ ಹೊರವಲಯದಲ್ಲಿ ಹಾದುಹೋಗುವ ಕ್ಯಾದಿಗೆರೆ ಮತ್ತು ಸೀಬಾರ ರಾಷ್ಟ್ರೀಯ ಬೈಪಾಸ್ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಜಾಂಬವಂತ ಮೃತಪಟ್ಟ ಘಟನೆ ನಡೆದಿದೆ.
ತಮಟೆಕಲ್ಲು ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವಾಹನ ಕರಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶ ಹೊಂದಿಕೊಂಡಂತೆ ಸುತ್ತಮುತ್ತ ಬೃಹತ್ ಕಲ್ಲು ಬಂಡೆಗಳ ಗುಡ್ಡಗಾಡು ಇರುವುದರಿಂದ ವನ್ಯಜೀವಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಕರಡಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿದೆ.
ಇನ್ನು ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿಯಲ್ಲೇ ಕೊನೆಯುಸಿರೆಳೆದಿದೆ. ಮತ್ತೊಂದು ಕಡೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಿರತೆ, ಕರಡಿ, ಹುಲಿ, ಜಿಂಕೆ ಇನ್ನಿತರ ಕಾಡುಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಡುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸುವಂತೆ ಮಾಡಿದೆ












Click it and Unblock the Notifications