ವಿಷಪ್ರಸಾದ ಸೇವನೆ: ಹುಟ್ಟುಹಬ್ಬದಂದೇ ಸಾವನ್ನಪ್ಪಿದ ಬಾಲಕ
ಚಾಮರಾಜನಗರ, ಡಿಸೆಂಬರ್ 16: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗತ್ತಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ವಿಷ ಮಿಶ್ರಿತ ದೇವರ ಪ್ರಸಾದ ಸೇವಿಸಿ ಸಾವನ್ನಪ್ಪಿದವರನ್ನು ಕುಟುಂಬಸ್ಥರು ಮತ್ತು ಬಂಧುಗಳು ಸ್ವಗ್ರಾಮಗಳಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಿದರು.
ಬಿದರಹಳ್ಳಿ ಗ್ರಾಮದ ಗೋಪಿಯಮ್ಮ, ಶಾಂತರಾಜ್ ಗಾಡಸ್ಟ್ ನಗರದ ಪ್ರೀತಮ್ ಹಾಗೂ ವಡ್ಡರದೊಡ್ಡಿ ಗ್ರಾಮದ ಶಕ್ತಿವೇಲ್ ರ ಮೃತ ದೇಹವನ್ನು ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಬಿದರಹಳ್ಳಿ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು.
ಇನ್ನು ದೂಡ್ಡಾಣೆ ಗ್ರಾಮದ ಅಣ್ಣೆಯಪ್ಪ ಎಂಬುವರು ಶುಕ್ರವಾರ ದೇವಸ್ಥಾನದಲ್ಲಿ ಪೂಜೆ ಪ್ರಸಾದ ಸೇವಿಸಿ ಸ್ವ ಗ್ರಾಮಕ್ಕೆ ಹಿಂದಿರುಗಿ ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಅಸ್ವಸ್ಥಗೂಂಡು ಬಿದ್ದಿದ್ದನ್ನು ಕಂಡ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆ ಮಾಡಲಾಯಿತು.

ಹನೂರು ಸಮೀಪದ ತೋಮಿಯರ್ ಪಾಳ್ಯದ ರಾಚ್ಚಯ್ಯ ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಅವರನ್ನು ಶನಿವಾರ ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ತುಳಸಿಕೆರೆ ಗ್ರಾಮದ ದೊಡ್ಡ ಮಾದ್ದಯ್ಯನ ಶವವನ್ನು ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ಮಾಡಲಾಯಿತು. ಅಲ್ಲದೇ ಹಳೇಯೂರಿನ ಗ್ರಾಮದ ಶಿವಕುಮಾರನನ್ನು ಕೂಡ ಗ್ರಾಮದ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲಾಯಿತು.

ಪ್ರಸಾದ ಸೇವಿಸಿ ಮೃತಪಟ್ಟವರ ಪೈಕಿ ಬಿದರಹಳ್ಳಿ ಗ್ರಾಮದಲ್ಲಿ ಸುಮಾರು 4ಕ್ಕಿಂತ ಹೆಚ್ಚು ಜನ ಮೃತಪಟ್ಟ ಹಿನ್ನಲೆಯಲ್ಲಿ ನೀರವಮೌನ ಆವರಿಸಿದೆ. ಜತೆಗೆ ತಮ್ಮವರನ್ನು ಕಳೆದುಕೊಂಡ ಕುಟಂಬದ ಸದಸ್ಯರು ಹಾಗೂ ಸಂಬಂಧಿಕರ ರೋದನ ಮಾತ್ರ ನಿಂತಿಲ್ಲ.

ತುಂಬಾ ನೋವಾಗುವ ವಿಷಯ ಏನೆಂದರೆ ಬಿದರಹಳ್ಳಿ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಪ್ರೀತಮ್ ಓಂಶಕ್ತಿ ಮಾಲೆಧಾರಿಯಾಗಿದ್ದ ಹಿನ್ನಲೆಯಲ್ಲಿ ತನ್ನ ಕುಟಂಬದವರೊಂದಿಗೆ ಶುಕ್ರವಾರ ಸುಳ್ವಾಡಿಯ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದ್ದು ಇದರಿಂದ ಅಸ್ವಸ್ಥನಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಹುಟ್ಟುಹಬ್ಬದ ದಿನದಂದೇ ಮೃತಪಟ್ಟಿರುವುದು ಮಾತ್ರ ಹೃದಯ ವಿದ್ರಾವಕವಾಗಿದೆ.












Click it and Unblock the Notifications