ಗುಂಡ್ಲುಪೇಟೆ: ಸಿಎಂ ಉದ್ಘಾಟನೆ ಮಾಡಿದ್ದೇ ಬಂತು, ನೀರು ಮಾತ್ರ ಬರಲಿಲ್ಲ
Recommended Video
ಚಾಮರಾಜನಗರ, ಸೆಪ್ಟೆಂಬರ್ 14: ಉಪಚುನಾವಣೆ ಸಂದರ್ಭ ಮತದಾರರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೀತಾಮಹದೇವಪ್ರಸಾದ್ ಅವರನ್ನು ಸಚಿವರನ್ನಾಗಿ ಮಾಡಿದ್ದಲ್ಲದೆ, ಬಹು ನಿರೀಕ್ಷಿತ ಯೋಜನೆಯಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಕೆಲವು ದಿನಗಳ ಹಿಂದೆಯಷ್ಟೆ ಚಾಲನೆ ನೀಡಿ ಹೋಗಿದ್ದಾರೆ. ಆದರೆ ಆಗಿದ್ದೇನು ಗೊತ್ತಾ?
ಡ್ಲುಪೇಟೆಯಲ್ಲಿ ಒಡೆದ ದೊಡ್ಡಕೆರೆ ಏರಿ: ರೈತರ ಆಕ್ರೋಶ
ಸದಾ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಗುಂಡ್ಲುಪೇಟೆ ವ್ಯಾಪ್ತಿಯ ಹಲವು ಗ್ರಾಮಗಳ ಜನ ಇನ್ನೇನು ಮನೆ ಬಾಗಿಲಿಗೆ ನೀರು ಬಂತು ತಮ್ಮ ಸಮಸ್ಯೆ ಬಗೆಹರಿಯಿತೆಂದೇ ಖುಷಿಪಟ್ಟಿದ್ದರು. ಇದೀಗ ಯೋಜನೆಗೆ ಚಾಲನೆ ನೀಡಿ ಎರಡು ವಾರಗಳೇ ಕಳೆದಿದ್ದರೂ ನೀರು ಮನೆ ಬಾಗಿಲಿಗೆ ಬಂದಿಲ್ಲ. ಹೀಗಾಗಿ ಜನ ಬೆಳಗ್ಗೆ ಎದ್ದು ನೀರಿಗಾಗಿ ಕೊಡ ಹಿಡಿದು ಅಲೆದಾಡುವುದು ತಪ್ಪಿಲ್ಲ.
ಬಹು ಮಹತ್ವಾಕಾಂಕ್ಷೆಯ ಯೋಜನೆ
ಹಾಗೆ ನೋಡಿದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬೃಹತ್ ಯೋಜನೆಯಾಗಿದ್ದು, ಇದರ ಸದುಪಯೋಗವನ್ನು ತಾಲೂಕಿನ ಎಲ್ಲಾ 134 ಗ್ರಾಮಗಳು ಪಡೆದುಕೊಳ್ಳಲಿವೆ. ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ.
ಚುನಾವಣೆ ವೇಳೆ ನೀಡಿದ್ದ ಭರವಸೆ
ಕಳೆದ ಉಪಚುನಾವಣೆ ಸಂದರ್ಭ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಗ್ರಾಮಗಳಿಗೆ ತೆರಳಿದಾಗಲೆಲ್ಲ ಖಾಲಿ ಕೊಡ ಹಿಡಿದು ನೀರಿಗಾಗಿ ಪರದಾಡುತ್ತಿದ್ದ ಜನ ಕಾಣಿಸಿದ್ದರು. ಈ ಸಂದರ್ಭ ಎಲ್ಲರಿಗೂ ಕುಡಿಯುವ ನೀರನ್ನು ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಅಸ್ತಿತ್ವದಲ್ಲಿದ್ದ ಯೋಜನೆಗೆ ವೇಗ ನೀಡಿ ಮುಗಿಸಲಾಯಿತು. ಅಷ್ಟೇ ಅಲ್ಲದೆ ಆಗಸ್ಟ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಚಾಲನೆ ನೀಡಿಯೂ ಆಗಿದೆ. ಆದರೆ ಇನ್ನೂ ಕೂಡ ಎಲ್ಲ ಗ್ರಾಮಗಳಿಗೂ ನೀರು ತಲುಪುತ್ತಿಲ್ಲ ಎಂಬ ಆರೋಪ ಕೇಳಿ ಬರತೊಡಗಿದೆ.
ನೀರು ಬಂದಿಲ್ಲ.. ಪರದಾಟ ತಪ್ಪಿಲ್ಲ..
ಈ ಯೋಜನೆಗೆ ಒಳಪಡುವ ತಾಲೂಕಿನ ಕಗ್ಗಳ, ಶಿಂಡನಪುರ, ಕೊಡಸೋಗೆ, ಬೊಮ್ಮಲಾಪುರ, ಚಿಕ್ಕತುಪ್ಪೂರು, ಬನ್ನೀತಾಳಪುರ, ಇಂಗಲವಾಡಿ ಸೇರಿದಂತೆ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಬಹುತೇಕ ಗ್ರಾಮಗಳಿಗೆ ಇನ್ನೂ ಕೂಡ ನೀರು ತಲುಪಿಲ್ಲ. ಹೀಗಾಗಿ ಇಲ್ಲಿನವರು ನೀರಿಗಾಗಿ ಕೊಡ ಹಿಡಿದು ಕಿ.ಮೀ.ಗಟ್ಟಲೆ ನಡೆಯುವುದು ಮಾಮೂಲಾಗಿದೆ. ತಮ್ಮ ಮನೆ ಬಳಕೆ ಮಾತ್ರವಲ್ಲದೆ ಜಾನುವಾರುಗಳಿಗೂ ನೀರು ಒದಗಿಸಬೇಕಾಗಿರುವುದರಿಂದ ಸೈಕಲ್, ಬೈಕ್ಗಳಲ್ಲಿ ನೀರಿಗಾಗಿ ಓಡಾಡುವುದು ಕಂಡು ಬರುತ್ತಿದೆ.
ದಿ. ಮಹದೇವ ಪ್ರಸಾದ್ ಕನಸಿನ ಯೋಜನೆ
ಬಹುಗ್ರಾಮ ನೀರಿನ ಯೋಜನೆ ಸಚಿವ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರ ಕನಸಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆಯೇ ಇದನ್ನು ಆರಂಭಿಸಲಾಗಿತ್ತು. ಇದೀಗ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಗಮನಹರಿಸಿ ಎಲ್ಲ ಗ್ರಾಮಕ್ಕೂ ಇದರ ಉಪಯೋಗ ತಲುಪುವಂತೆ ಮಾಡಬೇಕಾಗಿದೆ.
ಈಗಾಗಲೇ ಸರಬರಾಜಾಗುವ ಪೈಪ್ನ ವಾಲ್ ದುಸ್ಥಿತಿಗೀಡಾಗಿ ನೀರು ಪೋಲಾಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ ಆದ್ದರಿಂದ ಸಚಿವರಾದ ಗೀತಾ ಮಹದೇವಪ್ರಸಾದ್ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ.