ಗುಂಡ್ಲುಪೇಟೆಯಲ್ಲಿ ಒಡೆದ ದೊಡ್ಡಕೆರೆ ಏರಿ: ರೈತರ ಆಕ್ರೋಶ
ಚಾಮರಾಜನಗರ, ಸೆಪ್ಟೆಂಬರ್ 9: ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳು ತುಂಬಿದ್ದರೆ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದೊಡ್ಡಕೆರೆ ಏರಿ ಮತ್ತೊಮ್ಮೆ ಒಡೆದು ನೀರು ಪೋಲಾಗುತ್ತಿದೆ. ಅಷ್ಟೇ ಅಲ್ಲ, ಬೆವರು ಸುರಿಸಿದ ಬೆಳೆದ ರೈತರ ಬೆಳೆಗಳೆಲ್ಲ ನೀರಿನ ಕೋಡಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ.
ದೊಡ್ಡಕೆರೆ ಏರಿ ಕೆಲ ತಿಂಗಳ ಹಿಂದೆಯೇ ಒಡೆದು ಹೋಗಿತ್ತು. ಇದನ್ನು ಮರಳು ಮೂಟೆಯಿಟ್ಟು ಮಣ್ಣು ಹಾಕಿ ಕಟ್ಟಿ ಸರಿಪಡಿಸಲಾಗಿತ್ತು. ಆದರೂ ನೀರು ಸೋರಿಕೆಯಾಗಿತ್ತು. ಆಗಲೇ ಅಧಿಕಾರಿಗಳು ಗಮನಹರಿಸಿ ಕಾಂಕ್ರಿಟ್ ಹಾಕಿ ಗಟ್ಟಿಗೊಳಿಸಿದ್ದರೆ ಕೆರೆ ಏರಿ ಒಡೆಯುತ್ತಿರಲಿಲ್ಲ.

ಮಳೆ ಕಡಿಮೆಯಾಗಿದ್ದರಿಂದ ಏನೂ ಆಗಲ್ಲ ಎಂದು ನಂಬಿದ್ದರಿಂದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು. ಅದರ ಪರಿಣಾಮವೇ ದೊಡ್ಡಕೆರೆ ಏರಿ ಮತ್ತೊಮ್ಮೆ ಮಳೆ ನೀರು ಹರಿದು ಬಂದು ತುಂಬಿದ್ದರಿಂದ ಒಡೆದಿದೆ. ಪರಿಣಾಮ ಬೆಳೆ ನಾಶವಾಗಿದೆ.
ಇದನ್ನು ಖಂಡಿಸಿ ರೈತರು, ಗ್ರಾಮಸ್ಥರು ರಸ್ತೆ ತಡೆ ನಡೆಸಿ ಚಾಮರಾಜನಗರದಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಕೆರೆಯ ಏರಿ ದುರಸ್ಥಿಯಲ್ಲಿದ್ದು, ಮೂರು ತಿಂಗಳ ಹಿಂದೆಯೂ ಕೆರೆಯ ಏರಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಈ ಬಗ್ಗೆ ದುರಸ್ಥಿ ಕಾರ್ಯ ಮಾಡುವಂತೆ ಅಲ್ಲಿನ ಸ್ಥಳೀಯರು ಅಧಿಕಾರಿಗಳಿಗೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ.

ಒಂದು ವಾರದಿಂದ ಮತ್ತೆ ಮಳೆಯಾಗುತ್ತಿರುವುದರಿಂದ ಕೆರೆ ತುಂಬಿ, ಏರಿ ಒಡೆದಿದ್ದು, ಆಸುಪಾಸಿನ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ ಎಂದು ಆರೋಪಿಸಿದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಸಿದ್ದು, ಶೀಘ್ರವೇ ಕೆರೆಯ ಏರಿ ದುರಸ್ತಿಪಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಸದ್ಯಕ್ಕೆ ಹಿಂತೆಗೆದುಕೊಳ್ಳಲಾಗಿದೆ.












Click it and Unblock the Notifications