ಮಕ್ಕಳನ್ನು ಗೂಡ್ಸ್ ವಾಹನಕ್ಕೆ ತುಂಬಿದ ಆಯೋಜಕರು!
ಚಾಮರಾಜನಗರ, ಆಗಸ್ಟ್ 25: ಮಕ್ಕಳನ್ನು ಟೆಂಪೋ, ಗೂಡ್ಸ್ ಆಟೋಗಳಲ್ಲಿ ಕುರಿಗಳ ರೀತಿ ತುಂಬಿಸಿ ಕರೆದೊಯ್ದು ಅವಘಡಗಳು ನಡೆದಿರುವುದಕ್ಕೆ ನಿದರ್ಶನವಿದೆ. ಈ ರೀತಿ ಮಕ್ಕಳನ್ನು ಕರೆದೊಯ್ಯಬಾರದು ಎಂಬ ಕಾನೂನು ಇದ್ದರೂ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಆಯೋಜಕರು ಅದನ್ನು ಗಾಳಿಗೆ ತೂರಿದ್ದಾರೆ.
ಗುಂಡ್ಲುಪೇಟೆ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ವಿದ್ಯಾರ್ಥಿಗಳನ್ನು ಕ್ರೀಡಾಕೂಟ ಮುಗಿದ ನಂತರ ಕುರಿಗಳಂತೆ ಗೂಡ್ಸ್ ಆಟೋದಲ್ಲಿ ತುಂಬಿ, ಗ್ರಾಮಗಳಿಗೆ ಕಳುಹಿಸಿಕೊಟ್ಟಿದ್ದಾರೆ.[ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ]
ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ 14 ರಿಂದ 17 ವರ್ಷದ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟ ಮುಗಿದ ನಂತರ ಮಕ್ಕಳನ್ನು ಬಸ್ಸು ಅಥವಾ ಸುರಕ್ಷಿತ ವಾಹನದಲ್ಲಿ ಕಳುಹಿಸಬೇಕಾಗಿದ್ದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗೂಡ್ಸ್ ಆಟೋದಲ್ಲಿ ಕಳುಹಿಸಿ, ಕೈ ತೊಳೆದುಕೊಂಡಿದ್ದಾರೆ.[ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು]
ಸುತ್ತಮುತ್ತಲಿನ ಹಲವು ಗ್ರಾಮಗಳ ಶಾಲೆಗಳಿಂದ ಉತ್ಸುಕರಾಗಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳು ಕ್ರೀಡಾಕೂಟ ಮುಗಿದ ಬಳಿಕ ತಮ್ಮ ಊರುಗಳಿಗೆ ತೆರಳಲು ಪರದಾಡುತ್ತಿದ್ದರು. .ಈಗಾಗಲೇ ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳು ಪ್ರಯಾಣಿಸಿ ಜೀವ ಕಳೆದುಕೊಂಡಿರುವ ಘಟನೆಗಳು ನಮ್ಮ ಮುಂದೆ ಬೇಕಾದಷ್ಟಿವೆ. ಸುಶಿಕ್ಷಿತರೇ ಈ ರೀತಿ ಮಾಡಿದರೆ ಹೇಗೆ ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ.