ಕಾಂಗ್ರೆಸ್ನಿಂದ ಗೂಂಡಾ ವರ್ತನೆ: ಬಿ.ವೈ.ವಿಜಯೇಂದ್ರ ಹೀಗೆ ಗಂಭೀರ ಆರೋಪ ಮಾಡಿದ್ದೇಕೆ?-ಮಾಹಿತಿ, ವಿವರ
ಚಾಮರಾಜನಗರ, ಏಪ್ರಿಲ್, 11: ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಅಲ್ಲದೆ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ.ಇದೀಗ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹತಾಶೆಗೊಂಡು ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಸಿ.ಎನ್.ಮಂಜುನಾಥ್ ಅಭ್ಯರ್ಥಿ ಆಗಿರುವುದನ್ನು ತಡೆಯಲಾರದೇ ಕಾಂಗ್ರೆಸ್ ಪಕ್ಷದ ಮುಖಂಡರು ಹತಾಶೆಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಮನಿ ಪವರ್, ಮಸಲ್ ಪವರ್ನಿಂದ ಚುನಾವಣೆ ಗೆಲ್ಲಬಹುದು ಎಂದುಕೊಂಡಿದ್ದು, ಇದಕ್ಕೆ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಎನ್ಡಿಎ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇವೆ. ಯಾರ ಫೋಟೋ ಹಾಕಬೇಕು, ಹಾಕಬಾರದು ಎಂಬುದನ್ನು ನಾವು ತೀರ್ಮಾನ ಮಾಡುತ್ತೇವೆ. ಯಾರಿಂದಲೂ ಪಾಠ ಕೇಳುವ ಅವಶ್ಯಕತೆ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ಫೋಟೋ ಹೇಳಿಕೆಗೆ ತಿರುಗೇಟು ಕೊಟ್ಟರು.
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಜನರೇ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಯಾರೇ ಬಂದರೂ ತಡೆಯಲು ಆಗುವುದಿಲ್ಲ. ಇನ್ನು, ಚಾಮರಾಜನಗರದಲ್ಲಿ ಬಾಲರಾಜು ಅವರು ಸಜ್ಜನ ರಾಜಕಾರಣಿ ಆಗಿದ್ದು, ಗೆದ್ದೇ ಗೆಲ್ಲುತ್ತಾರೆ. ವಿ.ಶ್ರೀನಿವಾಸ ಪ್ರಸಾದ್ ಅವರು ಕೂಡ ನಮ್ಮ ಜೊತೆ ಇದ್ದಾರೆ ಎಂದರು.
ಸಚಿವರ ವಿರುದ್ಧ ಬಿಜೆಪಿ ಅಭ್ಯರ್ಥಿ ಕಿಡಿ: ಸಮಾಜ ಕಲ್ಯಾಣ ಇಲಾಖೆ ಸಚಿವ ದಲಿತರಿಗೇನೂ ಮಾಡಿಲ್ಲ, ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗೆ ಕೊಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಾಲರಾಜು ಆರೋಪ ಮಾಡಿದ್ದಾರೆ.
ಹನೂರಿನಲ್ಲಿ ವಿಜಯೇಂದ್ರ ನಡೆಸಿದ್ದ ರೋಡ್ ಶೋ ವೇಳೆ ಮಾತನಾಡಿದ ಅವರು, ಸಂವಿಧಾನದ ಪರವಾಗಿ ಮಹಾದೇವಪ್ಪ ಒಂದೇ ಒಂದು ಕೆಲಸ ಮಾಡಿಲ್ಲ. ಸಂವಿಧಾನದ ಹೆಸರಲ್ಲಿ ದಲಿತರ ಕಲ್ಯಾಣ ಮಾಡಿಲ್ಲ, ಇರುವ ಸಚಿವಗಿರಿಯನ್ನೇ ಕರೆಕ್ಟಾಗಿ ಮಾಡಿ ಎಂದು ಕಿಡಿಕಾರಿದರು.
ಸಚಿವಗಿರಿಯೂ ನಿಮಗೆ ಬೇಕು, ಶಾಸಕ ಸ್ಥಾನವು ನಿಮಗೆ ಬೇಕು, ಎಂಪಿ ಸ್ಥಾನವು ನಿಮಗೆ ಬೇಕು. ಯಾಕೆ ಪಕ್ಷದಲ್ಲಿ ಯಾರೂ ಕಾರ್ಯಕರ್ತರು ಇರಲಿಲ್ಲವಾ.? ಪಕ್ಷಕ್ಕಾಗಿ ದುಡಿದವರು ಯಾರೂ ಇರಲಿಲ್ಲವಾ.? ಎಂದು ಪ್ರಶ್ನಿಸುವ ಮೂಲಕ ಸುನಿಲ್ ಬೋಸ್ಗೆ ಕೈ ಟಿಕೆಟ್ ಕೊಟ್ಟಿರುವುದನ್ನು ಟೀಕಿಸಿದರು.












Click it and Unblock the Notifications