ಗುಂಡ್ಲುಪೇಟೆಯಲ್ಲಿ 'ಗುಂಡು' ಮಾರಾಟಕ್ಕೆ ಗ್ರಾಮಸ್ಥರ ಆಕ್ರೋಶ
ಚಾಮರಾಜನಗರ, ನವೆಂಬರ್ 20: ತಾಲೂಕಿನ ಬೇಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪ್ರಾರಂಭವಾಗಿರುವ ಮದ್ಯದಂಗಡಿಯು ಮುಂಜಾನೆ 6.30ಕ್ಕೆ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ ಮಳಿಗೆಯ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ.
ನ.19ರ ಮುಂಜಾನೆ 6.30ರಲ್ಲಿ ಮದ್ಯದಂಗಡಿಯ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದುದನ್ನು ಕಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಕರೆ ಮಾಡಿ ನಿಯಮಬಾಹಿರವಾಗಿ ವ್ಯಾಪಾರ ನಡೆಸುತ್ತಿರುವ ವಿಷಯ ತಿಳಿಸಿದ್ದಲ್ಲದೆ, ಬಾಗಿಲು ಹಾಕಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುಚ್ಚಿಸಿದರು.

ಗ್ರಾಮದ ಸಾರಿಗೆ ಬಸ್ ನಿಲ್ದಾಣ, ಕೆರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹತ್ತಿರದಲ್ಲೇ ಮದ್ಯದಂಗಡಿ ಸ್ಥಾಪನೆ ಮಾಡಿರುವುದರಿಂದ ಮಹಿಳೆಯರು, ರೋಗಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಅಲ್ಲದೆ ಕಳೆದ ವರ್ಷ ಕೆರೆಬಿದ್ದು ಮೂವರು ಕುಡುಕರು ಸಾವಿಗೀಡಾಗಿದ್ದಾರೆ. ಇದರಿಂದ ತೊಂದರೆಯಾಗುತ್ತದೆ ಎಂಬ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸುತ್ತಲೇ ಬಂದಿದ್ದರಲ್ಲದೆ, ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ, ಅಬ್ಕಾರಿ ಇಲಾಖೆ ಹಾಗೂ ಗ್ರಾಮಪಂಚಾಯಿತಿಗಳಿಗೆ ಮನವಿ ಮಾಡಿದ್ದರು.

ಆದರೆ ಇದ್ಯಾವುದಕ್ಕೂ ಕಿಮ್ಮತ್ತೇ ಸಿಗಲಿಲ್ಲ. ಕೊನೆಗೂ ಗ್ರಾಮಸ್ಥರ ವಿರೋಧದ ನಡುವೆಯೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಯಿತು. ಆದರೆ ಇನ್ನೂ ನಾಮಫಲಕ ಅಳವಡಿಸಿಲ್ಲ. ಸನ್ನದುದಾರರ ವಿವರವನ್ನು ಹಾಕಿಲ್ಲ. ಇದ್ಯಾವುದನ್ನೂ ಮಾಡದೆ ಮುಂಜಾನೆ ಆರು ಗಂಟೆಯಿಂದ ಮಧ್ಯರಾತ್ರಿಯವರೆಗೂ ಬಾಗಿಲು ತೆರೆದು ಮದ್ಯಮಾರಾಟ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮದ್ಯದಂಗಡಿಯಿಂದ ಮಕ್ಕಳು, ಮಹಿಳೆಯರು, ರೋಗಿಗಳು ಹೀಗೆ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮದ್ಯಮಾರಾಟ ಜೋರಾಗಿಯೇ ನಡೆಯುತ್ತಿದೆ.












Click it and Unblock the Notifications