ಚಾಮರಾಜನಗರ; ನಗರಸಭೆಯಿಂದ ಕಳಪೆ ಧ್ವಜ ಪೂರೈಕೆ, ವರ್ತಕರ ಆಕ್ರೋಶ
ಚಾಮರಾಜನಗರ, ಆಗಸ್ಟ್, 10: ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 'ಹರ್ ಘರ್ ತಿರಂಗ' ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅಭಿಯಾನದ ಪ್ರಯುಕ್ತ ಧ್ವಜಗಳನ್ನು ಹಾರಿಸಲು ಮುಂದಾದ ವರ್ತಕರಿಗೆ ಜಿಲ್ಲೆಯ ನಗರಸಭೆ ಕಳಪೆ ಧ್ವಜ ಪೂರೈಸಿ ಎಡವಟ್ಟು ಮಾಡಿದೆ.
ವರ್ತಕರ ಸಂಘ 5 ಸಾವಿರ ಹಣ ಕೊಟ್ಟು ನಗರಸಭೆಯಿಂದ 200ಕ್ಕೂ ಹೆಚ್ಚು ಧ್ವಜಗಳನ್ನು ತರಿಸಿಕೊಂಡಿತ್ತು. ಆದರೆ ವರ್ತಕರ ಕೈ ಸೇರಿದ್ದು ಹಾಳಾಗಿದ್ದ ಧ್ವಜಗಳು. ಹರಿದ, ಅಳತೆಯಲ್ಲಿ ಏರುಪಾರಾಗಿರುವ, ಬಣ್ಣ ಮಾಸಿದ ಧ್ವಜಗಳನ್ನು ಪೂರೈಸಿದ ನಗರಸಭೆ ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ.
ಧ್ವಜ ಖರೀದಿಸದಿದ್ದರೆ ಪಡಿತರವಿಲ್ಲ ವಿಡಿಯೋ: ವರುಣ್ ಗಾಂಧಿ ಆಕ್ರೋಶ?
ಈ ಸಂಬಂಧ ವರ್ತಕರ ಸಂಘದ ಚಿದಾನಂದ ಗಣೇಶ್ ಮಾತನಾಡಿ, "ನಗರಸಭೆಯಿಂದ ಎಲ್ಲಾ ವರ್ತಕರಿಗೆ ವಿತರಿಸಲು 200ಕ್ಕೂ ಹೆಚ್ಚು ಧ್ವಜಗಳನ್ನು ಕೊಂಡಿದ್ದೆವು. 200ರಲ್ಲಿ 20 ಧ್ವಜಗಳು ಹಾರಿಸಲು ಯೋಗ್ಯವಾಗಿಲ್ಲ. ನಗರಸಭೆ ಸಿಬ್ಬಂದಿ ಹೇಗೆ ತಂದಿದ್ದಾರೋ?, ಧ್ವಜ ಮಾಡುವವರು ಎಷ್ಟು ನಿರ್ಲಕ್ಷ್ಯವಹಿಸಿದ್ದಾರೋ?" ಎಂದು ಆಕ್ರೋಶ ಹೊರಹಾಕಿದರು.
"ಹರ್ ಘರ್ ತಿರಂಗ ಅಭಿಯಾನದಲ್ಲಿ ಪಾಲ್ಗೊಳ್ಳಲೇಬೇಕೆಂದು ಖಾದಿ ಭಂಡಾರದಲ್ಲಿ ಧ್ವಜಗಳನ್ನು ಖರೀದಿಸಲು ಮುಂದಾಗಿದ್ದೇವೆ. ದೇಶದ ಧ್ವಜದ ಬಗ್ಗೆ ನಗರಸಭೆ ಸಿಬ್ಬಂದಿ ಇಷ್ಟು ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಪಾಲಿಮರ್ ಧ್ವಜ ಬೇಡವೆಂದು ಹಲವರು ಪ್ರತಿಭಟಿಸುತ್ತಿರುವ ಹೊತ್ತಿನಲ್ಲಿ ಹಾರಿಸದಂತಹ ಸ್ಥಿತಿಯಲ್ಲಿರುವ ಧ್ವಜ ಪೂರೈಸಿರುವುದು ವಿಪರ್ಯಾಸವಾಗಿದೆ" ಎಂದು ಅಸಮಾಧಾನ ಹೊರಹಾಕಿದರು.
ಇನ್ನೇನು ಸ್ವಾಂತಂತ್ರ್ಯ ದಿನಾಚರಣೆ ಮೂರ್ನಾಲ್ಕು ದಿನ ಇರುವಾಗಲೇ ಇಂತಹ ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದೇಶಪ್ರೇಮ ಮೆರೆಯಲು ನಾವೆಲ್ಲರೂ ಸಿದ್ದರಾಗಿ ಧ್ವಜಗಳನ್ನು ಖರೀದಿಸಿದ್ದೇವೆ ಎದು ವರ್ತಕರು ಹೇಳಿದ್ದಾರೆ.
ಆದರೆ ಖರೀದಿಸಿದ ಧ್ವಜಗಳಲ್ಲಿ 20 ಧ್ವಜಗಳು ಹಾಳಾಗಿರುವುದು ದೇಶಕ್ಕೆ ಅವಾಮಾನ ಮಾಡಿದಂತೆ ಎಂದು ನಗರದ ವರ್ತಕರು ನಗರಸಭೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.