ಒಡೆಯರಪಾಳ್ಯದ ಟಿಬೇಟಿಯನ್ ಕ್ಯಾಂಪ್ ಗೆ ಬಿಗಿ ಪೊಲೀಸ್ ಬಂದೋಬಸ್ತ್
ಚಾಮರಾಜನಗರ, ಅಕ್ಟೋಬರ್.05: ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಒಡೆಯರಪಾಳ್ಯದಲ್ಲಿರುವ ಟಿಬೇಟಿಯನ್ ಕ್ಯಾಂಪ್ ಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬೌದ್ಧ ಧರ್ಮದ ಧರ್ಮಗುರು ದಲೈಲಾಮರವರನ್ನು ಉಗ್ರಗಾಮಿಗಳು ಹತ್ಯೆ ಮಾಡಲು ಸಂಚು ರೂಪಿಸಿದ್ದನ್ನು ಕೇಂದ್ರ ಭದ್ರತಾ ದಳ ಭೇದಿಸಿ, ರಾಜ್ಯದ ರಾಮನಗರದಲ್ಲಿ ಉಗ್ರಗಾಮಿಯನ್ನು ಬಂಧಿಸಿದ ಹಿನ್ನಲೆಯಲ್ಲಿ ಟಿಬೇಟಿಯನ್ ಕ್ಯಾಂಪ್ ಗಳಿಗೂ ಉಗ್ರಗಾಮಿಗಳು ದಾಳಿ ನಡೆಸಬಹುದೆಂಬ ಶಂಕೆಯ ಮೇಲೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಭೇಟಿ ನೀಡಿ ರಕ್ಷಣಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಕ್ಯಾಂಪಸ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಒಡೆಯರ್ ಪಾಳ್ಯದಲ್ಲಿರುವ ಟಿಬೇಟಿಯನ್ ಕ್ಯಾಂಪ್ ಗೆ ಬೌದ್ಧ ಧರ್ಮದ ಅನೇಕ ಧರ್ಮಗುರುಗಳು ಆಗಮಿಸುತ್ತಿದ್ದಾರೆ.

ಅದರಲ್ಲೂ ದಲೈಲಾಮರವರು ಟಿಬೇಟಿಯನ್ನರಿಗೆ ಪ್ರವಚನ ಹಾಗೂ ಸಂದೇಶಗಳನ್ನು ನೀಡಿ ಹೋಗಿದ್ದರು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಇಲ್ಲಿಗೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಕ್ಯಾಂಪಸ್ ಸುತ್ತ ಮುತ್ತಲು ಅನುಮಾನಸ್ಪದ ವ್ಯಕ್ತಿಗಳ ಸುಳಿದಾಟ ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಇದೇ ವೇಳೆ ಕ್ಯಾಂಪಸ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲು ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ ಹಾಗೂ ಹನೂರು ಸರ್ಕಲ್ ಇನ್ಸ್ ಪೆಕ್ಟರ್ ಪರಶುರಾಮ ಅವರಿಗೆ ಸೂಚನೆ ನೀಡಿದರು.
ಟಿಬೇಟಿಯನ್ನರು ಯಾವುದೇ ಭೀತಿಯಿಲ್ಲದೆ ಮುಕ್ತವಾಗಿ ಸಂಚಾರ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಲು ಬೇಕಾದ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications