ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಈ ಬಾರಿಯೂ ಭಕ್ತರಿಗೆ ಪ್ರವೇಶವಿಲ್ಲ
ಚಾಮರಾಜನಗರ, ಜನವರಿ 13: ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ಪ್ರಸಿದ್ಧ ಜಾತ್ರೆಯಲ್ಲೊಂದಾದ ಹನೂರು ವ್ಯಾಪ್ತಿಯ ಚಿಕ್ಕಲ್ಲೂರು ಜಾತ್ರೆ (ಜ.17 ರಿಂದ 21)ಗೆ ಈ ಬಾರಿಯೂ ಕೊರೊನಾ ಕಂಟಕವಾಗಿರುವುದರಿಂದ ಜಾತ್ರೆ ಸಂಬಂಧ ಸಾಂಪ್ರದಾಯಿಕ ವಿಧಿ ವಿಧಾನಗಳು ಮಾತ್ರ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಬಾರಿ ಜಾತ್ರೆಯನ್ನು ರದ್ದುಪಡಿಸಿ ಜಿಲ್ಲಾಡಳಿತ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಜಾತ್ರೆ ನಡೆಸಲು ಅನುಮತಿ ಕೋರಿ ಮನವಿ ಮಾಡಿರುವ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಪೂಜೆಗೆ ಕೋವಿಡ್ ನಿಯಮ ಪಾಲಿಸಿ ನಡೆಸಲು ಅವಕಾಶ ನೀಡಿರುವುದಾಗಿ ತಿಳಿದು ಬಂದಿದೆ.

ಜಾತ್ರೆ ಮೇಲೆ ಕೊರೊನಾ ಕರಿನೆರಳು
ಕೋವಿಡ್ಗೆ ಮುನ್ನ ಜಿಲ್ಲೆಯ ಮತ್ತು ಹೊರ ಜಿಲ್ಲೆಯವರು ಸೇರಿ ಅದ್ಧೂರಿಯಾಗಿ ಚಿಕ್ಕಲ್ಲೂರು ಜಾತ್ರೆಯನ್ನು ಆಚರಿಸುತ್ತಿದ್ದರು. ಸಿದ್ದಪ್ಪಾಜಿ ದೇವಸ್ಥಾನ ಆವರಣದಲ್ಲಿ ಮಂಡೋಲೋತ್ಸವ ಮತ್ತು ಮಾರನೆಯ ದಿನ ಬಾಡೂಟದ ಪಂಕ್ತಿ ಸೇವೆಯೂ ನಡೆಯುತ್ತಿತ್ತು. ಜಾತ್ರೆ ವೇಳೆ ಕೋಳಿ, ಮೇಕೆಗಳ ಬಲಿಯೂ ನಡೆಯುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಬಲಿ ಕೊಡುವುದನ್ನು ತಡೆಯಲಾಗಿತ್ತು. ಆದರೂ ಜಾತ್ರೆ ಅದ್ಧೂರಿಯಾಗಿಯೇ ನಡೆದುಕೊಂಡು ಬಂದಿತ್ತು. ಆದರೆ ಕೊರೊನಾ ಕಾಣಿಸಿಕೊಂಡ ಬಳಿಕ ಜಾತ್ರೆ ಮೇಲೆ ಕರಿನೆರಳು ಬಿದ್ದಿತ್ತು. ಈ ಬಾರಿ ಜಾತ್ರೆ ನಡೆಸುವಂತೆ ಚಾಮರಾಜನಗರ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಜಾತ್ರೆ ವೇಳೆ ನಡೆಯುತ್ತಿದ್ದ ಸಾಂಪ್ರದಾಯಿಕ ಚಂದ್ರ ಮಂಡೋಲೋತ್ಸವಕ್ಕೆ ಜಿಲ್ಲಾಧಿಕಾರಿ ಅವಕಾಶ ನೀಡಿದ್ದಾರೆ ಎನ್ನಲಾಗಿದೆ.

ಶಾಸಕ ಆರ್. ನರೇಂದ್ರ ಹೇಳಿದ್ದೇನು?
ಈ ಸಂಬಂಧ ಮಾಹಿತಿ ನೀಡಿರುವ ಶಾಸಕ ಆರ್. ನರೇಂದ್ರ, ಕಳೆದ ಹಲವು ದಶಕಗಳಿಂದ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಜಾತ್ರಾ ನಡೆಯುತ್ತಿದೆ. ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿ, ವಿವಿಧ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಿದ್ದರು. ಜಾತ್ರೆ ವೇಳೆ ಹುಣ್ಣಿಮೆ ರಾತ್ರಿ ಚಂದ್ರ ಮಂಡಲೋತ್ಸವದಲ್ಲಿ ಭಾಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಮಾರನೇ ದಿನ ಬಾಡೂಟದ ಪಂಕ್ತಿಸೇವೆಯನ್ನು ನೆರವೇರಿಸುತ್ತಿದ್ದರು. ಕಳೆದ ವರ್ಷ ಕೋವಿಡ್ ನಡುವೆಯೂ ಜಿಲ್ಲಾಡಳಿತ ಜಾತ್ರೆಗೆ ಅವಕಾಶ ನೀಡಿದ್ದು, ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರಲ್ಲದೇ, ಚಂದ್ರ ಮಂಡಲೋತ್ಸವದಲ್ಲೂ ಭಾಗಿಯಾಗಿದ್ದರು. ಆದರೆ ಈ ಬಾರಿ ಕೊರೊನಾ 3ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜಾತ್ರೆಯನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಆದರೆ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿ, ಚಂದ್ರಮಂಡಲೋತ್ಸವದಲ್ಲಿ ಲಕ್ಷಾಂತರ ಮಂದಿ ಸೇರುವ ಕಾರಣ ರದ್ದುಪಡಿಸಲಾಗಿತ್ತು.

ಎಂದಿನಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು
ಈ ಬಗ್ಗೆ ತೀವ್ರ ಆಕ್ಷೇಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಚಂದ್ರಮಂಡಲೋತ್ಸವಕ್ಕೆ ಒಪ್ಪಿಗೆ ನೀಡಿದ್ದಾರೆ. ಆದ್ದರಿಂದ ಜಾತ್ರಾ ವೇಳೆ ನಡೆಯುವ ಧಾರ್ಮಿಕ ಪೂಜಾ ಕೈಂಕರ್ಯಗಳು ಎಂದಿನಂತೆ ನಡೆಯಲಿದೆ. ಆದರೆ ಭಕ್ತರಿಗೆ ಅವಕಾಶವಿಲ್ಲವಾದುದರಿಂದ ಎಲ್ಲರೂ ಸಹಕರಿಸುವಂತೆ ಶಾಸಕರು ಕೋರಿದ್ದಾರೆ.
ಇನ್ನು ಈ ಹಿಂದೆ ನಡೆಯುತ್ತಿದ್ದ ಚಿಕ್ಕಲ್ಲೂರ ಜಾತ್ರೆ ಬಗ್ಗೆ ನೆನಪಿಸಿಕೊಂಡಿದ್ದೇ ಆದರೆ, ಈ ಜಾತ್ರೆ ಐದು ದಿನಗಳ ಕಾಲ ನಡೆಯುತ್ತಿತ್ತು. ದೂರದ ಊರುಗಳಿಂದ ಬರುತ್ತಿದ್ದ ಭಕ್ತರು ದೇವಸ್ಥಾನ ಸಮೀಪದ ಜಮೀನುಗಳಲ್ಲಿ ಬಿಡಾರ ಹೂಡಿ ದೇವರ ವಿವಿಧ ಸೇವೆಗಳನ್ನು ಮಾಡುತ್ತಾ ಜಾತ್ರೆಯಲ್ಲಿ ಸಂಭ್ರಮಿಸುತ್ತಿದ್ದರು.

ಚಿಕ್ಕಲ್ಲೂರು ಜಾತ್ರೆ ಹೇಗೆ ನಡೆಯುತ್ತಿತ್ತು?
ಐದು ಹಗಲು ಮತ್ತು ಐದು ರಾತ್ರಿ ನಡೆಯುತ್ತಿದ್ದ ಜಾತ್ರೆಯಲ್ಲಿ ಮೊದಲ ದಿನದ ರಾತ್ರಿ ಚಂದ್ರಮಂಡಲ ಉತ್ಸವ, ಎರಡನೇ ದಿನ ದೊಡ್ಡಮ್ಮ ತಾಯಿ ಮತ್ತು ರಾಚಾಪ್ಪಾಚಿ ಸೇವೆ, ಮೂರನೇ ದಿನ ಮುಡಿ ಸೇವೆ ಅಥವಾ ನೀಲಗಾರರ ದೀಕ್ಷೆ, ನಾಲ್ಕನೇ ದಿನ ಮಾಂಸದ ಅಡುಗೆ ಸಿದ್ಧಪಡಿಸಿ, ಸಿದ್ದಪ್ಪಾಜಿಗೆ ಎಡೆ ಇಟ್ಟು ಊಟ ಮಾಡುವ ಪಂಕ್ತಿಸೇವೆ, ಐದನೇ ದಿನ ಮುತ್ತತ್ತಿರಾಯನ ಸೇವೆ ಅಥವಾ ಕಡೆ ಬಾಗಿಲ ಸೇವೆ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುತ್ತಿತ್ತು.












Click it and Unblock the Notifications