ಚಾಮರಾಜನಗರ ಪಿಡಿಒ, ಅಧಿಕಾರಿಗಳಿಗೆ ಭರ್ಜರಿ ಔತಣಕೂಟ ನೀಡಿದ ಸಚಿವ ವಿ.ಸೋಮಣ್ಣ
ಚಾಮರಾಜನಗರ, ಜನವರಿ 7: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಭರ್ಜರಿ ಮಧ್ಯಾಹ್ನ ಔತಣಕೂಟವನ್ನು ನೀಡಿದ್ದಾರೆ.
ಚಾಮರಾಜನಗರ ಹಾಗೂ ಹನೂರಿನ ಸಿಎಂ ಕಾರ್ಯಕ್ರಮ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪಿಡಿಒಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸಸ್ಯಹಾರಿ ಹಾಗೂ ಮಾಂಸಹಾರಿ ಔತಣಕೂಟ ನೀಡಿದ್ದಾರೆ.
ಮಾಂಸಹಾರಿ ವಿಭಾಗದಲ್ಲಿ ಒಂದು ಸ್ವೀಟ್, ಪಾಯಸ, ಚಿಕನ್, ಮಟನ್, ರೋಟಿ, ಗೀ ರೈಸ್ ನೀಡಲಾಗಿದ್ದು, ಸಸ್ಯಹಾರಿ ವಿಭಾಗದಲ್ಲಿ ಅನ್ನ ಸೇರಿದಂತೆ ಹೋಳಿಗೆ ಊಟ ಉಣಬಡಿಸಲಾಗಿದೆ.
ಭೋಜನಕೂಟಕ್ಕೂ ಮುನ್ನ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿದ ವಿ.ಸೋಮಣ್ಣ "ಬರೀ ಕೃಷ್ಣನ ಲೆಕ್ಕವನ್ನೂ ಮಾಡದೇ ಶೇ.60 ಆದರೂ ರಾಮನ ಲೆಕ್ಕ ಕೊಡಿ, ಬಡವರಿಗೆ ಕಣ್ಣೀರು ಹಾಕಿಸಬೇಡಿ, 500-1000ಕ್ಕಾಗಿ ಬಡವರು ಕಚೇರಿ ಅಲೆಯುವಂತೆ ಮಾಡಬೇಡಿ ಎಂದು ಪಾಠ ಮಾಡಿದರು.
ನಾನು ಗುಮಾಸ್ತನಾಗಿ ಆಯ್ಕೆಯಾಗಿದ್ದೆ ನನ್ನಮ್ಮ ನೌಕರಿಗೆ ಹೋಗು ಎಂದಿದ್ದರು. ಆದರೆ ನನ್ನ ದೊಡ್ಡಕ್ಕ ಬೆಂಗಳೂರು ಬಿಟ್ಡು ಹೋಗಬೇಡ ಡಿಗ್ರಿ ಮಾಡು ಎಂದು ಬುದ್ದಿವಾದ ಹೇಳಿದ್ದಕ್ಕೆ ಮಂತ್ರಿಯಾದೆ, ಕಸ್ತೂರಿ ಮಾತ್ರೆಯನ್ನೂ ಮಾರಿದ್ದೇನೆ, 8 ರೂಪಾಯಿ ಬಾಡಿಗೆ ಮನೆಯಲ್ಲೂ ಇದ್ದೆ. ಮಂತ್ರಿ ಆಗಬಹುದು ಆದರೆ ನಿಮ್ಮ ರೀತಿ ಅಧಿಕಾರಿಗಳಾಗಲೂ ಎಲ್ಲರ ಕೈಯಲ್ಲೂ ಸಾಧ್ಯವಿಲ್ಲ, ದೇವರು ಕೊಟ್ಟ ವಿಶೇಷ ಅವಕಾಶವನ್ನು ಬಡವರಿಗಾಗಿ ಕೆಲಸ ಮಾಡಿ ಎಂದು ಬುದ್ಧಿಮಾತು ಹೇಳಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ನಿರಂಜನ ಕುಮಾರ್, ನರೇಂದ್ರ ಹಾಗೂ ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದರು.