ಕಲ್ಲು ಎತ್ತಿ ಹಾಕಿ ಕೊಲೆ: ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಫೇಸ್ಬುಕ್ ಲೈವ್ನಲ್ಲೇ ಪ್ರಾಣ ಬಿಟ್ಟ ಮಹಿಳೆ
ಪಾಗಲ್ ಪ್ರೇಮಿಯೊಬ್ಬ ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, ಕೊನೆಗೂ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ, ಫೆಬ್ರವರಿ 22: ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆ ತನಗೆ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಕೊನೆಗೂ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದ ಲಕ್ಷ್ಮೀ( 35) ಎಂಬಾಕೆ ಮೃತ ದುರ್ದೈವಿಯಾಗಿದ್ದು, ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುನಿರಾಜ್ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ಲಕ್ಷ್ಮೀ ಮೂಲತಃ ತಮಿಳುನಾಡಿನ ಪೆನ್ನಾಗರಂನ ನಿವಾಸಿಯಾಗಿದ್ದು, ಕಳೆದ 7 ತಿಂಗಳ ಹಿಂದೆ ಹನೂರು ತಾಲೂಕಿನ ನಾಗಮಲೆ ಗ್ರಾಮದ ರಮೇಶ್ ಎಂಬಾತ ಎರಡನೇ ವಿವಾಹ ಮಾಡಿಕೊಂಡು ನಾಗಮಲೆಗೆ ಕರೆತಂದಿದ್ದ. 7 ತಿಂಗಳಿಂದ ಉತ್ತಮವಾಗಿದ್ದ ಇವರ ಸಂಸಾರದಲ್ಲಿ ಆರೋಪಿ ಮುನಿರಾಜು ಪ್ರವೇಶಿಸಿದ್ದು, ಈ ಸಂಬಂಧ ಇದೀಗ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ.
ಮೃತ ಲಕ್ಷ್ಮೀ ಪತಿ ರಮೇಶ್ ಕೆಲಸದ ನಿಮಿತ್ತ ಮಂಗಳವಾರ ಬೇರೆ ಊರಿಗೆ ಹೋಗಿದ್ದ ಈ ವೇಳೆ ಲಕ್ಷ್ಮಿಯನ್ನು ನೋಡಲು ಬಂದಿದ್ದ ಮುನಿರಾಜು, ಆಕೆಯನ್ನು ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆ ತನ್ನಿಂದ ದೂರಾಗುತ್ತಾಳೆ ಎಂದು ಆಕೆ ಮೇಲೆ ಕೋಪಗೊಂಡು ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಈ ವೇಳೆ ಫೇಸ್ಬುಕ್ನಲ್ಲಿ ಲೈವ್ ಬಂದಿದ್ದ ಮುನಿರಾಜು ರಕ್ತಸಿಕ್ತವಾಗಿದ್ದ ಆಕೆಯನ್ನು ತನ್ನ ತೊಡೆ ಮೇಲೆ ಮಲಗಿಸಿಕೊಂಡು ವಿಡಿಯೋ ಮಾಡಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಲಕ್ಷ್ಮೀ ಫೇಸ್ಬುಕ್ ಲೈವ್ ವೇಳೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು ತನ್ನ ತೊಡೆ ಮೇಲೆ ಮಲಗಿಸಿಕೊಂಡ ಮುನಿರಾಜು ಗೋಳಾಡಿದ್ದಾನೆ. ತನ್ನನ್ನು ಕೊಲೆಗಾರನನ್ನಾಗಿಸಿದೆಯಲ್ಲಾ ಲಕ್ಷ್ಮೀ, ನಾನೇ ನಿನ್ನನ್ನು ಕೊಲೆ ಮಾಡಿದೆನಲ್ಲಾ, ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲಾಗುತ್ತಿಲ್ಲ, ನಿನ್ನ ರಕ್ತ ನೋಡಲಾಗುತ್ತಿಲ್ಲ ಎಂದು ಗೋಳಾಡಿ ವಿಚಿತ್ರವಾಗಿ ವರ್ತಿಸಿ ವಿಡಿಯೋ ಮಾಡಿದ್ದಾನೆ.
ಲಕ್ಷ್ಮೀ ಸಾವನ್ನಪ್ಪಿದ ಬಳಿಕ ಮನನೊಂದ ಮುನಿರಾಜು ಸಮೀಪದಲ್ಲೇ ಇದ್ದ ಬೇವಿನದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೇಲ್ನೋಟಕ್ಕೆ ಇಂದೊಂದು ವಿವಾಹೇತರ ಸಂಬಂಧದಿಂದ ನಡೆದ ಸಾವುಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications