ಮಲೆ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆ!
ಚಾಮರಾಜನಗರ, ಮಾರ್ಚ್ 25; ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ಕಳೆದ 6 ದಿನಗಳಿಂದ ನಾಪತ್ತೆ ಆಗಿದೆ ಎಂದು ತಿಳಿದುಬಂದಿದೆ.
ಲಕ್ಷಾಂತರ ರೂ. ಮೌಲ್ಯದ ಕರಡಿಗೆಯು ಅರ್ಚಕರ ಸುಪರ್ದಿಯಲ್ಲಿರಲಿದ್ದು ತಿಂಗಳಿಗೊಮ್ಮೆ ಅರ್ಚಕರ ಸರದಿ ಬದಲಾಗುವಾಗ ನಾಪತ್ತೆಯಾಗಿದೆ. ಕಳುವಾಗಿದೆಯೋ? ಇಲ್ಲಾ ಪೂಜಾ ಸಾಮಾಗ್ರಿಗಳ ಜೊತೆ ಸೇರಿಕೊಂಡಿದೆಯೋ? ಎಂದು ಇನ್ನು ಖಚಿತವಾಗಿಲ್ಲ.
ಇಂದು ಹುಂಡಿ ಎಣಿಕೆ ನಡೆಯುತ್ತಿದ್ದು ಆ ವೇಳೆಯಲ್ಲೆಯಾದರೂ ಸಿಗಬಹುದು ಎಂದು ಅರ್ಚಕ ಸಮೂಹದ ಮಾತಾಗಿದೆ. ಪ್ರಕರಣ ನಡೆದು 6 ದಿನಗಳಾದರೂ ಪ್ರಾಧಿಕಾರ ಯಾವುದೇ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಅರ್ಚಕರ ಗುಂಪುಗಳ ನಡುವಿನ ಮುಸುಕಿನ ಗುದ್ದಾಟದ ಫಲವಾಗಿಯೇ ಚಿನ್ನದ ಕರಡಿಗೆಯೇ ನಾಪತ್ತೆಯಾಗಿದೆ. ಅರ್ಚಕರಲ್ಲೇ ಮೂರು ಗುಂಪುಗಳಿದ್ದು, ಅರ್ಚಕರ ಗುಂಪುಗಳ ನಡುವೆ ಒಳಗೊಳಗೆ ವೈಮನಸ್ಸು ಏರ್ಪಟ್ಟಿದೆ.
ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ. ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ.
ಇಲ್ಲವೇ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣಕ್ಕೆ ಇತಿ ಶ್ರೀ ಹಾಡಲೂ ಸಹ ನಿರ್ಧರಿಸಲಾಗಿದೆ. ಇಂದು ಚಿನ್ನದ ಕರಡಿಗೆ ನಾಪತ್ತೆಯಾಗಿದೆ, ನಾಳೆ ಇತರೆ ಚಿನ್ನದ ಒಡವೆ ನಾಪತ್ತೆಯಾದರೆ ಯಾರು ಜವಾಬ್ದಾರರೆಂದು? ಭಕ್ತರು ಪ್ರಶ್ನಿಸುತ್ತಿದ್ದಾರೆ.












Click it and Unblock the Notifications