ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು
ಚಾಮರಾಜನಗರ, ಆಗಸ್ಟ್ 23: ಬಂಡೀಪುರದ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ, ಸರಸ- ಸಲ್ಲಾಪದಲ್ಲಿ ತೊಡಗಿದ್ದ ಪ್ರೇಮಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಅಭಯಾರಣ್ಯದ ಕ್ಯಾಂಪನಮುಂಟಿ ಸಫಾರಿ ವಲಯ ಅರಣ್ಯಪ್ರದೇಶಕ್ಕೆ ಹಾಸನ ಜಿಲ್ಲೆಯ ರೋಷನ್ ಮತ್ತು ಆತನ ಗೆಳತಿ ಅತಿಕ್ರಮ ಪ್ರವೇಶ ಮಾಡಿ, ಸರಸ- ಸಲ್ಲಾಪ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಕಾರನ್ನು ಹಿಂಬಾಲಿಸಿ, ಕಾಡಿನ ಮಧ್ಯೆ ಕಾರಿನಲ್ಲಿ ಅಕ್ರಮ ಚಟುವಟಕೆಯಲ್ಲಿ ತೊಡಗಿದ್ದವರನ್ನು ಬಂಧಿಸಿ, ಅರಣ್ಯಕ್ಕೆ ಅತಿಕ್ರಮಣ ಪ್ರವೇಶದ ಕೇಸು ದಾಖಲಿಸಿದ್ದಾರೆ.[ಬಂಡೀಪುರದಲ್ಲಿ ಬೇಟೆಗಾರರ ಗುಂಡೇಟಿಗೆ ಗಂಡು ಹುಲಿ ಬಲಿ]
ಜಿಲ್ಲಾ ವನ್ಯ ಜೀವಿಪರಿಪಾಲಕ ಎನ್.ಎಂ.ನವೀನ್ ಕುಮಾರ್ ಬಂಡೀಪುರದ ಅರಣ್ಯದಲ್ಲಿನ ಕಳ್ಳಬೇಟೆ ಶಿಬಿರಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಹಿಂತಿರುಗುತ್ತಿದ್ದ ವೇಳೆ ಹಾಸನ ಮೂಲದ ಕೆ.ಎ.13.ಎನ್.4604 ಕಾರು ಮುಖ್ಯರಸ್ತೆಯಿಂದ ಸಫಾರಿ ವಲಯದ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದೆ. ಕೂಡಲೇ ಕಾರನ್ನು ಹಿಂಬಾಲಿಸಿದ ನವೀನ್ ಕುಮಾರ್ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.[ತಮಿಳುನಾಡು ಪಡಿತರ ಅಕ್ಕಿ ರಾಜ್ಯದಲ್ಲಿ ಮಾರಾಟ?]
ನಂತರ ಅತಿಕ್ರಮಣ ಪ್ರವೇಶ ಮಾಡಿದ ವ್ಯಕ್ತಿಯನ್ನು ಅರಣ್ಯ ಕಾಯ್ದೆಯಡಿ ಬಂಧಿಸಿ, ಕೇಸು ದಾಖಲಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಾದ ಡಿ.ಆರ್.ಎಫ್.ಓ. ಅನಿಲ್ ಕುಮಾರ್ ಮತ್ತು ಮೋಹನ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಬಂಡೀಪುರದ ಆರ್ಎಫ್ಓ ಗೋವಿಂದರಾಜು ಕಾರಿನ ಸಮೇತ ಇಬ್ಬರನ್ನೂ ವಶಕ್ಕೆ ಪಡೆದರು.