Gopalswamy Hill: ಕಡೇ ಶ್ರಾವಣ ಶನಿವಾರ ಸಂಭ್ರಮ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ
ಚಾಮರಾಜನಗರ, ಆಗಸ್ಟ್, 31: ಇಂದು (ಆಗಸ್ಟ್ 31) ನಾಲ್ಕನೇ ಹಾಗೂ ಕಡೆ ಶ್ರಾವಣ ಶನಿವಾರ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಹಾಗೂ ಯಾತ್ರ ಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಗೋಪಾಲನ ದರ್ಶನ ಪಡೆದರು.
ಶ್ರಾವಣ ಮಾಸದ ಕೊನೆಯ ಶನಿವಾರವಾದ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಟ್ಟಕ್ಕೆ ತೆರಳಲು ಸುಮಾರು 25ಕ್ಕೂ ಅಧಿಕ ಬಸ್ಗಳನ್ನು ನಿಯೋಜನೆ ಮಾಡಲಾಗಿತ್ತು. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಊಟಿ, ಕೇರಳ ಕಡೆಯಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿದ್ದರು. ಬೆಳಗ್ಗೆ 10 ಗಂಟೆಯಿಂದಲೇ ಅಧಿಕ ಭಕ್ತರು ಭೇಟಿ ನೀಡಿದ್ದ ಕಾರಣ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಿಲೋ ಮೀಟರ್ ದೂರದವರೆಗೆ ಜನರು ಸಾಲುಗಟ್ಟಿ ಗಂಟೆಗಟ್ಟಲೇ ನಿಂತು ಟಿಕೆಟ್ ಖರೀದಿಸಿ ಬೆಟ್ಟಕ್ಕೆ ತೆರಳಿದರು.

ಗೋಪಾಲಸ್ವಾಮಿ ಬೆಟ್ಟಕ್ಕೆ 12 ಗಂಟೆ ವೇಳೆಗೆ ಅಧಿಕ ಮಂದಿ ಭಕ್ತರು ಆಗಮಿಸಿದ್ದ ಕಾರಣ ಜನಜಂಗುಳಿ ಹೆಚ್ಚಿನ ರೀತಿಯಲ್ಲಿ ಕಂಡು ಬಂತು. ಇದರಿಂದ ದೇವಸ್ಥಾನದ ಸುತ್ತಲೂ ಎರಡು ಸಾಲಿನಲ್ಲಿ ಭಕ್ತರು ಗಂಟೆಗಟ್ಟಲೇ ನಿಂತು ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು. ವಾತಾವರಣ ತಣ್ಣಗಿದ್ದ ಕಾರಣ ಹೆಚ್ಚಿನ ಸಮಸ್ಯೆ ಆಗಲಿಲ್ಲ.
ವಿಶೇಷ ಅಲಂಕಾರ: ಕಡೆ ಶ್ರಾವಣ ಶನಿವಾರ ಪ್ರಯುಕ್ತ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ಟರು ಗೋಪಾಲಸ್ವಾಮಿಗೆ ವಿವಿಧ ಬಗೆಯ ಹೂವು ಹಾಗೂ ತುಳಿಸಿಯಿಂದ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು. ಸಾಲಿನಲ್ಲಿ ಬಂದ ಭಕ್ತಾದಿಗಳು ದೇವರಿಗೆ ಮಾಡಿದ ಅಲಂಕಾರ ಕಣ್ತುಂಬಿಕೊಂಡರು.
ಖಾಸಗಿ ವಾಹನಗಳಿಗೂ ಬೇಡಿಕೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಂಗಳ ಗ್ರಾಮಕ್ಕೆ ಆಗಮಿಸಿದ್ದರು. ಅಲ್ಲದೆ ಜನರು ಆಟೋ, ಟೆಂಪೊಗಳಲ್ಲಿ ತಪ್ಪಲಿಗೆ ತೆರಳಿದ್ದ ಕಾರಣ ಖಾಸಗೀ ವಾಹನಗಳಿಗೂ ಬೇಡಿಕೆ ಹೆಚ್ಚಾಯಿತು.
ಸೆಲ್ಫಿ ಮೊರೆಹೋದ ಭಕ್ತರು: ಗೋಪಾಲಸ್ವಾಮಿ ಬೆಟ್ಟದಲ್ಲಿ ಶನಿವಾರ ಬೆಳಗ್ಗೆಯಿಂದಲೂ ಹಿಮ ಹೆಚ್ಚಿದ್ದ ಕಾರಣ ಚಳಿಯ ವಾತಾವರಣ ನಿರ್ಮಾಣ ಆಗಿತ್ತು. ಜೊತೆಗೆ ಸುತ್ತಲಿನ ಪರಿಸರವೆಲ್ಲ ಅಚ್ಚ ಹಸಿರಿನಿಂದ ಕೂಡಿದ್ದ ಕಾರಣ ಜನರು ಕುಟುಂಬ ಸಮೇತರಾಗಿ ಪೋಟೋ ಕ್ಲಿಕ್ಕಿಸಿಕೊಳ್ಳುವ ಜೊತೆಗೆ ಸೆಲ್ಫಿ ಮೊರೆ ಹೋಗಿ ಸಂಭ್ರಮಿಸಿದರು.












Click it and Unblock the Notifications