ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ ಬಿ.ಪುಟ್ಟಸ್ವಾಮಿ: ಜೆಡಿಎಸ್ನಿಂದ ಸ್ಪರ್ಧೆ?
ಚಾಮರಾಜನಗರ ಜನವರಿ 9: ಪೊಲೀಸ್ ಇನ್ಸ್ಪೆಕ್ಟರ್ ಆಗಿ ಜನಮನ್ನಣೆ ಗಳಿಸಿದ್ದ ಬಿ.ಪುಟ್ಟಸ್ವಾಮಿ ತಮ್ಮ ನೌಕರಿಗೆ ರಾಜೀನಾಮೆ ಕೊಟ್ಟಿದ್ದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಖಾಡ ಸಿದ್ಧ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮೈಸೂರಿನ ಐಜಿಪಿ ಕಚೇರಿಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನ ವಿಭಾಗದಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಪುಟ್ಟಸ್ವಾಮಿ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸಂಕ್ರಾಂತಿ ನಂತರ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.
ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ವೃತ್ತಿ ಆರಂಭಿಸಿ ಬಳಿಕ ಪಿಎಸ್ಐ ಹುದ್ದೆಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಮಾಪುರ, ಕೊಳ್ಳೇಗಾಲ, ಚಾಮರಾಜನಗರದಲ್ಲಿ ಪಿಎಸ್ಐ, ಪಿಐ ಆಗಿ ಕರ್ತವ್ಯ ನಿರ್ವಹಿಸಿದ್ದು ಜನಸ್ನೇಹಿ ಆಡಳಿತದಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳಿಂದ ಮಹಿಳಾ ಅಭಿಮಾನಿಗಳ ಬಳಗವು ಇವರಿಗೆ ತುಸು ಹೆಚ್ಚಿದ್ದು ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.

ಬಿಪಿಎಸ್ ಟ್ರಸ್ಟ್ ಎಂಬ ಸಂಸ್ಥೆಯ ಮೂಲಕ ಯಾವುದೇ ಪಕ್ಷದಡಿ ಬರದೆ ಸೇವಾ ಕಾರ್ಯಗಳ ಮೂಲಕ ಜನರನ್ನು ಸಂಘಟಿಸಿ ಸಾಕಷ್ಟು ಮತಗಳನ್ನು ಈಗಾಗಲೇ ಬಿ.ಪುಟ್ಟಸ್ವಾಮಿ ಸಂಗ್ರಹಿಸಿದ್ದಾರೆ. ದೇವಾಲಯಗಳ ಜೀರ್ಣೋದ್ಧಾರ, ಆರೋಗ್ಯ ತಪಾಸಣೆ, ವಾಹನ ಲೈಸೆನ್ಸ್, ಕಣ್ಣಿನ ತಪಸಣಾ ಶಿಬಿರ, ರಸ್ತೆ, ವಿದ್ಯಾರ್ಥಿಗಳಿಗೆ ಬ್ಯಾಗ್, ಕೊರೊನಾ ಕಿಟ್ ಸೇರಿದಂತೆ ಹಲವು ಜನಪರ ಕಾರ್ಯಗಳ ಮೂಲಕ ಜನರ ಮನ ಗೆದ್ದಿದ್ದು ಕೊಳ್ಳೇಗಾಲದಲ್ಲಿ ಭರ್ಜರಿ ಪೈಪೋಟಿ ನೀಡುವ ನಿರೀಕ್ಷೆ ಇದೆ.
ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ವೀಡಿಯೋಯೊಂದು ಲಭ್ಯವಾಗಿದ್ದು ಚಾಮರಾಜನಗರ ಜಿಲ್ಲೆಯ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ ಎಂದು ಹೇಳಿದ್ದಾರೆ. ಹನೂರಿಗೆ ಎಂ.ಆರ್.ಮಂಜುನಾಥ್, ಚಾಮರಾಜನಗರಕ್ಕೆ ಮುಸ್ಲಿಂ ಕೋಟದಡಿ ಜೆಡಿಎಸ್ ಮಾಧ್ಯಮ ವಕ್ತಾರ ಸಯ್ಯದ್ ಅಕ್ರಮ್, ಲಿಂಗಾಯತ ಕೋಟದಡಿ ಗುಂಡ್ಲುಪೇಟೆ ಕ್ಷೇತ್ರದಿಂದ ಕಡುಬೂರು ಮಂಜುನಾಥ್ ಹಾಗೂ ಕೊಳ್ಳೇಗಾಲಕ್ಕೆ ಇನ್ಸ್ಪೆಕ್ಟರ್ ಬಿ.ಪುಟ್ಟಸ್ವಾಮಿ ಎಂದು ಸಾರಾ ಮಹೇಶ್ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ಜೆಡಿಎಸ್ ರಣಕಣ ಸಿದ್ಧಪಡಿಸಿದ್ದು ಚುನಾವಣೆ ರಂಗು ಜೋರಾಗಿದೆ. ಜೊತೆಗೆ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜೆಡಿಎಸ್ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿದೆ.












Click it and Unblock the Notifications