ಚಾಮರಾಜನಗರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ: ಕಾಡಂಚಿನ ಗ್ರಾಮಗಳಿಗೆ ವಾಹನ ವ್ಯವಸ್ಥೆ
ಚಾಮರಾಜನಗರ, ಮೇ 09: ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು ಜಿಲ್ಲೆಯಲ್ಲಿ ಮಸ್ಟರಿಂಗ್ ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ.
ಚಾಮರಾಜನಗರದ ಪದವಿ ಕಾಲೇಜು ಹಾಗೂ ಕೊಳ್ಳೆಗಾಲದ ಎಂ.ಜಿ.ಎಸ್.ವಿ. ಪದವಿಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರಗಳಿಂದ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರಿನ ವಿವಿಧ ಮತಗಟ್ಟೆಗಳಿಗೆ ಇವಿಎಂ ಹಿಡಿದು ಸಿಬ್ಬಂದಿ ತೆರಳಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಹೊಂದಿರುವ ಸಿಬ್ಬಂದಿಗಳಿಗೆ ಮಸ್ಟರಿಂಗ್ ಕೇಂದ್ರದ ಅವರಣದಲ್ಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಂಚೆ ಮತದಾನ ಮಾಡಿದ ಬಳಿಕ ಚುನಾವಣೆಗೆ ಸಿಬ್ಬಂದಿಗಳು ತೆರಳಿದರು. ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಅಂಚೆ ಮತ ಪತ್ರಗಳನ್ನು ಬ್ಯಾಲೆಟ್ ಬಾಕ್ಸ್ಗಳಲ್ಲಿ ಹಾಕಿ ತಮ್ಮ ಹಕ್ಕು ಚಲಾಯಿಸಿದರು.
ಕಾಡಂಚಿನ ಗ್ರಾಮಗಳಿಗೆ ಜೀಪ್ ವ್ಯವಸ್ಥೆ
ವಿವಿಧ ಮತಗಟ್ಟೆಗಳಿಗೆ ತೆರಳಲು ಬಸ್ ಜೊತೆಗೆ 4×4 ಜೀಪ್ ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ಈ ಬಾರಿ ಕಲ್ಪಿಸಿದ್ದರು. ಹನೂರು, ಚಾಮರಾಜನಗರ ತಾಲೂಕಿನ ವಿವಿಧ ಕಾಡಂಚಿನ ಗ್ರಾಮಗಳಿಗೆ, ರಸ್ತೆ ಇಲ್ಲದ ಊರುಗಳಿಗೆ, ಪ್ರಾಣಿ ಭೀತಿ ಇರುವ ಗ್ರಾಮಗಳಿಗೆ ಚುನಾವಣಾ ಸಿಬ್ಬಂದಿ ಜೀಪ್ ಮೂಲಕ ತೆರಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಸಿಬ್ಬಂದಿಗೆ ಭೂರಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾದ್ದರಿಂದ ಲಾಡು, ಕೀರು, ಮೈಸೂರು ಪಾಕ್, 4 ಪಲ್ಯ , ಚಪಾತಿ, ಮುದ್ದೆ ಸೇರಿದಂತೆ ಭರ್ಜರಿ ಭೋಜನವನ್ನು ಮತಗಟ್ಟೆ ಸಿಬ್ಬಂದಿಗಗೆ ಉಣಬಡಿಸಲಾಯಿತು.
ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಹದ್ದಿನ ಕಣ್ಣಿಟ್ಟಿದ್ದು 2,000ಕ್ಕೂ ಅಧಿಕ ಪೊಲೀಸರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ, ಸಿಆರ್ ಪಿಎಫ್, ಬೇರೆ ರಾಜ್ಯದ ಪೊಲೀಸರು ಕೂಡ ಜಿಲ್ಲೆಯ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.












Click it and Unblock the Notifications