ಕೊನೆಗೂ ಬಂದ್ ಆಯ್ತು ಬಂಡೀಪುರದ ಅಕ್ರಮ ಹೊಟೇಲ್!
ಚಾಮರಾಜನಗರ, ಆಗಸ್ಟ್ 14: ಕಗ್ಗಳದಹುಂಡಿ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ತಲೆ ಎತ್ತಿದ್ದ ರಾಯಲ್ ರೆಸ್ಟೋರೆಂಟ್ ವಸತಿಗೃಹ ಮತ್ತು ಹೊಟೇಲ್ ಅನ್ನು ಅರಣ್ಯ ಇಲಾಖೆ ಮತ್ತು ಬೇರಂಬಾಡಿ ಗ್ರಾ.ಪಂ. ಕಾರ್ಯಾಚರಣೆ ನಡೆಸಿ ಬಂದ್ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಕಗ್ಗಳದಹುಂಡಿ ಮುಖ್ಯ ರಸ್ತೆಯಲ್ಲಿರುವ ಈ ಜಾಗವು ಬಂಡೀಪುರ ಹುಲಿಯೋಜನೆಯಲ್ಲಿನ ಪರಿಸರ ಸೂಕ್ಷ್ಮ ವಲಯದಲ್ಲಿರುವುದರಿಂದ ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಲು ಅನುಮತಿ ಇಲ್ಲ. ಹೀಗಿದ್ದರೂ ಕೂಡ ಅಕ್ರಮವಾಗಿ ಹೊಟೇಲ್ ನಡೆಸುತ್ತ ಅಕ್ರಮ ಚಟುವಟಿಕೆ ಸೇರಿದಂತೆ ಅನುಮತಿ ಇಲ್ಲದೆ ವಸತಿಗೃಹ ನಿರ್ಮಾಣ ಮಾಡಲಾಗಿತ್ತು. ಜತೆಗೆ ಅಕ್ರಮ ಮದ್ಯ ಮತ್ತು ಮಾಂಸಾಹಾರ ಸರಬರಾಜು ಮಾಡಲಾಗುತ್ತಿತ್ತು.

ಇದರೊಂದಿಗೆ ಗ್ರಾಮದಲ್ಲಿನ ಜಮೀನಿನ ಸುತ್ತಮುತ್ತ್ತ ತ್ಯಾಜ್ಯ ಸುರಿಯುತ್ತಿದ್ದರು ಎನ್ನಲಾಗಿದೆ. ಸದರಿ ಜಾಗದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದನ್ನು ಸ್ಮರಿಸಬಹುದಾಗಿದೆ.












Click it and Unblock the Notifications