ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ
ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶುಕ್ರವಾರ ಅದ್ಧೂರಿ ಬ್ರಹ್ಮರಥೋತ್ಸವ ನಡೆದಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಗುಂಡ್ಲುಪೇಟೆ, ಮಾರ್ಚ್ 24: ಸಾವಿರಾರು ಭಕ್ತರ ಸಮ್ಮುಖದಲ್ಲಿ ಹಿಮವದ್ ಗೋಪಾಲ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ಗೋವಿಂದಾ.. ಗೋವಿಂದಾ.. ಎಂಬ ಉದ್ಘೋಷದ ನಡುವೆ ಭಕ್ತರು ಹಣ್ಣು, ಹೂವು, ದವನ ಎಸೆದು ಕೃತಾರ್ಥರಾದರು. ರಥೋತ್ಸವದ ಅಂಗವಾಗಿ ವಿವಿಧ ಹೂಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆದವು.
ಗೋಪಾಲಸ್ವಾಮಿ ಉತ್ಸವ ಮೂರ್ತಿಗೆ ಮುಜರಾಯಿ ಇಲಾಖೆ ಅಧಿಕಾರಿಯೂ ಆದ ತಹಸೀಲ್ದಾರ್ ಕೆ.ಸಿದ್ದು ಪೂಜೆ ಸಲ್ಲಿಸಿದ ಬಳಿಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಚಲಿಸುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಗೋವಿಂದಾ, ಗೋವಿಂದಾ ಎಂದು ಘೋಷಣೆ ಕೂಗುತ್ತಾ ಭಕ್ತಿ ಭಾವ ಮೆರೆದರು.[ಗುಂಡ್ಲುಪೇಟೆಯಲ್ಲಿ ರೈತರಿಗೆ ನೆಮ್ಮದಿ ತಂದ ಮಳೆ]

ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಗುಂಡ್ಲುಪೇಟೆಯ ಸರಕಾರಿ ಸಾರಿಗೆ ಘಟಕದಿಂದ ಬೆಳಗ್ಗೆ 7ರಿಂದ ಸಂಜೆ 6ವರೆಗೆ ನಿರಂತರವಾಗಿ ಬಸ್ ವ್ಯವಸ್ಥೆ ಮಾಡಿದ್ದರು. ರಸ್ತೆಯು ಬಹಳ ಕಡಿದು, ತಿರುವು ಹಾಗೂ ಇಕ್ಕಟ್ಟಾಗಿರುವುದರಿಂದ ಉಂಟಾಗಬಹುದಾದ ತೊಂದರೆ ತಪ್ಪಿಸುವ ಸಲುವಾಗಿ ಸಾರಿಗೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗದ ಮಧ್ಯೆ ಸೂಚನೆ ನೀಡಿ, ಅನುಕೂಲ ಮಾಡಿಕೊಡುತ್ತಿದ್ದರು.[ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ]

ರಥವನ್ನು ಬೆಟ್ಟದಲ್ಲಿ ಸಿಗುವ ಅಂಬು, ಬಳ್ಳಿಗಳಿಂದ ತಯಾರಿಸಿದ ಹಗ್ಗದಿಂದ ಎಳೆಯುವುದು ಈ ರಥೋತ್ಸವದ ವಿಶೇಷವಾಗಿದೆ. ಈ ಬಾರಿ ರಥಕ್ಕೆ ಬಂಬು ಹಾಗೂ ಮರಗಳನ್ನು ಬಳಕೆ ಮಾಡದೆ ಕಬ್ಬಿಣದ ಪೈಪುಗಳನ್ನು ಬಳಕೆ ಮಾಡಿರುವುದು ಕಂಡುಬಂದಿತು. ಖಾಸಗಿ ವಾಹನಗಳು ಬೆಟ್ಟದ ತಪ್ಪಲಿನವರೆಗೆ ಮಾತ್ರ ಸಂಚರಿಸುತ್ತಿದ್ದು, ಅಲ್ಲಿಂದ ಸರಕಾರಿ ಬಸ್ಸಿನಲ್ಲಿ ಬೆಟ್ಟಕ್ಕೆ ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ತೊಂದರೆಯಾಗದಂತೆ ಮೂಲಸೌಲಭ್ಯವನ್ನು ಕಲ್ಪಿಸಲಾಗಿತ್ತು.












Click it and Unblock the Notifications