ಬಿರುಗಾಳಿ ಮಳೆಯಿಂದ ಚಾಮರಾಜನಗರ ಜಿಲ್ಲೆಯ ಹಲವೆಡೆ ಮನೆ, ಬೆಳೆಗಳಿಗೆ ಹಾನಿ-ಎಲ್ಲೆಲ್ಲಿ?
ಚಾಮರಾಜನಗರ, ಮೇ, 03: ಬಿಸಿಲಿನಿಂದ ಕಂಗೆಟ್ಟಿದ್ದ ಗಡಿಜಿಲ್ಲೆ ಚಾಮರಾಜನಗರದ ವಿವಿಧೆಡೆ ಶುಕ್ರವಾರ (ಮೇ 03) ಸಂಜೆ ಭರ್ಜರಿ ಮಳೆಯಾಗಿದ್ದು, ವರುಣಾಗಮನಕ್ಕೆ ಜನರು ಸಂತಸಗೊಂಡಿದ್ದಾರೆ. ಮತ್ತೊಂದೆಡೆ ಜಿಲ್ಲೆಯ ಹಲವೆಡೆ ಅನಾಹುತಗಳನ್ನಯ ಕೂಡ ಸೃಷ್ಟಿಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಮರಾಜನಗರ ತಾಲೂಕಿನ ಅರಕಲವಾಡಿ, ಚೆನ್ನಪ್ಪನಪುರ, ಕೆ.ಗುಡಿ ಅರಣ್ಯ ಪ್ರದೇಶ, ಹನೂರು ಪಟ್ಟಣ ಹಾಗೂ ಹನೂರು ತಾಲೂಕಿನ ಹೂಗ್ಯಂ, ಶಾಗ್ಯ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ ಶಿವಪುರ, ಬೊಮ್ಮಲಾಪುರ, ಕೋಡಹಳ್ಳಿ, ಹಂಗಳ, ಮಾಡ್ರಹಳ್ಳಿ ಸುತ್ತಮುತ್ತಲು ಗುಡುಗು-ಸಿಡಿಲು ಆರ್ಭಟದೊಂದಿದೆ ಮಳೆ ಸುರಿದಿದೆ. ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಂಕಿ ಆತಂಕ ದೂರ ಆದಂತಾಗಿದೆ.

* ಮತ್ತೊಂದೆಡೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವೆಡೆ ಮನೆ-ಬೆಳೆಗೆ ಹಾನಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯ ಪೆಟ್ಟಿಗೆ ಅಂಗಡಿ ಮೇಲೆ ಬೇವಿನಮರ ಬಿದ್ದು ಸಂಪೂರ್ಣ ಜಖಂ ಆಗಿದೆ.
* ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಮನೆಗಳ ಛಾವಣಿ ಹಾರಿಹೋಗಿದ್ದು, ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದಲ್ಲೂ ಮನೆಗಳಿಗೆ ಹಾನಿಯಾಗಿವೆ.
* ಹನೂರು ತಾಲೂಕಿನ ಶಾಗ್ಯ ಗ್ರಾಮದ ರತ್ಮಮ್ಮ ಎಂಬುವರಿಗೆ ಸೇರಿದ 3 ಎಮ್ಮೆಗಳು ಸಿಡಿಲಿನ ಬಡಿತಕ್ಕೆ ಮೃತಪಟ್ಟಿದ್ದು, ಎಮ್ಮೆ ಕಳೆದುಕೊಂಡ ರೈತ ಮಹಿಳೆ ಕಣ್ಣೀರಿಟ್ಟಿದ್ದು, ಈ ದೃಶ್ಯವಂತೂ ಮನಕಲಕುವಂತಿದೆ.
* ಹನೂರು ತಾಲೂಕಿನ ಹೂಗ್ಯಂನಲ್ಲಿ 15 ಎಕರೆ ಪರಂಗಿ, 20 ಎಕರೆ ಬಾಳೆ, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಲೋಕೇಶ್ ಎಂಬುವರಿಗೆ ಸೇರಿದ ಬಾಳೆ, ನಾಗಶೆಟ್ಟಿ ಎಂಬುವರಿಗೆ ಸೇರಿದ ಸಪೋಟಾ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಒಟ್ಟಿನಲ್ಲಿ ಬಿಸಿಲಿನ ಬೇಗೆಯಿಂದ ಬೆಂಡಾಗಿದ್ದ ಜನರಿಗೆ ವರುಣ ತಂಪೆನಿಸಿದರೆ, ರೈತರಿಗೆ ಸಂಕಷ್ಟ ತಂದಿಟ್ಟಿದ್ದಾನೆ.
ಮೇವು-ನೀರಿಲ್ಲದೆ ಎರಡು ಎಮ್ಮೆ, ಹಸು ಸಾವು: ಬಂಧನ ಭೀತಿಯಿಂದ ಬಹುಪಾಲು ಜನರು ಗ್ರಾಮ ತೊರೆದಿರುವುದರಿಂದ ಮೇವು, ನೀರಿಲ್ಲದೇ ಜಾನುವಾರುಗಳು ಮೃತಪಟ್ಟಿರುವ ಧಾರುಣ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಇಂಡಿಗನತ್ತ ಒಳಪಡಲಿದ್ದು, ಮತಗಟ್ಟೆ ಧ್ವಂಸ ಸಂಬಂಧ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಾಗಿದೆ.
ಈ ಹಿನ್ನೆಲೆ ಬಂಧನ ಭೀತಿಯಿಂದ ಗ್ರಾಮದ ಜನರು ಮನೆ ತೊರೆದಿದ್ದು, ಕುಡಿಯಲು ನೀರು, ಮೇವಿಲ್ಲದೇ ಎರಡು ಎಮ್ಮೆ, ಒಂದು ಹಸು ಧಾರುಣವಾಗಿ ಸಾವನ್ನಪ್ಪಿದೆ. ಇಂಡಿಗನತ್ತ ಗ್ರಾಮದ ಪುಟ್ಟತಂಬಡಿ, ಮುರುಗೇಶ್ ಎಂಬುವವರಿಗೆ ಸೇರಿದ ಜಾನುವಾರುಗಳು ಕಟ್ಟಿ ಹಾಕಿದ ಸ್ಥಳದಲ್ಲೇ ಹಸಿವಿನಿಂದ ಸಾವನ್ನಪ್ಪಿವೆ.
ಮೂಕ ಪ್ರಾಣಿಗಳನ್ನು ರಕ್ಷಿಸಿ: ಚುನಾವಣಾ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಪ್ರಕರಣದಿಂದ ಇಲ್ಲಿನ ನಿವಾಸಿಗಳು ಮನೆಗಳಿಗೆ ಬೀಗ ಜಡಿದು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಇದರಿಂದ ಇಲ್ಲಿರುವ ಜಾನುವಾರುಗಳಿಗೆ ಮೇವು ನೀರು ಇಲ್ಲದೆ ಪರಿತಪಿಸುತ್ತಿವೆ.
ಇಲ್ಲಿನ ಜಾನುವಾರುಗಳನ್ನು ನೋಡಿಕೊಳ್ಳಲು ಯಾರು ಇಲ್ಲದೆ ಮೂಕ ಪ್ರಾಣಿಗಳು ಮೇವು ನೀರು ಇಲ್ಲದೆ ಒದ್ದಾಡುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.












Click it and Unblock the Notifications