ರಣಮಳೆಗೆ ಮುಳುಗಿದ ಜಾಕ್ವೆಲ್: ಗುಂಡ್ಲುಪೇಟೆ ತಾಲೂಕಿನಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ
ಚಾಮರಾಜನಗರ, ಜುಲೈ, 20: ಹುಲ್ಲಹಳ್ಳಿ ಕಬಿನಿ ನದಿಯ ದಡದಲ್ಲಿರುವ ಜಾಕ್ವೆಲ್ ಮತ್ತು ನೀರು ಶುದ್ಧೀಕರಣ ಘಟಕ ಭಾಗಶಃ ಮುಳುಗಡೆಯಾಗಿದೆ. ಪರಿಣಾಮ ಗುಂಡ್ಲುಪೇಟೆ ತಾಲೂಕಿನ 145 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಸುಮಾರು 30ರಿಂದ 45 ದಿನಗಳ ಕಾಲ ವ್ಯತ್ಯಯವಾಗಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ತಿಳಿಸಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗುಂಡ್ಲುಪೇಟೆ ತಾಲ್ಲೂಕಿನ 145 ಗ್ರಾಮಗಳಿಗೆ ಕಬಿನಿಯ ನದಿಯಿಂದ ಪಂಪ್ ಮಾಡಿ ಹುಲ್ಲಹಳ್ಳಿ ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಕೇರಳದ ವೈನಾಡಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಕಬಿನಿ ಡ್ಯಾಂನಿಂದ 75ರಿಂದ 80 ಕ್ಯೂಸೆಕ್ಸ್ ನೀರು ಬಿಡಲಾಗಿದೆ.

ಇದರಿಂದ ಹುಲ್ಲಹಳ್ಳಿ ಕಬಿನಿ ನದಿಯ ದಡದಲ್ಲಿರುವ ಜಾಕ್ ವೆಲ್ ಮತ್ತು ನೀರು ಶುದ್ದೀಕರಣ ಘಟಕ ಭಾಗಶಃ ಮುಳುಗಡೆಯಾಗಿದೆ. ಈ ಕಾರಣದಿಂದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗಲಿದೆ. ಪರ್ಯಾಯವಾಗಿ 145 ಗ್ರಾಮಗಳಲ್ಲಿರುವ ಬೋರ್ ವೆಲ್ಗಳನ್ನು ಉಪಯೋಗಿಸಿಕೊಂಡು ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯುವುದು ಹಾಗೂ ನೀರನ್ನು ಮಿತವಾಗಿ ಬಳಸುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ಪ್ರವಾಸಿಗರಿಗೆ ನಿರ್ಬಂಧ: ಮಳೆರಾಯನ ಆರ್ಭಟ ಮುಂದುವರೆದ ಪರಿಣಾಮ ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಾದ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಅಪಾಯ ಮಟ್ಟದಲ್ಲಿ ನೀರು ಭೋರ್ಗರೆಯುತ್ತಿದೆ.
ಕಬಿನಿ ಹೊರಹರಿವು ಮತ್ತು ಜೋರು ಮಳೆಯಿಂದ ಹೊಗೆನಕಲ್ನಲ್ಲಿ ಕಾವೇರಿ ರೌದ್ರ ನರ್ತನ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ವನ್ಯಜೀವಿಧಾಮವು ಜುಲೈ 20ರಿಂದ ಹೊಗೆನಕಲ್ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.
ಈಗಾಗಲೇ ಕಬಿನಿಯಿಂದ 70,000 ಕ್ಯೂಸೆಕ್ ಹೊರ ಹರಿವಿ ಇದ್ದು, ಹೊಗೆನಕಲ್ನಲ್ಲಿ ಕಾವೇರಿ ರಭಸದಿಂದ ಹರಿಯುತ್ತಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ. ನೀರಿನ ಹರಿವು ಕಡಿಮೆಯಾಗುವವರೆಗೂ ಹೊಗೆನಕಲ್ಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ತಾತ್ಕಾಲಿಕ ನಿರ್ಬಂಧ ಇದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೊಗೆನಕಲ್ ಆರ್ಎಫ್ಒ ಸಂಪತ್ ಪಟೇಲ್ ತಿಳಿಸಿದ್ದಾರೆ.
ಕರ್ನಾಟಕ, ತಮಿಳುನಾಡು ಎರಡೂ ರಾಜ್ಯದ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ಕೊಡುವ ಜನಪ್ರಿಯ ಜಲಪಾತ ಇದಾಗಿದ್ದು, ಕಳೆದ 4 ದಿನದಿಂದ ತಮಿಳುನಾಡು ಭಾಗದಲ್ಲಿ ಬೋಟಿಂಗ್, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಜುಲೈ 20ರಿಂದ ಕರ್ನಾಟಕದ ಭಾಗದಲ್ಲೂ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ.












Click it and Unblock the Notifications