ಉತ್ತಮ ಹಿಂಗಾರು ಮಳೆ: ರೈತರ ಕಣ್ಣಲ್ಲಿ ಹರ್ಷದ ಸುಗ್ಗಿ
ಚಾಮರಾಜನಗರ, ಅಕ್ಟೋಬರ್ 9: ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆ ಉತ್ತಮವಾಗಿ ಸುರಿದ ಕಾರಣದಿಂದಾಗಿ ಕೆರೆಕಟ್ಟೆಗಳು ತುಂಬಿದ್ದು ರೈತರು ಇದೀಗ ಹಿಂಗಾರು ಬೆಳೆಗಳನ್ನು ಬೆಳೆಯುವತ್ತ ಚಿತ್ತ ಹರಿಸಿದ್ದಾರೆ.
ಭಾರೀ ಮಳೆಗೆ ತುಳುಕಿದ ಚಿತ್ರದುರ್ಗ, ತುಂಬಿದ ಕೊಳಗಳು
ಈಗಾಗಲೇ ಜಮೀನುಗಳಲ್ಲಿ ಹಿಂಗಾರಿಗೆ ಅನುಕೂಲವಾಗುವಂತಹ ಬೆಳೆಗಳನ್ನು ಬೆಳೆಯುವ ಸಲುವಾಗಿ ಉಳುಮೆ ಮಾಡುವುದು, ಬೀಜ ಹಾಕುವುದು ಹೀಗೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರತೊಡಗಿದೆ.
ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯ ರೈತರನ್ನು ಬರ ಕಾಡಿತ್ತು. ನೀರಿಲ್ಲದ ಕಾರಣ ಕೃಷಿ ಮಾಡುವುದಿರಲಿ ಜನ ಜಾನುವಾರುಗಳಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಸುರಿದ ಮಳೆ ರೈತರಲ್ಲಿ ಆಶಾಭಾವನೆ ಮೂಡಿಸಿದೆ. ತಾಲೂಕು ವ್ಯಾಪ್ತಿಯ ಬಹುತೇಕ ಕೆರೆಗಳು ತುಂಬಿವೆ. ಜತೆಗೆ ಕೇರಳದ ವೈನಾಡಿನಲ್ಲಿ ಮಳೆಯಾದ ಕಾರಣ ಕಬಿನಿ ಭರ್ತಿಯಾಗಿ ನೀರು ಕಾಲುವೆಗಳಿಗೆ ಹರಿದಿದೆ.
ಮುಂಗಾರು ಸಮರ್ಪಕವಾಗಿಲ್ಲದ ಕಾರಣದಿಂದ ರೈತರು ಕಬ್ಬು ಹಾಗೂ ಭತ್ತವನ್ನು ನಾಟಿ ಮಾಡದಂತೆ ಸೂಚನೆ ನೀಡಲಾಗಿತ್ತು. ಅದರಂತೆ ಯಾರೂ ಕೂಡ ಈ ಬೆಳೆಯನ್ನು ಬೆಳೆದಿರಲಿಲ್ಲ. ಇದೀಗ ಮಳೆ ಬಂದಿದ್ದು ಕೆರೆಕಟ್ಟೆಗಳಲ್ಲಿ ನೀರು ತುಂಬಿರುವುದರಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿರುವ ಕಾರಣದಿಂದಾಗಿ ಮತ್ತೆ ಕೆಲವು ರೈತರು ಭತ್ತ ಬೆಳೆಯಲು ಮುಂದಾಗಿ ಅಲ್ಪಾವಧಿಯ ಭತ್ತದ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಇನ್ನೊಂದೆಡೆ ರೈತರು ತರಕಾರಿಯನ್ನು ಬೆಳೆಯುತ್ತಿದ್ದಾರೆ.
ಹಲವು ವರ್ಷಗಳಿಂದ ಮಳೆಯಾಗದೆ ಒಣಗಿದ ಜಮೀನುಗಳಲ್ಲಿ ಈಗ ಹಸಿರು ಕಾಣಿಸಿದ್ದು ಹಿಂಗಾರು ಮಳೆಯ ಪವಾಡದಿಂದಾಗಿ ರೈತಾಪ ವರ್ಗ ಖುಷಿಯಾಗಿರುವುದು ಕಂಡು ಬರುತ್ತಿದೆ.