ಚಾಮರಾಜನಗರದಲ್ಲಿ ಹಣದ ಆಸೆಗೆ ಮಗು ಮಾರಿದ್ದ ತಂದೆ; ದೀಪು ಬುದ್ಧೆಯಿಂದ ಪ್ರಕರಣ ಬಯಲಿಗೆ
ಚಾಮರಾಜನಗರ, ಸೆಪ್ಟೆಂಬರ್, 20: ಚಾಮರಾಜನಗರದಲ್ಲಿ ಹಣದ ಆಸೆಗಾಗಿ ಮಗುವನ್ನು ಮಾರಾಟ ಮಾಡಿರುವ ಕಳವಳಕಾರಿ ಘಟನೆ ನಡೆದಿದೆ. ದುಡಿದು ತನ್ನ ಮಗುವನ್ನು ಸಾಕಿ ಸಲಹಬೇಕಿದ್ದ ತಂದೆಯೇ, ಹಣದ ಆಸೆಯಿಂದ ಮಗುವನ್ನು ಮಾರಿದ್ದಾನೆ. ಇದೀಗ ಹೆತ್ತ ಕಂದಮ್ಮನಿಗಾಗಿ ತಾಯಿ ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ.
ಚಾಮರಾಜನಗರದ ಕೋರ್ಟ್ ರಸ್ತೆ ಬಡಾವಣೆಯಲ್ಲಿ ವಾಸವಿರುವ ಹೋಟೇಲ್ ಕಾರ್ಮಿಕ ಬಸಪ್ಪ (35), ನಾಗವೇಣಿ ದಂಪತಿಗೆ 7 ವರ್ಷದ ಗಂಡು ಮಗು ಇತ್ತು. 25 ದಿನಗಳ ಹಿಂದೆಯಷ್ಟೇ ಎರಡನೇ ಹೆರಿಗೆಯಲ್ಲಿ ಇವರಿಗೆ ಮತ್ತೊಂದು ಗಂಡು ಮಗು ಜನಿಸಿತ್ತು. ಆ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನಿಗೆ 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. 6 ದಿನಗಳ ಹಿಂದೆ ಮಗುವನ್ನು ಮಾರಾಟ ಮಾಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಗುವಿಗಾಗಿ ತಾಯಿ ಗೋಳಾಟ
ಗಂಡ ನೀಡುತ್ತಿದ್ದ ಹಿಂಸೆ ತಾಳಲಾರದೆ ಹೆಂಡತಿ ಮಗುವನ್ನು ಕೊಟ್ಟಿದ್ದಳು. ಇದೀಗ ಮಗುವನ್ನು ವಾಪಸ್ ಕೊಡಿಸಿ ಎಂದು ನಾಗವೇಣಿ ಕಣ್ಣೀರಿಡುತ್ತಿದ್ದಾಳೆ. ನಾಗವೇಣಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ತನಗೆ ಸಾಲದ ಹೊರೆ ಇದೆ. ಆದ್ದರಿಂದ ಮಗು ಮಾರಾಟ ಮಾಡೋಣ ಎಂದು ಪತಿ ಬಸಪ್ಪ ಒತ್ತಾಯಿಸುತ್ತಿದ್ದ. ಆಗ ಪತಿ ಮಗುವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿದ್ದರೆ ಎಂದು ನಾಗವೇಣಿ ತಿಳಿಸಿದ್ದಾರೆ. ತಂದೆ-ತಾಯಿ ಇಲ್ಲದ ಅನಾಥೆಯಾದ ನನಗೆ, ನನ್ನ ಮೊದಲನೇ ಮಗನಿಗೆ ದಿಕ್ಕಿಲ್ಲದಂತೆ ಆಗುತ್ತದೆ ಎನ್ನುವ ಭಯದಿಂದ ಮಗು ಕೊಟ್ಟುಬಿಟ್ಟಿದ್ದೇನೆ. ಹೆರಿಗೆಯಾದ ಬಳಿಕ ಆಸ್ಪತ್ರೆಯಿಂದ ಮನೆಗೆ ಬಂದ ಕೆಲವೇ ದಿನಗಳಲ್ಲಿ ಗಾಳೀಪುರದ ವ್ಯಕ್ತಿಯೊಬ್ಬರು ಬಂದು ಮೊಬೈಲ್ನಲ್ಲಿ ಮಗುವಿನ ಫೋಟೋ ತೆಗೆದುಕೊಂಡು ಹೋಗಿದ್ದರು.

ನಾಲ್ಕೆದು ದಿನಗಳ ನಂತರ ನಮ್ಮನ್ನು ಗಾಳೀಪುರದ ಮನೆಯೊಂದಕ್ಕೆ ಕರೆಸಿಕೊಂಡು ಮಗುವನ್ನು ಬೇರೆಯವರಿಗೆ ಕೊಡಿಸಿದರು. ನಮ್ಮಿಂದ ಬಿಳಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದರು. ಆಗ ನನ್ನ ಗಂಡ 50 ಸಾವಿರ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ನಾಗವೇಣಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಮಗು ಕೊಟ್ಟ ಮೇಲೆ ಕೊರಗಿ ಕಣ್ಣೀರಿಟ್ಟಿದ್ದೇನೆ. ನನ್ನ ಎದೆಯಲ್ಲಿ ಹಾಲು ಜಿನುಗುತ್ತಿತ್ತು. ನನ್ನ ಪತಿ ಬಳಿ ಮಗು ವಾಪಸ್ ಕೊಡಿಸಿ ಎಂದು ಕೇಳಿಕೊಂಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ತೋರಿಸಿ ಮಗುವಿನ ವಿಚಾರ ಎತ್ತಬಾರದು ಅಂತಾ ಮಾತು ತೆಗೆದುಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡರು.
ದೀಪು ಬುದ್ಧೆಯಿಂದ ಮಗು ಮಾರಾಟ ಪ್ರಕರಣ ಬೆಳಕಿಗೆ
ನಂತರ ನಾಗವೇಣಿ ಗಂಡ ಮಾತನಾಡಿದ್ದು, ತಾನು ಮಾಡಿದ್ದು ತಪ್ಪು. ಕಷ್ಟ ಇದ್ದುದ್ದರಿಂದ ಮಗು ಕೊಟ್ಟುಬಿಟ್ಟಿದ್ದೇನೆ. ಮಾರಾಟ ಮಾಡಿಲ್ಲ, ಮಗು ನೀಡಿದ್ದಕ್ಕೆ ಪತ್ನಿ ಚಿಕಿತ್ಸೆಗಾಗಿ ಹಣ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ ಏನೇ ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ. ನನ್ನ ಮಗು ವಾಪಸ್ ಕೊಟ್ಟರೇ ಸಾಕು ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತೆ ಮತ್ತು ಸಂಶೋಧನಾ ವಿದ್ಯಾರ್ಥಿ ಆಗಿರುವ ದೀಪು ಬುದ್ಧೆ ಮೂಲಕ ಈ ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ. ನೆರೆ ಹಾವಳಿಯಿಂದ ಲೈಂಗಿಕ ಅಲ್ಪಸಂಖ್ಯಾತರ ಜೀವನ ಸ್ಥಿತಿಗತಿ ಅರಿಯಲು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಮಕ್ಕಳ ಕಲ್ಯಾಣ ಸಮಿತಿಗೆ ವಿಚಾರವನ್ನು ಮುಟ್ಟಿಸಿದ್ದಾರೆ. ನಂತರ ಲೈಂಗಿಕ ಅಲ್ಪಸಂಖ್ಯಾತೆ ದೀಪು ಬುದ್ಧೆ ಬೇರೆ-ಬೇರೆಯಾದ ತಾಯಿ ಮಗುವನ್ನು ಒಂದು ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈ ಘಟನೆ ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.












Click it and Unblock the Notifications