ಹಸು, ಮೇಕೆ ಸಾಕಬೇಡಿ ಎಂದು ನೋಟಿಸ್, ಅರಣ್ಯ ಇಲಾಖೆ ವಿರುದ್ಧ ಗೋಪಿನಾಥಂ ಗ್ರಾಮಸ್ಥರ ಆಕ್ರೋಶ
ಚಾಮರಾಜನಗರ, ಡಿಸೆಂಬರ್, 22: ಹೈನುಗಾರಿಕೆಯಿಂದಲೇ ಜೀವನ ಕಟ್ಟಿಕೊಂಡು ಬದುಕು ಸುಂದರವಾಗಿಸಿಕೊಳ್ಳಿ ಎಂದು ಸರ್ಕಾರ ಪ್ರೋತ್ಸಾಹಿಸಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಹೆಚ್ಚು ಹಸು-ಮೇಕೆ ಸಾಕಬೇಡಿ ಎಂದು ಸಾರ್ವಜನಿಕ ವಲಯಗಳಲ್ಲಿ ನೋಟಿಸ್ ಅಂಟಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಡವಟ್ಟಿನ ಸಲಹೆಯೊಂದನ್ನು ಕೊಟ್ಟಿದೆ. ಅಗತ್ಯವಿರುವಷ್ಟು ಮಾತ್ರ ಹಸು-ಮೇಕೆ ಸಾಕಿ, ಹೆಚ್ಚಿನವುಗಳನ್ನು ಬೇರೆಡೆಗೆ ಸಾಗಿಸಬೇಕು. ಜಾನುವಾರಗಳನ್ನು ಕಾಡಿಗೆ ಬಿಡುವುದರಿಂದ ಅರಣ್ಯ ನಾಶವಾಗುತ್ತಿದೆ ಎಂದು ಹೇಳಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಎರಡು ದಿನಗಳ ಕಾಲ ಟಿಆರ್ ತಂಡದವರು ಗೋಪಿನಾಥಂ ವಲಯಕ್ಕೆ ಭೇಟಿ ನೀಡಿದ್ದ ವೇಳೆ ಹೆಚ್ಚಿನ ದನಕರುಗಳು ಇದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಗುವಳಿಗೆ ಬೇಕಾದಷ್ಟು ಹಸು-ಮೇಕೆ ಇಟ್ಟುಕೊಂಡು ಉಳಿದವುಗಳನ್ನು ಬೇರೆಡೆಗೆ ಸಾಗಿಸಬೇಕು. ಅರಣ್ಯದೊಳಗೆ ದನ-ಮೇಕೆ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರಣ್ಯ ಇಲಾಖೆ ವಿರುದ್ದ ರೊಚ್ಚಿಗೆದ್ದ ಜನ
ಅರಣ್ಯ ಇಲಾಖೆ ಕೊಟ್ಟಿರುವ ಈ ನೋಟಿಸ್ಗೆ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಆಕ್ರೋಶ ಹೊರಹಾಕಿದ್ದಾರೆ. ಗೋರಕ್ಷಣೆ ಎಂದು ಸರ್ಕಾರ ಕಾಯ್ದೆ ಮಾಡಿದೆ. ಆದರೆ ಅರಣ್ಯ ಇಲಾಖೆ ಹಸುಗಳನ್ನೇ ಸಾಕಬೇಡಿ ಎನ್ನುತ್ತಿದೆ. ಕಾಡಂಚಿನ ಜನರು ಜಾನುವಾರುಗಳನ್ನು ಮೇಯಿಸಲು ಅವಕಾಶ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ ಅರಣ್ಯ ಇಲಾಖೆ ಮಾತ್ರ ಈ ನೋಟಿಸ್ ಕೊಟ್ಟಿದೆ. ಇನ್ನೊಂದು ವಾರದಲ್ಲಿ ನೋಟಿಸ್ ಅನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಒಟ್ಟಿನಲ್ಲಿ ಈ ವಿವಾದಾತ್ಮಕ ನೋಟಿಸ್ನಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ನೋಟಿಸ್ ವಾಪಸ್ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮನೆಯ ಸದಸ್ಯನ ಸ್ಥಾನ ಪಡೆದುಕೊಂಡ ಬೆಕ್ಕು
ಇತ್ತೀಚಿನ ದಿನಗಳಲ್ಲಿ ಬೆಕ್ಕು ಮತ್ತು ಶ್ವಾನ ಪ್ರಿಯರು ಅವುಗಳನ್ನು ತಮ್ಮ ಮನೆಯ ಸದಸ್ಯನಂತೆ ನೋಡಿಕೊಂಡು ಮುದ್ದಾಗಿ ಸಾಕುತ್ತಾರೆ. ಅದರಲ್ಲೂ ಸಾಕು ಪ್ರಾಣಿಗಳಿಗೆ ಹುಟ್ಟುಹಬ್ಬ ಹಾಗೂ ಸೀಮಂತದಂತಹದ ಸಂಭ್ರಮಾಚರಣೆ ಮಾಡುವುದು ಸಾಮಾನ್ಯವಾಗಿದೆ. ಬೆಕ್ಕು ಎಂದರೆ ಯಾರಿಗೆ ಇಷ್ಟ ಇರುವುದಿಲ್ಲ. ಅದರ ತುಂಟಾಟ, ಜನರೊಂದಿಗೆ ಅವುಗಳು ಬೇರೆಯುವ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಚಾಮರಾಜನಗರ ಮನೆಯೊಂದರ ಬೆಕ್ಕು, ಮನೆಯ ಪೆಟ್ ಅಥವಾ ಸಾಕು ಪ್ರಾಣಿ ಎನ್ನುವುದಕ್ಕಿಂತ ಹೆಜ್ಜೆ ಮುಂದಕ್ಕೆ ಹೋಗಿ ಮನೆಯ ಮಗಳಾಗಿ ಸ್ಥಾನ ಪಡೆದುಕೊಂಡಿದೆ.
ಬೆಕ್ಕಿಗೆ ಸುಬ್ಬಿ ಎಂದು ಹೆಸರಿಟ್ಟ ದಂಪತಿ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿಯಲ್ಲಿ ಶಿಕ್ಷಕರಾಗಿರುವ ವೆಂಕಟರಮಣ ಶೆಟ್ಟಿ ಹಾಗೂ ಅವರ ಪತ್ನಿ ನಿರ್ಮಲಾ ಅವರಿಗೆ ಬೆಕ್ಕುಗಳೆಂದರೆ ಅತೀ ಪ್ರೀತಿ. ಬಲು ಅಕ್ಕರೆ. ಹೀಗಾಗಿ ಅವರ ಮನೆಯಲ್ಲಿ ಸಾಕಿರುವ ಬೆಕ್ಕಿಗೆ ಮನೆಯ ಸದಸ್ಯನ ಸ್ಥಾನವನ್ನು ಕೊಟ್ಟಿದ್ದಾರೆ. ಆ ಬೆಕ್ಕಿಗೆ ಸುಬ್ಬಿ ಎಂದು ಹೆಸರಿಟ್ಟಿದ್ದು, ಮುದ್ದಾಗಿ ನೋಡಿಕೊಂಡಿದ್ದಾರೆ. ಇದೀಗ ಸುಬ್ಬಿ ಗರ್ಭಿಣಿಯಾಗಿದ್ದು, ಇನ್ನೇನು ಕೆಲವೇ ದಿನದಲ್ಲಿ ಮುದ್ದಾದ ಮರಿಗಳಿಗೆ ಜನ್ಮ ನೀಡಲಿದ್ದಾಳೆ. ಹೀಗಾಗಿ ತಮ್ಮ ಮಗಳಂತಿರುವ ಸುಬ್ಬಿಗೆ ವೆಂಕಟರಮಣ ಶೆಟ್ಟಿ ಹಾಗೂ ಅವರ ಪತ್ನಿ ನಿರ್ಮಲಾ ಸೀಮಂತ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ವೆಂಕಟರಮಣ ಹಾಗೂ ನಿರ್ಮಲಾ ಅವರಿಗೆ ಇಬ್ಬರು ಪುತ್ರರಿದ್ದು ಮಗಳಿಲ್ಲ ಎಂಬ ಕೊರಗನ್ನು ಸುಬ್ಬಿ ನಿವಾರಿಸಿದ್ದಾಳಂತೆ. ತಮ್ಮ ಮನೆಯ ಸುಬ್ಬಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ನಿರ್ಮಲಾ ಅವರು ಅದಕ್ಕಿಷ್ಟವಾದ ಆಹಾರ, ತಿನಿಸು ಕೊಟ್ಟು ವಿಶೇಷ ಆರೈಕೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿಕ್ಷಕ ವೆಂಕಟರಮಣ ಶೆಟ್ಟಿ " ಹೆಣ್ಣು ಮಕ್ಕಳಿಲ್ಲದ ಕಾರಣ ಪ್ರೀತಿಯಿಂದ ಹೆಣ್ಣು ಬೆಕ್ಕನ್ನು ಸಾಕಿ ಅದಕ್ಕೆ ಪ್ರೀತಿಯಿಂದ ಸುಬ್ಬಿ ಎಂದು ಹೆಸರಿಡಲಾಗಿದೆ. ಪ್ರತಿನಿತ್ಯ ಅದಕ್ಕೆ ಇಷ್ಟವಾದ ತಿನಿಸನ್ನು ಕೊಟ್ಟು_ಸ್ನಾನ ಮಾಡಿಸಿ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳಿಗೆ ಸೀಮಂತ ಮಾಡುವ ಹಾಗೆ ಫಲ ತಾಂಬೂಲ, ತಿನಿಸುಗಳನ್ನು ಇಟ್ಟು ಹೊಸ ಬಟ್ಟೆ ತೊಡಿಸಿ ಸಂಪ್ರದಾಯದಂತೆ ಶಾಸ್ತ್ರ ಮಾಡಿ ಆರತಿ ಬೆಳಗಿ ಶುಭ ಹಾರೈಸಿದ್ದೆವೆ ಎಂದು ತಿಳಿಸಿದರು. ವೇಗದ ಬದುಕಿನಲ್ಲಿ ಪ್ರಾಣಿಗಳನ್ನು ಸಾಕಿ ಸಲುಹುವುದೇ ಬೇಡ ಎನ್ನುವವರ ಮಧ್ಯ ವೆಂಕಟರಮಣ ಶೆಟ್ಟಿ ಬೆಕ್ಕಿಗೆ ಮಗಳ ಸ್ಥಾನ ಕೊಟ್ಟು ಸೀಮಂತ ಮಾಡಿರುವುದು ವಿಶೇಷವಾಗಿದೆ.