ಗೋಪಾಲಸ್ವಾಮಿ ದೇಗುಲದಲ್ಲಿ ಆನೆ ಕಾಟ, ಭಕ್ತರಿಗೆ ಪ್ರಾಣ ಸಂಕಟ
ಗುಂಡ್ಲುಪೇಟೆ, ಡಿಸೆಂಬರ್ 10: ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಕಾಡಾನೆ ಬರದಂತೆ ತಡೆಗಟ್ಟಬೇಕು ಎಂಬುದು ಪ್ರವಾಸಿಗರು ಮತ್ತು ಭಕ್ತರ ಆಗ್ರಹವಾಗಿದೆ.
ಕಾಡಾನೆ ಪ್ರತಿ ದಿನವೂ ಸಂಜೆ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಆಗಮಿಸಿ ಅನ್ನದಾಸೋಹದ ಅಳಿದುಳಿದ ಅನ್ನ, ಬಾಳೆ ಎಲೆ ಹಾಗೂ ತರಕಾರಿಗಳನ್ನು ತಿನ್ನುತ್ತಿರುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲ ಇದೊಂದು ಸೋಜಿಗದ ವಿಷಯವಾಗಿ ಎಲ್ಲರ ಗಮನಸೆಳೆದಿತ್ತು.
ಈ ಕಾಡಾನೆಯನ್ನು ಹೀಗೆಯೇ ಬಿಟ್ಟರೆ ಅಪಾಯ ತಪ್ಪಿದಲ್ಲ. ಯಾವಾಗ ಬೇಕಾದರೂ ಅದು ಜನರ ಮೇಲೆ ಎರಗುವ ಭಯವಿರುವುದರಿಂದಾಗಿ ಅದನ್ನು ಕಾಡಿಗೆ ಅಟ್ಟುವ ಮೂಲಕ ದೇಗುಲಕ್ಕೆ ಬಾರದಂತೆ ನೋಡಿಕೊಳ್ಳಬೇಕೆಂಬುದು ಭಕ್ತರ ಒತ್ತಾಯವಾಗಿದೆ.
ಹಾಗೆ ನೋಡಿದರೆ ಕಾಡಾನೆ ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲಿಯೂ ಆಗಮಿಸಿ ಯಾರಿಗೂ ತೊಂದರೆ ನೀಡದೆ ಅಲ್ಲಿಯೇ ಸುತ್ತಾಡುತ್ತಾ ಪಾಕಶಾಲೆಯ ಎದುರು ನಿಂತು ಪ್ರಸಾದ ನೀಡುವವರೆಗೂ ಕದಲುತ್ತಿಲ್ಲ. ಕೆಲವೊಮ್ಮೆ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟಲು ಪ್ರಯತ್ನ ನಡೆಸಿದರೂ ಮತ್ತೆ ಸ್ವಲ್ಪ ಹೊತ್ತಿನಲ್ಲಿಯೇ ಹಿಂದುರುಗುತ್ತಿದೆಯಂತೆ.
ಸಂಜೆಯಾಗುತ್ತಿದ್ದಂತೆ ದೇವಸ್ಥಾನದ ಪ್ರವೇಶದ್ವಾರದ ಎದುರು ಬಂದು ಹಣ್ಣು, ಬೆಲ್ಲ, ತೆಂಗಿನಕಾಯಿ ನೀಡುವವರೆಗೂ ಕದಲದೆ ನಿಲ್ಲುತ್ತಿರುವುದು ಅಚ್ಚರಿಯಂತೆ ಕಂಡರೂ ಇದರಿಂದ ಮುಂದೊಂದು ದಿನ ಅಪಾಯ ಇದ್ದೇ ಇದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.
ಈಗಾಗಲೇ ಈ ದೃಶ್ಯವನ್ನು ಸೆರೆಹಿಡಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಇಲ್ಲಿಯವರೆಗೆ ಈ ಆನೆ ಯಾರ ಮೇಲೂ ದಾಳಿ ನಡೆಸಿಲ್ಲ ಎನ್ನಲಾಗುತ್ತಿದೆ. ಆದರೂ ಮುಂದಿನ ದಿನಗಳಲ್ಲಿ ಇದೇ ರೀತಿ ಇರುತ್ತದೆ ಎಂಬ ನಂಬಿಕೆಯಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕಾಡಾನೆ ದೇಗುಲಕ್ಕೆ ಬರದಂತೆ ತಡೆಗಟ್ಟುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.