ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಹೊಸ ಸಮಸ್ಯೆ
ಚಾಮರಾಜನಗರ, ಸೆಪ್ಟೆಂಬರ್ 29: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ರಾಜಗೋಪುರಕ್ಕೆ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಇದರಿಂದ ಭಕ್ತರಿಗೆ ಪರ್ಯಾಯ ಮಾರ್ಗವಿಲ್ಲದೇ ಮೆಟ್ಟಿಲುಗಳ ಮೂಲಕ ತೆರಳಲು ತೊಂದರೆಯಾಗುತ್ತಿದೆ.
ಬಿಳಿಗಿರಿರಂಗನಬೆಟ್ಟಕ್ಕೆ ದಿನನಿತ್ಯ ಭಕ್ತರು ಹಾಗೂ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರ, ರಾಜಗೋಪುರ ನಿರ್ಮಾಣ ಮಾಡಲಾಗಿದೆ. ಉಳಿದಂತೆ ರಾಜಗೋಪುರಕ್ಕೆ ಇರುವ ಹಳೆಯ ಮೆಟ್ಟಿಲುಗಳನ್ನು ಕಿತ್ತು ಹಾಕಿ ಹೊಸ ಮೆಟ್ಟಿಗಳು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಸ್, ಕಾರುಗಳ ಮೂಲಕ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರು ಬೆಟ್ಟದ ರಥದ ಬೀದಿಯಲ್ಲಿ ಇಳಿದು ಮೆಟ್ಟಿಲುಗಳ ಮೂಲಕ ದೇವಸ್ಥಾನಕ್ಕೆ ತೆರಳುವುದು ರೂಢಿ. ಆದರೆ, ಹೊಸ ಮೆಟ್ಟಿಲುಗಳ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಿರುವುದರಿಂದ ದೇವಸ್ಥಾನಕ್ಕೆ ತೆರಳಲು ಮೆಟ್ಟಿಲುಗಳಿಲ್ಲ. ಇದರಿಂದ ರಥದ ಬೀದಿಯಿಂದರಾಮ ಮಂದಿರದ ತನಕ ಮೆಟ್ಟಿಲು ಹತ್ತುವ ಭಕ್ತರು ಅಲ್ಲಿಂದ ಮೇಲಕ್ಕೆ ತೆರಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಟ್ಟಿಲುಗಳು ಇಲ್ಲದ ಕಾರಣ ರಾಮಮಂದಿರದ ಬಳಿಯಿಂದ ಅಕ್ಕಪಕ್ಕದ ಮನೆಯ ಕಿರಿದಾದ ಜಾಗಗಳಲ್ಲಿಯೇ ಭಕ್ತರು ತೆರಳುತ್ತಿದ್ದಾರೆ. ಇನ್ನೂ ಕೆಲವರಿಗೆ ಯಾವ ಕಡೆ ಹೋಗಬೇಕು ಎಂದು ಗೊತ್ತಾಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಕೂಡ ಮಾಡಿಲ್ಲ ಎನ್ನುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಟ್ಟದಲ್ಲಿರುವ ಬಸ್ ನಿಲ್ದಾಣದ ಬಳಿಯಿಂದ ರಸ್ತೆ ಮೂಲಕ ದೇವಸ್ಥಾನಕ್ಕೆ ತೆರಳಲು ಅವಕಾಶವಿದೆ. ಅಲ್ಲಿಯೂ ಕೂಡ ಯಾವುದೇ ನಾಮಫಲಕ ಅಳವಡಿಸದ ಕಾರಣ ರಸ್ತೆ ಮೂಲಕ ತೆರಳದೇ ಮೆಟ್ಟಿಲುಗಳ ಬಳಿ ಬರುವ ಭಕ್ತರು ದೇವಸ್ಥಾನಕ್ಕೆ ದಾರಿ ಇಲ್ಲದೇ ಪರದಾಡುತ್ತಿದ್ದಾರೆ. ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದರ್ಶನ ಪಡೆಯಲು ಭಕ್ತರು ನೂರಾರು ಕಿಲೋ ಮೀಟರ್ ಕ್ರಮಿಸಿ ದೇವಸ್ಥಾನಕ್ಕೆ ಬರುತ್ತಾರೆ. ಈ ವೇಳೆ ಇಂತಹ ಅವ್ಯವಸ್ಥೆಗಳಿಂದ ಭಕ್ತರು ಪರದಾಡುವಂತಾಗಿದೆ.
ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ಅಂದರೆ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಆಡಳಿತ ಮಂಡಳಿ ಅಥವಾ ಸ್ಥಳೀಯ ಅಧಿಕಾರಿಗಳು ಇತ್ತ ಗಮನಹರಿಸಿ ಮೆಟ್ಟಿಲುಗಳ ಮೂಲಕ ಹತ್ತುವ ಭಕ್ತರಿಗೆ ರಾಮಮಂದಿರದಿಂದ ಮೇಲಕ್ಕೆ ತೆರಳಲು ಪರ್ಯಾಯ ಮಾರ್ಗ ಕಲ್ಪಿಸಬೇಕು. ಇಲ್ಲದಿದ್ದರೆ ಬಸ್ ನಿಲ್ದಾಣದ ಬಳಿಯೇ ನಾಮಫಲಕ ಅಳವಡಿಸಿ ರಸ್ತೆ ಮೂಲಕ ತೆರಳಲು ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಸ್ಥಳೀಯ ಭಕ್ತರ ಆಗ್ರಹವಾಗಿದೆ.












Click it and Unblock the Notifications