ಸರಳ ವಿವಾಹವಾಗಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಚಾಮರಾಜನಗರದ ಜೋಡಿ
ಚಾಮರಾಜನಗರ, ಏಪ್ರಿಲ್ 29: ವಧು-ವರರು ಸರಳ ವಿವಾಹವಾಗಿ ಐವತ್ತು ಸಾವಿರ ರೂಪಾಯಿವನ್ನು ಕೊರೊನಾ ಪರಿಹಾರ ನಿಧಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರ ಮೂರ್ತಿ ಹಾಗೂ ಚಾಮರಾಜನಗರ ತಾಲ್ಲೂಕಿನ ಹರವೆ ಗ್ರಾಮದ ವಧು ಮೇಘನಾ ಎಂಬ ವಧು-ವರರೇ ಸರಳ ವಿವಾಹದೊಂದಿಗೆ ಹಣವನ್ನು ಪರಿಹಾರ ನಿಧಿಗೆ ನೀಡಿದವರು.
Recommended Video
ಮೂಲತಃ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಚಂದ್ರಶೇಖರಮೂರ್ತಿ ಅವರ ವಿವಾಹವು ಹರವೆ ಗ್ರಾಮದ ಮೇಘನಾ ಅವರೊಂದಿಗೆ ನಿಶ್ಚಯವಾಗಿತ್ತು. ಅಲ್ಲದೆ ಚಾಮರಾಜನಗರದ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ವರ ಮತ್ತು ವಧು ಇಬ್ಬರು ಸೇರಿ ಸರಳ ವಿವಾಹ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದು, ಅದರಂತೆ ವಧುವಿನ ಸ್ವಗೃಹ ಹರವೆ ಗ್ರಾಮದಲ್ಲಿ ಬುಧವಾರ ವಿವಾಹವಾದರು.
ವಿವಾಹ ಕಾರ್ಯದಲ್ಲಿ ವಧುವರರ ತಂದೆ ತಾಯಿ ಸೇರಿದಂತೆ ಕೆಲವೇ ಕೆಲವರು ಪಾಲ್ಗೊಂಡಿದ್ದರು. ಸರಳ ವಿವಾಹದ ಬಗ್ಗೆ ತಿಳಿದ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸ್ಥಳಕ್ಕೆ ಆಗಮಿಸಿ ವಧು ವರರಿಗೆ ಶುಭ ಹಾರೈಸಿದ್ದಾರೆ.

ವಿವಾಹದ ನಂತರ ವಧು ವರರು ತಮ್ಮ ವಿವಾಹಕ್ಕೆ ಖರ್ಚು ಮಾಡುವ ಹಣದಲ್ಲಿ ದೇಶದ ಪ್ರಧಾನ ಮಂತ್ರಿಗಳ ನಿಧಿಗೆ 25 ಸಾವಿರ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಸಾವಿರ, ಒಟ್ಟು 50 ಸಾವಿರ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದ್ದಾರೆ.












Click it and Unblock the Notifications