ಕೊಳ್ಳೇಗಾಲ: ಸಾಲಬಾಧೆ ತಾಳದೇ ಮಗ, ಆತ್ಮೀಯರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ದಂಪತಿ ಆತ್ಮಹತ್ಯೆ
ಚಾಮರಾಜನಗರ, ಆಗಸ್ಟ್, 18: ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ನಗರದ ಲಕ್ಷ್ಮೀ ನಾರಾಯಣಸ್ವಾಮಿ ದೇವಾಸ್ಥಾನದ ಬೀದಿಯಲ್ಲಿ ವಾಸವಿದ್ದ ಪಿ.ಆರ್.ನಾಗೇಶ್ (55) ಹಾಗೂ ಸತ್ಯಲಕ್ಷ್ಮೀ (44) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ ಆಗಿದ್ದಾರೆ ಎಂದು ತಿಳಿದುಬಂದಿದೆ.
ಸಾಲಬಾಧೆ ತಾಳಲಾರದೆ ಪಿ.ಆರ್.ನಾಗೇಶ್ ಹಾಗೂ ಸತ್ಯಲಕ್ಷ್ಮೀ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸಾಯುವ ಮುನ್ನ ಮಗ ಗಣೇಶ್ ಮತ್ತು ಆತ್ಮೀಯರಿಗೆ ವಾಯ್ಸ್ ಮೆಸೆಜ್ ಕಳುಹಿಸಿದ್ದಾರೆ ಎನ್ನಲಾಗಿದೆ.

ಕೊಳ್ಳೇಗಾಲದಲ್ಲಿ ಕುರುಕುರೆ ಏಜೆನ್ಸಿಯನ್ನು ಪಡೆದುಕೊಂಡಿದ್ದ ಇವರು ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಖಾಸಗಿ ಹಣಕಾಸು ಕಂಪನಿಯಲ್ಲಿ ಮನೆ ಅಡಮಾನ ಇಟ್ಟು ಸಾಲವನ್ನೂ ಪಡೆಯುವುದರ ಜೊತೆಗೆ ಕೈ ಸಾಲಗಳನ್ನು ಮಾಡಿಕೊಂಡು ಸಾಲದ ಭಾರವನ್ನು ಹೊತ್ತುಕೊಂಡಿದ್ದರು.
ಇನ್ನು ಸಾಲಬಾಧೆ ತಾಳಲಾರದೇ ಭಾನುವಾರ (ಆಗಸ್ಟ್ 18) ನಸುಕಿನ ಜಾವದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ವಂತ ಅಣ್ಣನ ಮಗಳ ಮೇಲೆ ಅತ್ಯಾಚಾರ: ಸ್ವಂತ ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಚಿಕ್ಕಪ್ಪನಿಗೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ(Fast Track Special Court) ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರ ಜಿಲ್ಲೆಯವನೇ ಆದ ವೆಂಕಟೇಶ್ ಎಂಬಾತ ಶಿಕ್ಷೆಗೊಳಗಾದ ಅಪರಾಧಿ. ಸ್ವಂತ ಅಣ್ಣನ ಮಗಳಾದ ಅಪ್ರಾಪ್ತೆಯನ್ನು ಈತ ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಕೊಟ್ಟು ಅತ್ಯಾಚಾರ ಎಸಗಿದ್ದ.
ಸಾಕ್ಷ್ಯಾಧಾರಗಳಿಂದ ವೆಂಕಟೇಶ್ ಕೃತ್ಯ ಸಾಬೀತಾದ ಹಿನ್ನೆಲೆ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ನ್ಯಾ. ಎಸ್.ಜೆ.ಕೃಷ್ಣ 20 ವರ್ಷ ಕಠಿಣ ಶಿಕ್ಷೆ, 80 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಿ: ವೈದ್ಯೆ ಮೇಲೆ ಅತ್ಯಾಚಾರ ಮತ್ತು ವೈದ್ಯರ ಮೇಲೆ ಹಲ್ಲೆ ಖಂಡಿಸಿ ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಭಾನುವಾರ ಬೆಳಗ್ಗೆ ಚಾಮರಾಜೇಶ್ವರ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಅತ್ಯಾಚಾರ ಆರೋಪಿಗಳಿಗೆ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಇಲ್ಲವೇ ಎನ್ ಕೌಂಟರ್ ಮಾಡಬೇಕು ಹಾಗೂ ವೈದ್ಯರ ಮೇಲೆ ಹಲ್ಲೆ ಮಾಡುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಕೂಡಲೇ ಮಮತಾ ಬ್ಯಾನರ್ಜಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.












Click it and Unblock the Notifications