ಚಾಮರಾಜನಗರದ ದೇಗುಲಗಳಲ್ಲಿ ಇನ್ಮುಂದೆ ಕನ್ನಡದಲ್ಲೇ ಮಂತ್ರಘೋಷ
ಚಾಮರಾಜನಗರ, ಮಾರ್ಚ್ 10: ಚಾಮರಾಜನಗರ ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ಇನ್ನು ಮುಂದೆ ಸಂಸ್ಕೃತದ ಬದಲಿಗೆ ಕನ್ನಡದಲ್ಲೇ ಮಂತ್ರಘೋಷ ಮೊಳಗಲಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಕನ್ನಡದಲ್ಲಿಯೇ ಮಂತ್ರೋಚ್ಛಾರಣೆ, ಅರ್ಚನೆ, ಸಂಕಲ್ಪ, ಪೂಜಾ ವಿಧಿವಿಧಾನಗಳನ್ನು ನಡೆಸಲು ಸೂಚನೆ ನೀಡಿ ಆದೇಶ ಮಾಡಿದ್ದಾರೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲೇ ಮಂತ್ರ ಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಆದರೆ ದೇವಸ್ಥಾನಕ್ಕೆ ಹೋಗುವ ಶೇ.99ರಷ್ಟು ಮಂದಿಗೆ ಸಂಸ್ಕೃತ ಬರುವುದಿಲ್ಲ. ಹೀಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳ ಅರ್ಥವಾಗಲಿ ತಿಳಿಯುವುದಿಲ್ಲ. ಹೀಗಾಗಿ ಇಂಥ ಒಂದು ಆದೇಶವನ್ನು ಹೊರಡಿಸಲಾಗಿದೆ.
ಭಕ್ತರಿಗೂ ಮಂತ್ರದ ಬಗ್ಗೆ ತಿಳಿಯಬೇಕು
ಸಂಸ್ಕೃತದಲ್ಲಿ ಮಂತ್ರ ಪಠಣ ನಡೆಯುವುದರಿಂದ ಅರ್ಚಕರು ಯಾವ ರೀತಿ ತಮ್ಮ ಪರ ದೇವರಿಗೆ ಸಂಕಲ್ಪ, ಅರ್ಚನೆ, ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬುದು ಭಕ್ತರಿಗೆ ತಿಳಿಯುವುದಿಲ್ಲ. ಇವೆಲ್ಲವೂ ಭಕ್ತರಿಗೂ ತಿಳಿಯುವಂತಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹೊಸ ಆದೇಶವೊಂದನ್ನು ಹೊರಡಿಸಿರುವುದಾಗಿ ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ
ಅರ್ಚಕರಿಗೆ ವಿಶೇಷ ಕಾರ್ಯಾಗಾರ
ಮಂತ್ರೋಚ್ಚಾರಣೆ, ಅರ್ಚನೆ, ಸಂಕಲ್ಪ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಧಾರ್ಮಿಕ ಪದ್ಧತಿಗಳಿಗೆ ಧಕ್ಕೆ ಬಾರದಂತೆ ಹಾಗೂ ಕನ್ನಡದಲ್ಲಿಯೇ ನೆರವೇರಿಸಬೇಕು ಎಂಬ ಉದ್ದೇಶದಿಂದ ಕನ್ನಡ ಪಂಡಿತರಿಂದ ಅರ್ಚಕರಿಗೆ ವಿಶೇಷ ಕಾರ್ಯಾಗಾರವೊಂದನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಭಕ್ತರ ಪ್ರಶಂಸೆಗೆ ಪಾತ್ರವಾದ ಆದೇಶ
ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಭಕ್ತರ ಪ್ರಶಂಸಗೆ ಪಾತ್ರವಾಗಿದೆ. ಜೊತೆಗೆ ಅರ್ಚಕರು ಸಹ ಈ ಒಂದು ಆದೇಶವನ್ನು ಸ್ವಾಗತಿಸಿದ್ದು, ಕನ್ನಡ ಭಾಷೆಯಲ್ಲಿ ಮಂತ್ರ, ಶ್ಲೋಕ ಹಾಗೂ ಪೂಜಾ ವಿಧಿವಿಧಾನಗಳನ್ನು ಕನ್ನಡದಲ್ಲೇ ಮುದ್ರಿಸಿ ಪುಸ್ತಕ ರೂಪದಲ್ಲಿ ಕೊಡಬೇಕು ಹಾಗೂ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿದೆ 281 ದೇವಸ್ಥಾನಗಳು
ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ 281 ದೇವಸ್ಥಾನಗಳಿದ್ದು, ಇವುಗಳಲ್ಲಿ ವರ್ಗಗಳಿವೆ. ಎ ಗ್ರೇಡ್, ಬಿ ಗ್ರೇಡ್ ಹಾಗೂ 277 ಸಿ ಗ್ರೇಡ್ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಇದುವೆರೆಗೆ ಸಂಸ್ಕೃತದಲ್ಲಿ ಮೊಳಗುತ್ತಿದ್ದ ಮಂತ್ರ ಘೋಷಗಳು ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕನ್ನಡದಲ್ಲಿ ಕೇಳಿ ಬರಲಿದೆಯಾ ಕಾದು ನೋಡಬೇಕಿದೆ.