ಚಾಮರಾಜನಗರ : ಪ್ರಸಾದದಲ್ಲಿ ವಿಷ 11 ಸಾವು, ಇಬ್ಬರ ಬಂಧನ
ಚಾಮರಾಜನಗರ, ಡಿಸೆಂಬರ್ 14 : ಚಾಮರಾಜನಗರ ಜಿಲ್ಲೆಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅನ್ನ ಪ್ರಸಾದಕ್ಕೆ ವಿಷ ಬೆರೆಸಿದ ಶಂಕೆಯ ಹಿನ್ನಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಚಾಮರಾಜಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಸಾದ ಸೇವಿಸಿದ್ದ 11 ಭಕ್ತರು ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಕೊಳ್ಳೆಗಾಲ, ಹನೂರು, ಮೈಸೂರಿನ ಜೆಎಸ್ಎಸ್, ಕೆ.ಆರ್.ಆಸ್ಪತ್ರೆಗಳಲ್ಲಿ 60 ಕ್ಕೂ ಹೆಚ್ಚು ಭಕ್ತರು ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ 11 ಭಕ್ತರು ಮೃತಪಟ್ಟಿದ್ದು, 40ಕ್ಕೂ ಅಧಿಕ ಭಕ್ತರ ಸ್ಥಿತಿ ಗಂಭೀರವಾಗಿದೆ.

ಅನ್ನ ಪ್ರಸಾದಕ್ಕೆ ವಿಷ ಬೆರೆಸಿದ ಶಂಕೆಯ ಹಿನ್ನಲೆಯಲ್ಲಿ ಚಿನ್ನಪ್ಪಿ ಮತ್ತು ಮಾದೇಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ದೇವಾಲಯದ ಅನ್ನ ಪ್ರಸಾದದಲ್ಲಿ ಕೀಟನಾಶಕದ ಅಂಶಗಳು ಪತ್ತೆಯಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ಹನೂರಿನ ಸುಲ್ವಾಡಿ ಗ್ರಾಮದ ದೇವಾಲಯದಲ್ಲಿ ಪ್ರಸಾದ ಸೇವಿಸಿ 10 ಮಂದಿ ಮೃತಪಟ್ಟಿದ್ದು ಕೇಳಿ ತೀವ್ರ ಬೇಸರ, ಆಶ್ಚರ್ಯವಾಗಿದೆ. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನೋವು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯ ಸಿಗಲಿ. ಇನ್ನೆಂದೂ ಉತ್ಸವಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಬೇಕು. ಸದ್ಯ ಅಸ್ವಸ್ಥಗೊಂಡಿರುವವರು ಕ್ಷೇಮವಾಗಿರಲಿ.
— H D Devegowda (@H_D_Devegowda) December 14, 2018
ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಗೋಪುರ ನಿರ್ಮಾಣದ ಶಿಲಾನ್ಯಾಸದ ಪೂಜೆಯ ಅಂಗವಾಗಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸುಳವಾಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಾದ ಬಿದರಹಳ್ಳಿ, ಹಳೇ ಮಾರ್ಟಳ್ಳಿ, ತಂಡೆಮೇಡು ಗ್ರಾಮಗಳಿಂದ ನೂರಾರು ಗ್ರಾಮಸ್ಥರು ದೇವಾಲಯಕ್ಕೆ ಆಗಮಿಸಿದ್ದರು.
ಮೈಸೂರಿನ ಕೆ.ಆರ್.ಆಸ್ಪತ್ರೆ ವೈದ್ಯರಾದ ಡಾ.ರಾಜೇಶ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಮೊದಲು ಪ್ರಸಾದ ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದಾರೆ. ಆಗ ಪ್ರಸಾದವನ್ನು ಚೆಲ್ಲಲಾಗಿದೆ. ಇದರಿಂದ ದೊಡ್ಡ ದುರಂತ ತಪ್ಪಿದೆ' ಎಂದು ವೈದ್ಯರು ಹೇಳಿದ್ದಾರೆ.
ಮೃತಪಟ್ಟವರ ವಿವರ
* ವಡ್ಡಡದೊಡ್ಡಿಯ ಗೋಪಿಯಮ್ಮ (35)
* ಶಾಂತಾ (20)
* ಎಂ.ಜಿ.ದೊಡ್ಡಿಯ ಪಾಪಣ್ಣ (50)
* ಅನಿಲ್ (12)
* ದೊಡ್ಡಾನೆಯ ಅಣ್ಣಯ್ಯಪ್ಪ ತಮಡಿ
* ರಾಚಯ್ಯ
* ಕೃಷ್ಣ ನಾಯಕ್
* ದೊಡ್ಡಮಾದಯ್ಯ
* ಅನಿತಾ ಸುಲ್ವಾಡಿ (12)












Click it and Unblock the Notifications