ಸರಳ ವಿವಾಹವಾಗಿ, ಖರ್ಚಿನ ಹಣವನ್ನು ದೇಣಿಗೆ ನೀಡಿದ ರೈತ ಮುಖಂಡ
ಚಾಮರಾಜನಗರ, ಮೇ 18: ಸರಳ ಮದುವೆಯಾಗುವುದರೊಂದಿಗೆ ಈ ನವದಂಪತಿ ಮದುವೆಗೆ ಖರ್ಚು ಮಾಡುವ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ ಗ್ರಾಮದ ದೇವಾಲಯದ ನಿರ್ಮಾಣಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಡಬೂರು ಗ್ರಾಮದ ಶಂಭುಲಿಂಗಪ್ಪ ಎಂಬುವರ ಪುತ್ರ ಮಂಜುನಾಥ್ ಹಾಗೂ ಅದೇ ಗ್ರಾಮದ ಪರಮೇಶ್ವರಪ್ಪ ಎಂಬುವರ ಪುತ್ರಿ ಮಾದಲಾಂಬಿಕೆ ಎಂಬ ಜೋಡಿ ಸರಳ ವಿವಾಹವಾಗಿ ತಮ್ಮ ಮದುವೆಗೆ ವೆಚ್ಚ ಮಾಡಬೇಕಾಗಿದ್ದ ಹಣದಲ್ಲಿ ಮುಖ್ಯಮಂತ್ರಿಗಳ ಕೊವಿಡ್-19 ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ತಹಶೀಲ್ದಾರ್ ಎಂ.ನಂಜುಂಡಯ್ಯ ಅವರಿಗೆ ನೀಡಿದ್ದಾರೆ. ಅಲ್ಲದೆ ಗ್ರಾಮದಲ್ಲಿನ ವಿಘ್ನೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಎರಡು ಲಕ್ಷ ರೂಪಾಯಿಯನ್ನು ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವರ ಮಂಜುನಾಥ್ ಕಡಬೂರು ಗ್ರಾಮದ ನಿವಾಸಿಯಾಗಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ನಾಯಕ, ದಿವಂಗತ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಜೀವನದಿಂದ ಪ್ರೇರಣೆಗೊಂಡಿರುವವರು. 2004ರಲ್ಲಿ ಪೋಲಿಸ್ ಪೇದೆಯಾಗಿ ಆಯ್ಕೆಯಾಗಿದ್ದರೂ ಅದನ್ನು ತೊರೆದು ಬಳಿಕ ವಿರಾಜಪೇಟೆ ಮತ್ತು ಬೆಂಗಳೂರಿನಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು. ಆದರೆ ಅದನ್ನೂ ಬಿಟ್ಟು ಬಂದು ರೈತ ಸಂಘ ಸೇರಿ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡರು.

ಈಗ ಜಿಲ್ಲಾ ಹಸಿರು ಸೇನೆ ಸಂಚಾಲಕರಾಗಿ ಕೆಲಸ ಮಾಡುತ್ತಾ ಜೀವನೋಪಾಯಕ್ಕಾಗಿ ಗುಂಡ್ಲುಪೇಟೆಯಲ್ಲಿ ಗುಣಮಟ್ಟದ ಹನಿನೀರಾವರಿ ಉಪಕರಣಗಳ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಕೆಲವೇ ಸ್ನೇಹಿತರು ಹಾಗೂ ಬಂಧುಗಳ ಸಮ್ಮುಖದಲ್ಲಿ ತಮ್ಮ ಮನೆಯಲ್ಲಿಯೇ ಇವರು ಸರಳ ಮದುವೆಯಾದರು. ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾದಲಾಂಬಿಕೆ ಅವರನ್ನು ತಮ್ಮ ಹುಟ್ಟು ಹಬ್ಬದಂದೇ ವಿವಾಹವಾಗಿ ಆ ವಿವಾಹದ ಖರ್ಚನ್ನು ಹೀಗೆ ಸೇವೆಗೆ ಬಳಸಿದ್ದಾರೆ.












Click it and Unblock the Notifications