ಬಂಡೀಪುರದ ಖಾಲಿ ಕೆರೆಗಳಿಗೆ ಸೋಲಾರ್ ಮೋಟಾರ್ ನೀರು!
ಚಾಮರಾಜನಗರ, ಫೆಬ್ರವರಿ 08: ಬೇಸಿಗೆಯ ದಿನಗಳಲ್ಲಿ ಬಂಡೀಪುರದ ಕೆರೆಗಳಲ್ಲಿ ನೀರು ಬತ್ತಿಹೋಗಿ ವನ್ಯ ಪ್ರಾಣಿಗಳಿಗೆ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಈಗಿನಿಂದಲೇ ತಡೆಗಟ್ಟಲು ಅರಣ್ಯ ಇಲಾಖೆ ಮುಂದಾಗಿದೆ.
ಕಳೆದ ವರ್ಷ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿರುವ ಕೆರೆಗಳ ಪೈಕಿ ಬಹುತೇಕ ಕೆರೆಗಳಲ್ಲಿ ನೀರು ಬತ್ತಿಹೋಗಿ ಪ್ರಾಣಿಗಳು ನೀರಿಲ್ಲದೆ ಪರದಾಡುವಂತಾಗಿತ್ತಲ್ಲದೆ, ನೀರಿಲ್ಲದ ಪರಿಣಾಮ ನೀರನ್ನರಸಿಕೊಂಡು ತಮಿಳುನಾಡು, ಕೇರಳದತ್ತ ವಲಸೆ ಹೋಗಿದ್ದವು.
ಜೀವಜಲದ ಉಳಿವಿನ 'ಉನ್ನತ' ಕಾರ್ಯಕ್ಕೆ ನೃತ್ಯದ ಸಾಥ್!
ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯು ಸೋಲಾರ್ ಮೋಟಾರ್ ಮೂಲಕ ಬೋರ್ ವೆಲ್ ನಿಂದ ನೀರನ್ನು ಕೆರೆಗೆ ತುಂಬಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಕೆರೆಗಳು ಬರಿದಾಗುತ್ತಿರುವ ಹಿನ್ನಲೆಯಲ್ಲಿ ವನ್ಯಜೀವಿಗಳ ನೀರಿನ ದಾಹ ನೀಗಿಸಲು ಅರಣ್ಯ ಇಲಾಖೆಯು ಸೋಲಾರ್ ಮೋಟಾರ್ ಮುಖಾಂತರ ಕೆರೆಗಳಿಗೆ ನೀರು ತುಂಬಿಸುತ್ತಿದೆ.
ಬಂಡೀಪುರಕ್ಕೊಮ್ಮೆ ಸುತ್ತು ಹೊಡೆದರೆ ಇಲ್ಲಿ ಸುಮಾರು 350 ಕೆರೆಗಳಿದ್ದು, ಆ ಪೈಕಿ ಅದರಲ್ಲಿ ಬಂಡೀಪುರ ವಲಯದಲ್ಲಿ ಒಟ್ಟು 50 ಕೆರೆಗಳಿದ್ದು, ಈ ಪೈಕಿ 35 ಕೆರೆಗಳಲ್ಲಿ ಪೂರ್ಣಪ್ರಮಾಣದಲ್ಲಿ ನೀರಿದ್ದು, ಉಳಿದ 15 ಕೆರೆಗಳಲ್ಲಿ ಭಾಗಶಃ ನೀರಿದೆ.
ಮಂಡ್ಯ: ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
ಮೂಲೆಹೊಳೆ ವ್ಯಾಪ್ತಿಯ ಬಹುತೇಕ ಕೆರೆಗಳಲ್ಲಿ ನೀರಿರುವುದನ್ನು ಕಾಣಬಹುದಾಗಿದೆ. ಓಂಕಾರ್ ವಲಯದ 33ರಲ್ಲಿ 2 ಕೆರೆಗಳು ಮಾತ್ರ ಖಾಲಿಯಾಗಿದೆ. ಮದ್ದೂರು ವಲಯದಲ್ಲಿ 44ರಲ್ಲಿ 35 ಕೆರೆಗಳಲ್ಲಿ ನೀರಿದ್ದರೆ, 9 ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಹೀಗಾಗಿ ಇಲ್ಲಿನ 2 ಕೆರೆಗಳಿಗೆ ಹೊಸದಾಗಿ ಬೋರವೆಲ್ ಕೊರೆಸಿ ಸೋಲಾರ್ ಮೋಟಾರ್ ಮೂಲಕ ನೀರನ್ನು ತುಂಬಿಸಲಾಗುತ್ತಿದೆ.
ಇನ್ನು ಹೆಡಿಯಾಲದಲ್ಲಿ 28 ಕೆರೆಗಳಿದ್ದು 2 ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಗುಂಡ್ರೆ ವಲಯದಲ್ಲಿ 6 ಕೆರೆಗಳಲ್ಲಿ 3 ಕೆರೆಗಳಲ್ಲಿ ನೀರಿಲ್ಲ, ಎನ್.ಬೇಗೂರು 7 ಕೆರೆಯಲ್ಲಿ 4 ಕೆರೆಗಳಲ್ಲಿ ನೀರಿಲ್ಲದಾಗಿದೆ. ಕುಂದಕೆರೆ ವಲಯದಲ್ಲಿ 30 ಕೆರೆಗಳ ಪೈಕಿ 20 ಕೆರೆಗಳಲ್ಲಿ ನೀರಿಲ್ಲದಾಗಿದೆ. ಇಲ್ಲಿನ 3 ಕೆರೆಗಳಿಗೆ ಸೋಲಾರ್ ಮುಖಾಂತರ ನೀರನ್ನು ತುಂಬಿಸುವ ಕಾರ್ಯಪ್ರಗತಿಯಲ್ಲಿದೆ. ಮೊಳೆಯೂರು ವಲಯದಲ್ಲಿ 30ರಲ್ಲಿ 20 ಕೆರೆಗಳಲ್ಲಿ ನೀರಿಲ್ಲದಾಗಿದೆ.
ಕೆರೆಗಳಲ್ಲಿನ ಸ್ಥಿತಿಗತಿಯನ್ನು ಗಮನಿಸಿದರೆ ಈ ಬಾರಿ ಕಳೆದ ವರ್ಷದಷ್ಟು ನೀರಿನ ಸಮಸ್ಯೆ ಉದ್ಭವಿಸದಿದ್ದರೂ ಮುಂಜಾಗ್ರತಾ ಕ್ರಮವಾಗಿ ನೀರು ಕಡಿಮೆ ಇರುವ ಕೆರೆಗಳಾದ ಬಂಡೀಪುರ ವಲಯದ ನೀಲಕಂಠರಾವ್ ಕೆರೆ, ಸೊಳ್ಳೀಕಟ್ಟೆ ಕೆರೆ, ಕುಂದಕೆರೆ ವಲಯದ ಮಾಲಗಟ್ಟೆ, ಕಡಬೂರು ಕಟ್ಟೆ, ದೇವರಮಡು, ಮೊಳೆಯೂರು ವಲಯದ ಹುರುಳಿಪುರ ಕೆರೆ, ಎನ್.ಬೇಗೂರು ದೊಡ್ಡಮುತ್ತಿಗೆ ಕೆರೆಗಳಿಗೆ ಸೋಲಾರ್ ಮುಖಾಂತರ ನೀರು ತುಂಬಿಸುವ ಕೆಲಸವನ್ನು ಈಗಿನಿಂದಲೇ ಮಾಡಲಾಗುತ್ತಿದೆ.