ಚಾಮರಾಜನಗರ ಕ್ಷೇತ್ರದಲ್ಲಿ ಈ ಇಬ್ಬರೂ ನಂ .1, ಆದರೆ ಗೆಲ್ಲುವವರು?
Recommended Video
ಚಾಮರಾಜನಗರ, ಏಪ್ರಿಲ್ 24: ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದರೂ ಕೆಲವೇ ಕೆಲವು ಕ್ಷೇತ್ರಗಳ ಕಡೆಗಷ್ಟೇ ಜನ ಮತ್ತು ರಾಜಕೀಯ ನಾಯಕರು ಕುತೂಹಲದ ನೋಟ ಬೀರುತ್ತಿದ್ದಾರೆ. ಇಂತಹ ಕ್ಷೇತ್ರಗಳ ಪೈಕಿ ಚಾಮರಾಜನಗರ ಲೋಕಸಭಾ ಕ್ಷೇತ್ರವೂ ಒಂದಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದುವರೆಗೆ ಈ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್ನ ಆರ್.ಧ್ರುವನಾರಾಯಣ್ ಅವರಿಗೆ ಪೈಪೋಟಿ ನೀಡುವವರೇ ಇರಲಿಲ್ಲ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಅವರು ಸ್ಪರ್ಧಿಸಿರುವ ಕಾರಣದಿಂದ ಹಾಗೂ ಕಳೆದ ಬಾರಿಗಿಂತಲೂ ಹೆಚ್ಚು ಮತದಾನವಾಗಿರುವುದರಿಂದ ಗೆಲುವು ಯಾರಿಗೆ ಎಂಬ ಕುತೂಹಲ ಜನರಲ್ಲಿದೆ.
ಚಾಮರಾಜನಗರದಲ್ಲಿ ಹ್ಯಾಟ್ರಿಕ್ ಸರದಾರರಾಗುವರೇ ಧ್ರುವನಾರಾಯಣ್?
ಹೀಗಾಗಿಯೇ ತಮ್ಮ ನಾಯಕರು ಗೆಲ್ಲುತ್ತಾರೆ ಎಂಬ ಧೈರ್ಯದಿಂದ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಕೆಲವರು ಹಣ ಗದ್ದೆ, ಹೊಲ, ವಾಹನ ಮತ್ತು ಆಭರಣಗಳನ್ನು ಪಣಕ್ಕಿಟ್ಟು ಒಳಗಿನೊಳಗೆ ಬಾಜಿ ಕಟ್ಟುತ್ತಿದ್ದಾರೆ.
ಹಾಗೆನೋಡಿದರೆ ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಶೇ.76.46ದಾಖಲೆ ಮತದಾನವಾಗಿದ್ದು, ಈ ಫಲಿತಾಂಶವೇ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಕಳೆದ ಕೆಲವು ವರ್ಷಗಳಿಂದ ಸುಲಭವಾಗಿಯೇ ಗೆಲುವು ಕಾಣುತ್ತಿದ್ದ ಧ್ರುವನಾರಾಯಣ ಅವರು ತನ್ನ ರಾಜಕೀಯ ಗುರುವಿನ ವಿರುದ್ಧವೇ ಸ್ಪರ್ಧೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ನಂ .1 ಸಂಸದ
ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಸಂತೇಮರಹಳ್ಳಿ ಮತ್ತು ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದಲ್ಲಿ ಒಂದೊಂದು ಬಾರಿ ಶಾಸಕರಾಗಿದ್ದರಲ್ಲದೆ, 2009 ರಿಂದ 2019 ವರೆಗೆ ಎರಡು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು ಈಗಾಗಲೇ ಉತ್ತಮ ಸಂಸದ ಎಂದು ಹೆಸರಿಗೆ ಪಾತ್ರವಾಗಿದ್ದು, ರಾಜ್ಯದ ನಂ .1 ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಧ್ರುವ ನಾರಾಯಣ ಅವರ ಅವಧಿಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜನ ಕುತೂಹಲದಿಂದ ನೋಡುತ್ತಿದ್ದಾರೆ
ಈ ಬಾರಿ ಇಲ್ಲಿ ಮೋದಿ ಹವಾ ಮತ್ತು ಶ್ರೀನಿವಾಸಪ್ರಸಾದ್ ಅವರ ವರ್ಚಸ್ಸು ಎರಡು ಕೆಲಸ ಮಾಡಿವೆ. ಜತೆಗೆ ಬಿಎಸ್ಪಿ ಅಭ್ಯರ್ಥಿ ಕಾಂಗ್ರೆಸ್ನ ಒಂದಷ್ಟು ಮತವನ್ನು ಸೆಳೆದಿರುವ ಸಾಧ್ಯತೆ ಇರುವುದರಿಂದಾಗಿಯೇ ಜನ ಹೆಚ್ಚು ಕುತೂಹಲದಿಂದ ಈ ಕ್ಷೇತ್ರದತ್ತ ನೋಡುವಂತಾಗಿದೆ.
ಚಾಮರಾಜನಗರ : ಕಾಂಗ್ರೆಸ್ ಗೆಲುವಿನ ಓಟಕ್ಕೆ ಕಡಿವಾಣ ಬೀಳುತ್ತಾ?
ಒಂದಷ್ಟು ಬದಲಾವಣೆಯಾಗಬಹುದು
ಇನ್ನು ಶ್ರೀನಿವಾಸಪ್ರಸಾದ್ ಕೂಡ ಐದು ಬಾರಿ ಸಂಸದರಾಗಿದ್ದು, ಹಲವು ಬಾರಿ ಶಾಸಕರಾಗಿ ಜನಮನ ಸೆಳೆದಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಹಗರಣಗಳಿಲ್ಲದ ಉತ್ತಮ ಸಂಸದರು ಹಾಗೂ ಸಜ್ಜನ ರಾಜಕಾರಣಿ ಎಂಬ ಹೆಸರು ಇರುವುದರಿಂದ ಫಲಿತಾಂಶದಲ್ಲಿ ಒಂದಷ್ಟು ಬದಲಾವಣೆ ಆಗುವುದಂತು ಖಚಿತ.
ಫಲಿತಾಂಶದ ತನಕ ಕಾಯಲೇಬೇಕಿದೆ
ಈಗಾಗಲೇ ಮತದಾನವಾಗಿದೆ. ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ಬರೆದಿಟ್ಟಾಗಿದೆ. ಈಗ ಯಾವುದೇ ರೀತಿಯ ಲೆಕ್ಕಾಚಾರಗಳನ್ನು ಮಾಡಿದರೂ ಅಂತಿಮವಾಗಿ ಚುನಾವಣೆ ಫಲಿತಾಂಶದ ತನಕ ಕಾಯಲೇ ಬೇಕಾಗಿದೆ.