ಪಣ್ಯದಹುಂಡಿ ಗ್ರಾಮದಲ್ಲಿ ಯುವ ರೈತನ ಮದುವೆಗೆ ವಿಶೇಷ ಅತಿಥಿಗಳಾದ ಎತ್ತುಗಳು
ಚಾಮರಾಜನಗರ, ಡಿಸೆಂಬರ್, 13: ಮದುವೆ ಅಂದರೆ ವರನ ಐಷಾರಾಮಿ ಕಾರು, ಬೈಕ್ ತಂದು ನಿಲ್ಲಿಸುವುದು ಸಾಮಾನ್ಯವಾಗಿದೆ. ಆದರೆ ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲೊಬ್ಬ ಯುವ ರೈತ ತನ್ನ ನೆಚ್ಚಿನ ಜೋಡೆತ್ತುಗಳಿಗೆ ವಿಶೇಷ ವೇದಿಕೆ ನಿರ್ಮಿಸಿ, ತನ್ನ ಮದುವೆಯನ್ನು ವಿಶಿಷ್ಟವಾಗಿ ನೆರವೇರಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ವಿಶೇಷ ಮದುವೆಯೊಂದು ನಡೆದಿದ್ದು, ಕೃಷಿ ಚಟುವಟಿಕೆಗೆ ನೆರವಾಗುವ ತಮ್ಮ ಎತ್ತುಗಳನ್ನು ಮದುವೆ ಛತ್ರಕ್ಕೆ ಕರೆತಂದಿದ್ದಾರೆ. ಎತ್ತುಗಳಿಗಾಗಿಯೇ ವೇದಿಕೆ ನಿರ್ಮಿಸಿ ಗೋಪ್ರೀತಿ ತೋರುವ ಮೂಲಕ ಮದುವೆ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ವಿಶಿಷ್ಟವಾಗಿ ನಡೆದ ಯುವ ರೈತನ ವಿವಾಹ
ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರೊಟ್ಟಿಗೆ ತೊರವಳ್ಳಿ ಗ್ರಾಮದ ಯೋಗಿತಾ ಸಪ್ತಪದಿ ತುಳಿದಿದ್ದಾರೆ. ತಾವು ಸಾಕಿದ ಎತ್ತುಗಳನ್ನು ಕರೆತಂದು ಅವುಗಳು ಕೂಡ ವಿವಾಹಕ್ಕೆ ಸಾಕ್ಷಿಯಾಗಬೇಕು ಅನ್ನುವುದು ವರನ ಆಸೆಯಾಗಿತ್ತು. ಆದ್ದರಿಂದ ವರನ ಕುಟುಂಬಸ್ಥರು ಎತ್ತುಗಳನ್ನು ಸಿಂಗರಿಸಿ- ಅದಕ್ಕಾಗಿ ವೇದಿಕೆಯನ್ನು ನಿರ್ಮಿಸಿ ವಧು-ವರರಿಗೆ ಜೋಡೆತ್ತುಗಳಿಂದ ಆಶೀರ್ವಾದವನ್ನು ಕೊಡಿಸಿ ವಿಶೇಷವಾಗಿ ಮದುವೆ ನಡೆಸಿದ್ದಾರೆ.

ಎರಡು ಎತ್ತುಗಳ ಮೌಲ್ಯ ಎಷ್ಟು?
ಎತ್ತುಗಳು ಎರಡು ಲಕ್ಷ ರೂಪಾಯಿ ಮೌಲ್ಯದ್ದಾಗಿದ್ದು, ಅವುಗಳಿಂದಲೇ ಕೃಷಿ ಚಟುವಟಿಕೆ ನಡೆಸುತ್ತೇವೆ. ಮದುವೆ ಸಮಾರಂಭಕ್ಕೆ ಎತ್ತುಗಳನ್ನು ಕರೆತರೋಣವೆಂದು ಪುತ್ರ ಮಹೇಶ್ ಆಸೆ ಪಟ್ಟಿದ್ದ. ಆದ್ದರಿಂದ ಮದುವೆ ಛತ್ರಕ್ಕೆ ಅವುಗಳನ್ನು ಕರೆತಂದೆವು ಎಂದು ವರನ ತಂದೆ ಬಸವರಾಜಪ್ಪ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವವರೇ ಹೆಚ್ಚಾಗಿದ್ದಾರೆ. ಆದರೆ ಇದೀಗ ಯುವಕನೋರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಾನು ಸಾಕಿದ ಎತ್ತುಗಳ ಮೇಲೆ ಅಪಾರ ಪ್ರೀತಿ ಇಟ್ಟಿರುವುದು ಶ್ಲಾಘನೀಯವಾಗಿದೆ. ವ್ಯವಸಾಯದಿಂದ ವಿಮುಖರಾಗುವವರು ಇವರನ್ನು ನೋಡಿ ಕಲಿಯಬೇಕು ಎಂದು ಸ್ಥಳೀಯರಾದ ಲಿಂಗರಾಜು ಹರ್ಷ ವ್ಯಕ್ತಪಡಿಸಿದ್ದಾರೆ.

ಮದುವೆ ಎಂದರೆ ನೆನಪಿನಲ್ಲಿ ಉಳಿಯುವ ಜೀವನದ ಘಳಿಗೆಯಾಗಿದ್ದು, ಅದನ್ನು ಮತ್ತಷ್ಟು ಸ್ಮರಣೀಯ ಮಾಡಿಕೊಂಡಿರುವ ಯುವ ರೈತ ಮಹೇಶ್ ಅವರ ಗೋಪ್ರೀತಿ ನಿಜಕ್ಕೂ ಯುವ ಪೀಳಿಗೆಗೆ ಮಾದರಿಯಾಗಿದೆ.












Click it and Unblock the Notifications