ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಡಿಕೆ ಶಿವಕುಮಾರ್ ಭೇಟಿ; ಪೊಲೀಸರಿಗೆ ವಾರ್ನಿಂಗ್
ಚಾಮರಾಜನಗರ, ಸೆಪ್ಟೆಂಬರ್, 29: ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಅಳವಡಿಸಿದ್ದ ನಾಯಕರ ಫ್ಲೆಕ್ಸ್ಗಳನ್ನು ಹರಿದು ಹಾಕಿದ್ದಕ್ಕೆ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಕೂಡಲೇ ಅವರನ್ನು ಬಂಧಿಸದಿದ್ದರೆ ಎಂದರೆ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಪೊಲೀಸರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ನಾವು ಕದ್ದುಮುಚ್ಚಿ ಕಾರ್ಯಕ್ರಮವನ್ನು ಮಾಡುತ್ತಿಲ್ಲ. ಅವರ ರಾಜಕಾರಣ ಏನಿದೆ ಅದನ್ನು ಮಾಡಲಿ, ಇಂತಹ ಹೇಡಿತನವನ್ನು ನಾವು ಯಾವತ್ತೂ ಮಾಡಿಲ್ಲ. ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಅಂದರೆ ನಮ್ಮ ರಾಜಕಾರಣ ನಾವು ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಫ್ಲೆಕ್ಸ್ ಹರಿದು ಹಾಕಿದ್ದಕ್ಕೆ ಡಿಕೆಶಿ ಕಿಡಿ
ಇದೇ ವೇಳೆ ತಮ್ಮ ನಿವಾಸದ ಮೇಲಿನ ಸಿಬಿಐ ದಾಳಿ ಬಗ್ಗೆ ಪ್ರಶ್ನಿಸಿದ್ದ ಅವರು ಪ್ರತಿಕ್ರಿಯೆ ನೀಡದೆ ಹೊರಟಿದ್ದಾರೆ. ಸದ್ಯಕ್ಕೆ ನಾವು ಭಾರತವನ್ನು ಒಗ್ಗೂಡಿಸಬೇಕಿದೆ. ಜನರ ಬದುಕನ್ನು ಹಸನು ಮಾಡಬೇಕಿದೆ. ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಬೇಕಿದೆ ಎನ್ನುವ ಮೂಲಕ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಯಾತ್ರೆಗೆ ಎಷ್ಟು ಜನರು ಬರಲಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಇಂದು ರಾತ್ರಿಯೇ ಬಂದು ವಾಸ್ತವ್ಯ ಹೂಡಿ. ಬೆಳಗ್ಗೆ 8 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಇರಬೇಕು. ಬೆಳಗ್ಗೆ ಬರುತ್ತೇನೆ ಎಂದರೆ ಟ್ರಾಫಿಕ್ ಸಮಸ್ಯೆ ಇರುತ್ತದೆ ಎಂದು ಅವರು ಕೋರಿದರು.

ಗುಂಡ್ಲುಪೇಟೆಯಲ್ಲಿ ಬೃಹತ್ ಕಟೌಟ್ ನಿರ್ಮಾಣ
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ "ಭಾರತ್ ಜೋಡೋ" ಯಾತ್ರೆ ಶುಕ್ರವಾರ ಬೆಳಗ್ಗೆ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಲಿದ್ದು, ಗುಂಡ್ಲುಪೇಟೆಯಲ್ಲಿ ಅಂತಿಮ ಹಂತದ ಭರ್ಜರಿ ತಯಾರಿ ನಡೆದಿದೆ. ರಾಹುಲ್ ಗಾಂಧಿ ಮತ್ತು ತಂಡ ಈಗಾಗಲೇ ಕೇರಳದ ರಾಜ್ಯ ಪ್ರವಾಸ ಮುಗಿಸಿ ತಮಿಳುನಾಡಿನ ಗಡಿಭಾಗ ಗೂಡಲೂರಿಗೆ ಆಗಮಿಸಿದೆ. ಶುಕ್ರವಾರ ಬೆಳಗ್ಗೆ 8 ರಿಂದ 8.30ರ ಹೊತ್ತಿಗೆ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಿಳಿಯಲಿದ್ದು, 9ರ ಸುಮಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. 5 ಸಾವಿರಕ್ಕೂ ಹೆಚ್ಚು ಜನರು ಕೂರಲು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾಂಗ್ರೆಸ್ ಮಯವಾದ ರಾಷ್ಟ್ರೀಯ ಹೆದ್ದಾರಿ
ಊಟಿ ವೃತ್ತದಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಬೃಹತ್ ಕಮಾನು ನಿರ್ಮಿಸುತ್ತಿದ್ದು, ಇದು ಎಲ್ಲರನ್ನೂ ಹುಬ್ಬೇರಿಸುತ್ತಿದೆ. ರಾಹುಲ್ ಗಾಂಧಿ ಹೆಜ್ಜೆ ಹಾಕುವ ಮಾರ್ಗದ ಉದ್ದಕ್ಕೂ ಬೃಹತ್ ಕಟೌಟ್ಗಳನ್ನು ನಿಲ್ಲಿಸಿದ್ದು, ಇಡೀ ರಾಷ್ಟ್ರೀಯ ಹೆದ್ದಾರಿ ಕಾಂಗ್ರೆಸ್ ಮಯವಾಗಿದೆ. ಅಂಬೇಡ್ಕರ್ ಭವನ ಕಾರ್ಯಕ್ರಮದ ಬಳಿಕ 10-11ರ ವೇಳೆಗೆ ಪಾದಯಾತ್ರೆ ಆರಂಭ ಆಗಲಿದೆ. ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿರುವ ಕೆಬ್ಬೆಕಟ್ಟೆ ಶನೀಶ್ವರ ದೇವಾಲಯ ಸಮೀಪ ಬಿಳಿಗಿರಿರಂಗನ ಬೆಟ್ಟ ಸೋಲಿಗರು ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಮ್ಲಜನಕ ದುರಂತದ ಸಂತ್ರಸ್ತರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.

ಇನ್ನು ಯಾತ್ರೆ ಕರ್ನಾಟಕ ಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ರಾಜ್ಯ ನಾಯಕರ ಸಮೂಹವೇ ಹರಿದು ಬರಲಿದೆ. ಪಾದಯಾತ್ರೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಹೆಜ್ಜೆ ಹಾಕಲಿದ್ದು, ಗುಂಡ್ಲುಪೇಟೆ ಪಟ್ಟಣದಲ್ಲಿ ಇರುವ ಎಲ್ಲಾ ಕಲ್ಯಾಣ ಮಂಟಪಗಳನ್ನು ಬಾಡಿಗೆಗೆ ಪಡೆದು ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಉದ್ದಕ್ಕೂ ಕಾರ್ಯರ್ತರಿಗೆ ಮಜ್ಜಿಗೆ, ನೀರು ಮತ್ತು ತಿಂಡಿಗಳನ್ನು ನೀಡಲು ಸ್ಥಳೀಯ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.












Click it and Unblock the Notifications