30 ರೂಪಾಯಿ ಪಾನಿ ಪೂರಿ ತಿಂದು ₹30 ಸಾವಿರ ವಂಚನೆ: ಯುವಕ ಅರೆಸ್ಟ್
ಬೆಂಗಳೂರು ಯುವಕನೋರ್ವ ಪಾನಿಪೂರಿ ತಿಂದು, ವ್ಯಾಪಾರಿಗೆ ಖಾತೆಗೆ ಕನ್ನ ಹಾಕಿದ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ. ಸದ್ಯ ವ್ಯಾಪಾರಿಗೆ ವಂಚನೆ ಮಾಡಿದ ಆರೋಪಿಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ, ಫೆಬ್ರವರಿ 14: ಉಂಡು ಹೋದ ಕೊಂಡು ಹೋದ ಎಂಬ ಮಾತಿನಂತೆ ಯುವಕನೋರ್ವ ಪಾನಿಪೂರಿ ತಿಂದು, ವ್ಯಾಪಾರಿಗೆ ಖಾತೆಗೆ ಕನ್ನ ಹಾಕಿದ ಘಟನೆ ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆದಿದೆ. ಸದ್ಯ ವ್ಯಾಪಾರಿಗೆ ವಂಚನೆ ಮಾಡಿದ ಆರೋಪಿಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ವಿಶಾಲ್ (19) ಬಂಧಿತ ಯುವಕ ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ವಿಶಾಲ್ ತನ್ನ ಬುದ್ಧಿವಂತಿಕೆ ತೋರಿ ವಂಚನೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿದ್ದಾನೆ. ಅಪರಿಚಿತರಿಗೆ ಫೋನ್ ಕೊಡುವ ಮುನ್ನ ಹಾಗೂ ಅವರಿವರ ಮುಂದೆ ಪಾಸ್ವರ್ಡ್ ಒತ್ತುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎನ್ನುವುದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ.
ಗೆಳೆಯರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಆರೋಪಿ ವಿಶಾಲ್ ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿನ ಲೋಕೇಶ್ ಎನ್ನುವವರ ಪಾನಿಪೂರಿ ಅಂಗಡಿಗೆ ತೆರಳಿ ಸ್ನೇಹಿತರ ಜೊತೆ ಮೂರು ಪ್ಲೇಟ್ ಪಾನಿಪೂರಿ ತಿಂದಿದ್ದಾನೆ. ಹಣವನ್ನು ಫೋನ್ ಪೇ ಮಾಡುವುದಾಗಿ ಹೇಳಿ ವ್ಯಾಪಾರಿ ಫೋನ್ ಪಡೆದು ಬೇರೊಬ್ಬನಿಗೆ ಕರೆ ಮಾಡಿದ್ದಾನೆ. ಆತ ದುಡ್ಡು ಕಳುಹಿಸಿದ್ದು ಒಮ್ಮೆ ಚೆಕ್ ಮಾಡಿ ಎಂದು ಹೇಳಿ ವ್ಯಾಪಾರಿ ಫೋನ್ ಪೇ ತೆರೆಯುವಾಗ ಪಾಸ್ ವರ್ಡ್ ನೋಡಿಕೊಂಡಿದ್ದಾನೆ.

ಸ್ವಲ್ಪ ಸಮಯದ ಬಳಿಕ ನಿಮ್ಮ ಫೋನ್ನಲ್ಲಿ ಸರ್ವರ್ ಸಮಸ್ಯೆ ಇದೆ, ಪರಿಶೀಲಿಸುವುದಾಗಿ ಫೋನ್ ಪಡೆದು 30 ಸಾವಿರ ರೂಪಾಯಿಯನ್ನು ತನ್ನ ಖಾತೆಗೆ ಕಳುಹಿಸಿಕೊಂಡು ಪಾನಿಪೂರಿ ಹಣ 120 ರೂಪಾಯಿ ಕಳುಹಿಸಿ ವಂಚಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಫೆಬ್ರವರಿ 11 ರಂದು ಪ್ರಕರಣ ದಾಖಲಿಸಿಕೊಂಡ ಚಾಮರಾಜನಗರ ಸಿಇಎನ್ ಠಾಣೆ ಪಿಐ ಆನಂದ್ ಮತ್ತು ತಂಡ ಕಾರ್ಯಾಚರಣೆ ಕೈಗೊಂಡು ವಂಚಕನಿಂದ 30 ಸಾವಿರ ರೂಪಾಯಿಯನ್ನು ಪಡೆದು ಮರಳಿ ವ್ಯಾಪಾರಿಗೆ ನೀಡಿದ್ದಾರೆ.
ವಿಡಿಯೋ ಬಳಸಿ ಮಹಿಳೆಗೆ ಬ್ಲಾಕ್ ಮೇಲ್: ಯುವಕ ಅರೆಸ್ಟ್
ಮಹಿಳೆಯೊಬ್ಬರ ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಚಾಮರಾಜನಗರ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಅಜಿತ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಮಹಿಳೆಯೊಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡ ಈತ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ಆಪ್ತವಾಗಿ ಮಾತನಾಡಿದ್ದನ್ನು, ಬಳಿಕ ವಿಡಿಯೋ ಕಾಲ್ ಮಾಡಿದಾದ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ತನ್ನ ಅಸಲಿ ವಸರೆ ತೋರಿಸಿದ್ದು, ಮಹಿಳೆಗೆ ಬೆದರಿಕೆ ಒಡ್ಡುತ್ತಿದ್ದ ಎನ್ನಲಾಗಿದೆ.
ಈ ಸಂಬಂಧ ನೊಂದ ಮಹಿಳೆ ಚಾಮರಾಜನಗರ ಸಿಒಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಪಿಐ ಆನಂದ್ ಹಾಗೂ ತಂಡ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications