ನಿರಂತರ ಮಳೆ, ಬಂಡೀಪುರ ಅರಣ್ಯದ ಕೆರೆಗಳಿಗೆ ಜೀವ ಕಳೆ
ಚಾಮರಾಜನಗರ, ಸೆಪ್ಟೆಂಬರ್ 07 : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ಕೆರೆಗಳಿಗೆ ಇದೀಗ ಜೀವ ಕಳೆ ಬಂದಿದೆ.
ಮಳೆ ಸಮರ್ಪಕವಾಗಿ ಸುರಿದ ಕಾರಣದಿಂದಾಗಿ ಬಂಡೀಪುರ ವ್ಯಾಪ್ತಿಯ ಕೆರೆಗಳು ಭರ್ತಿಯಾಗಿ ಪ್ರಾಣಿ ಪಕ್ಷಿಗಳು ಮಾತ್ರವಲ್ಲದೆ, ಅರಣ್ಯಾಧಿಕಾರಿಗಳು ಕೂಡ ನೆಮ್ಮದಿಯುಸಿರು ಬಿಡುವಂತಾಗಿದೆ.

ನೀರಿಲ್ಲದೆ, ಪ್ರಾಣಿ ಪಕ್ಷಿಗಳು ನೀರನ್ನರಸಿಕೊಂಡು ದೂರದ ತಮಿಳುನಾಡು, ಕೇರಳದತ್ತ ತೆರಳಿದ್ದವು. ಮಾರ್ಚ್ ಏಪ್ರಿಲ್ ನಲ್ಲಿ ತೀವ್ರ ರೀತಿಯ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತಲ್ಲದೆ, ಕೆರೆಗಳಲ್ಲಿದ್ದ ನೀರು ಬತ್ತಿದ ಕಾರಣ ಕೆಲವು ಕೆರೆಗಳಿಗೆ ಟ್ಯಾಂಕರ್ ಮೂಲಕ, ಸೋಲಾರ್ ಬೋರ್ವೆಲ್ ಮೂಲಕ ನೀರು ತುಂಬಿಸಿ ವಲಸೆ ಹೋಗದೆ ನೀರಿಗಾಗಿ ಪರಿತಪಿಸುತ್ತಿದ್ದ ಪ್ರಾಣಿಗಳ ದಾಹ ತಣಿಸುವ ಕೆಲಸವನ್ನು ಮಾಡಲಾಗಿತ್ತು.
ಆದರೆ ಮೇ ತಿಂಗಳಲ್ಲಿ ಸುರಿದ ಒಂದಷ್ಟು ಮಳೆಯಿಂದಾಗಿ ವನ್ಯ ಪ್ರಾಣಿಗಳು ಉಸಿರಾಡುವಂತಾಗಿತ್ತು. ತದ ನಂತರ ಒಂದಷ್ಟು ಮಳೆ ಸುರಿದ ಪರಿಣಾಮ ಒಣಗಿ ಹೋಗಿದ್ದ ಅರಣ್ಯದಲ್ಲಿ ಹಸಿರು ಕಾಣುವಂತಾಗಿದೆ. ಹಾಗೂ ಬಹುತೇಕ ಕೆರೆಗಳು ತುಂಬಿರುವುದು ಸಂತಸದ ವಿಚಾರವಾಗಿದೆ.

ಬಂಡೀಪುರ ಉದ್ಯಾನದ ಪಾರ್ವತಾಂಬಾ ತ್ರಿಯಂಭಕಪುರ ಬೆಟ್ಟಗಳಿಂದ ಹರಿದುಬಂದ ನೀರು ನೇರವಾಗಿ ಹರಿದು ಬಂದು ಹಳ್ಳಕೊಳ್ಳಗಳಿಗೆ ಸೇರುತ್ತಿರುವುದರಿಂದ ಕಾಡಂಚಿನ ಹಂಗಳದ ಹಿರಿಕೆರೆ, ಬರಗಿ ಕೆರೆ, ಹಾಗೂ ಬೇರಂಬಾಡಿಯ ಕೆಂಪುಸಾಗರ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.
ಇನ್ನು ಕೇರಳದಿಂದ ಹರಿದು ಬರುವ ಮೂಲೆಹೊಳೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕಾಣಿಸುತ್ತಿದೆ. ಇದಲ್ಲದೆ ಬಂಡೀಪುರ ವಲಯದ ಮೂರ್ಕೆರೆ, ಗೋಪಾಲಸ್ವಾಮಿಬೆಟ್ಟ ವಲಯದ ಗಾರೇಪಾಲ, ತಾವರೆಕಟ್ಟೆ ಕೆರೆಗಳು ಮತ್ತು ಹಿರಿಕೆರೆ, ಓಂಕಾರ್ ವಲಯದ ಸೌತ್ಕರೆ, ಶಾಂತೇಗೌಡನಕಟ್ಟೆ, ಹಂದಿಕಟ್ಟೆ, ಕುಂದಕೆರೆ, ಮದ್ದೂರು ವಲಯಗಳಲ್ಲಿರುವ ಕೆರೆಗಳು ನೀರು ತುಂಬಿ ಕೆಂಬಣ್ಣದಿಂದ ಕಂಗೊಳಿಸುತ್ತಿದೆ.
ಈಗಾಗಲೇ ಕೆಲವು ಕೆರೆಗಳ ಹೂಳು ತೆಗೆದು ಅಭಿವೃದ್ಧಿಗೊಳಿಸಲಾಗಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ.
ಅರಣ್ಯ ಇಲಾಖೆ ಮೂಲಗಳ ಪ್ರಕಾರ ಶೇ. 70ರಷ್ಟು ಕೆರೆಗಳು ಭರ್ತಿಯಾಗಿವೆ ಎನ್ನಲಾಗುತ್ತಿದ್ದು, ಮಳೆ ಹೀಗೆಯೇ ಸುರಿದದ್ದೇ ಆದರೆ ಮುಂದಿನ ದಿನಗಳಲ್ಲಿ ಅರಣ್ಯ ವ್ಯಾಪ್ತಿಯ ಎಲ್ಲ ಕೆರೆಗಳು ಭರ್ತಿಯಾಗುವ ಸಾಧ್ಯತೆಯಿದೆ.












Click it and Unblock the Notifications