ಬಂಡೀಪುರದ ಹೆದ್ದಾರಿಯಲ್ಲಿ ರಾಜಗಾಂಭೀರ್ಯ ಮೆರೆದ ಕರಡಿ
ಚಾಮರಾಜನಗರ, ಜುಲೈ 25: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹುಲಿ, ಕಾಡಾನೆಗಳ ಕ್ಯಾಟ್ ವಾಕ್ ನ ದೃಶ್ಯವನ್ನು ಈ ಮಾರ್ಗವಾಗಿ ಸಂಚರಿಸುವ ಹೆಚ್ಚಿನ ಪ್ರವಾಸಿಗರು ನೋಡಿರುತ್ತಾರೆ.
ಆದರೆ, ಇದೀಗ ಕರಡಿಯೊಂದು ಹೆದ್ದಾರಿಯಲ್ಲಿ ಏಕಾಂಗಿಯಾಗಿ ರಾಜ ಗಾಂಭೀರ್ಯದಿಂದ ನಡೆದು ಹೋದ ದೃಶ್ಯ ವೈರಲ್ ಆಗಿದ್ದು, ಅದನ್ನು ನೋಡಿದ ಕೆಲವರು ಖುಷಿ ಪಡುತ್ತಿದ್ದರೆ, ಈ ವ್ಯಾಪ್ತಿಯ ಕಾಡಂಚಿನ ಜನ ಮಾತ್ರ ಬೆಚ್ಚಿ ಬಿದ್ದಿದ್ದಾರೆ. ಏಕೆಂದರೆ ಈಗಾಗಲೇ ಬಂಡೀಪುರ ಕಾಡಂಚಿನ ಜನ ಹುಲಿ, ಕಾಡಾನೆ, ಚಿರತೆ ದಾಳಿಯಿಂದ ಬೆಚ್ಚಿ ಬಿದ್ದಿದ್ದಾರೆ. ಹೀಗಿರುವಾಗ ಕರಡಿ ಏನಾದರೂ ಅರಣ್ಯ ಬಿಟ್ಟು ನಾಡಿನತ್ತ ಬಂದರೆ ಏನಪ್ಪಾ ಮಾಡೋದು ಎಂದು ಯೋಚಿಸುತ್ತಿದ್ದಾರೆ.
ಬಂಡೀಪುರ- ಮೈಸೂರು ರಾಷ್ಟ್ರೀಯ ಹೆದ್ದಾರಿ ಅರವತ್ತೇಳರಲ್ಲಿ ಕಳೆದ ಕೆಲವು ದಿನಗಳ ಹಿಂದೆ ಭಾರಿ ಗಾತ್ರದ ಕರಡಿಯೊಂದು ರಸ್ತೆಯಲ್ಲಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ತೇಲಿ ಬಿಟ್ಟಿದ್ದು ಇದೀಗ ಸಕತ್ ವೈರಲ್ ಆಗಿದೆ.

ಈಗಾಗಲೇ ಬಂಡೀಪುರ ಅಂದರೆ ಅದು ಹುಲಿಗಳ ತಾಣ ಎಂಬ ಮಾತಿದೆ. ಹುಲಿಗಳ ಆಟ, ನಡಿಗೆ ಎಲ್ಲವನ್ನೂ ಸೆರೆ ಹಿಡಿಯುವುದು ಮಾಮೂಲಿಯಾಗಿದೆ. ಆದರೆ ಕರಡಿಯ ಗಂಭೀರ ನಡಿಗೆ ಎಲ್ಲರ ಗಮನ ಸೆಳೆದಿದೆ. ಸಫಾರಿಗೆ ತೆರಳುವವರಿಗೆ ಕಾಣಿಸದ ಕರಡಿಯು ರಸ್ತೆಯಲ್ಲಿ ಕಾಣಿಸಿರುವುದು ರೋಮಾಂಚನ ಉಂಟು ಮಾಡಿದೆ.
ಒಟ್ಟಾರೆ ಹೇಳಬೇಕೆಂದರೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಇದೀಗ ಹುಲಿಗಳ ಜೊತೆಗೆ ಕರಡಿಯೂ ಕಾಣಿಸಿಕೊಂಡಿರುವುದರಿಂದ, "ನಾನೂ ಕೂಡ ಇಲ್ಲಿದ್ದೇನೆ ಬನ್ನಿ, ನನ್ನನ್ನು ನೋಡಿಕೊಂಡು ಹೋಗಿ" ಎಂಬ ಸಂದೇಶವನ್ನು ಪ್ರಾಣಿಪ್ರಿಯರಿಗೆ ರವಾನಿಸಿದೆ.












Click it and Unblock the Notifications