ಬಂಡೀಪುರದಲ್ಲಿ ಚಿತ್ರೀಕರಿಸಿದ್ದ ಅಕ್ಷಯ್ ಕುಮಾರ್ ಕಾರ್ಯಕ್ರಮ ಪ್ರಸಾರಕ್ಕೆ ಕೂಡಿ ಬಂತು ಕಾಲ
ಚಾಮರಾಜನಗರ, ಸೆಪ್ಟೆಂಬರ್ 02: ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಿಸಲಾದ, ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯದ "ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್" ಕಾರ್ಯಕ್ರಮ ಇದೇ ಸೆ.11ರಂದು ಡಿಸ್ಕವರಿ ಪ್ಲಸ್ ಅಪ್ಲಿಕೇಶನ್ ನಲ್ಲಿ ಮತ್ತು ಸೆ.14ರಂದು ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.
Recommended Video
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಅವರ ಕಾರ್ಯಕ್ರಮವನ್ನು ಕಳೆದ ಜನವರಿಯಲ್ಲಿಯೇ ಚಿತ್ರೀಕರಣ ಮಾಡಲಾಗಿತ್ತು. ಆದರೆ ಅಕ್ಷಯ್ ಕುಮಾರ್ ಕಾರ್ಯಕ್ರಮ ಪ್ರಸಾರಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಇದೀಗ ಪ್ರಸಾರವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಂಡೀಪುರದಲ್ಲಿ ತಲೈವಾ: ಫೋಟೊ ಹಂಚಿಕೊಂಡ ಬಿಯರ್ ಗ್ರಿಲ್ಸ್
ಈ ಸಾಕ್ಷ್ಯ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಿಲಿಟರಿ ಬಟ್ಟೆ ಧರಿಸಿ, ವೈಲ್ಡ್ ಲೈಫ್ ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಜೊತೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತಃ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಬೇರ್ ಗ್ರಿಲ್ಸ್ ಒಬ್ಬ ನಿಜವಾದ ನಾಯಕ ಎಂದು ಅಕ್ಷಯ್ ಕುಮಾರ್ ಬಣ್ಣಿಸಿದ್ದಾರೆ.
"ಇನ್ಟು ದಿ ವೈಲ್ಡ್ ಗೆ ಮುಂಚಿತವಾಗಿ ನಾನು ಕಠಿಣ ಸವಾಲುಗಳನ್ನು ದೃಶ್ಯೀಕರಿಸಿದ್ದೇನೆ. ಆದರೆ ಬೇರ್ ಗ್ರಿಲ್ಸ್ ಆನೆ ಲದ್ದಿ ಚಹಾದೊಂದಿಗೆ ನನ್ನನ್ನು ಸಂಪೂರ್ಣವಾಗಿ ಆಶ್ಚರ್ಯಗೊಳಿಸಿದರು" ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಹೇಗಿರಲಿದೆ ಎಂಬ ಕುತೂಹಲವಂತೂ ಎಲ್ಲರಲ್ಲೂ ಇದ್ದೇ ಇದೆ.