ಲಾಕ್ ಡೌನ್ ನಲ್ಲೂ ಜಿಂಕೆ ಬೇಟೆ; ಏಳು ಜನರ ಬಂಧನ
ಚಾಮರಾಜನಗರ, ಏಪ್ರಿಲ್ 17: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಮಾಡಿದೆ. ಕೆಲವೆಡೆ ಸೀಲ್ ಡೌನ್ ಕೂಡ ಮಾಡಲಾಗಿದೆ. ಆದರೆ ಅರಣ್ಯ ಕಳ್ಳತನಕ್ಕೆ ಇದೇ ಸುಸಂದರ್ಭ ಎಂದು ಭಾವಿಸಿದ ಏಳು ಮಂದಿ ನಿನ್ನೆ ಬಂಡೀಪುರ ಹುಲಿ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ನುಸುಳಿ ಜಿಂಕೆಗಳನ್ನು ಬೇಟೆಯಾಡಿದ್ದಾರೆ. ಇದೇ ಸಂದರ್ಭ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಕೈಗೆ ಏಳು ಮಂದಿ ಸಿಕ್ಕಿಬಿದ್ದಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಅರಣ್ಯಪ್ರದೇಶದಲ್ಲಿ ಈ ಬೇಟೆಗಾರರು ಉರುಳು ಹಾಕಿ ಜಿಂಕೆಗಳನ್ನು ಬೇಟೆಯಾಡಿದ್ದಾರೆ. ಉರುಳಿಗೆ ಸಿಲುಕಿ ಸಾವನ್ನಪ್ಪಿದ ಜಿಂಕೆಗಳನ್ನು ಕತ್ತರಿಸಿ ಸಾಗಿಸುತ್ತಿದ್ದಾಗ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಬೇಟೆಗಾರರು ಸಿಕ್ಕಿ ಬಿದ್ದಿದ್ದು, ಬಂಧಿತರಿಂದ ಜಿಂಕೆ ಮಾಂಸ, 15 ಕೇಬಲ್ ಉರುಳುಗಳು, ಒಂದು ಕತ್ತಿ ಹಾಗೂ ಒಂದು ಬಜಾಜ್ ಸಿಟಿ 100 ಬೈಕ್ ವಶಪಡಿಸಿಕೊಳ್ಳಲಾಗಿದೆ. ಇವರು ಹಿಂದಿನ ದಿನ ಸಂಜೆ ಅರಣ್ಯದೊಳಗೆ ಹೋಗಿ ಬೈಕ್ ಗಳ ಕೇಬಲ್ ಗಳನ್ನು ಉರುಳಾಗಿ ಕಟ್ಟಿ ಬರುತ್ತಿದ್ದರು. ರಾತ್ರಿ ಆಹಾರ ಹುಡುಕಿಕೊಂಡು ಬಂದ ಜಿಂಕೆಗಳು ಉರುಳಿನೊಳಗೆ ತಲೆ ಹಾಕಿದಾಗ ಉರುಳು ಬಿಗಿದು ಸಾವನ್ನಪ್ಪುತ್ತಿದ್ದವು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಕೆಜಿಗೆ 700-800 ರೂಪಾಯಿ ತಲುಪಿದೆ. ಈ ಆರೋಪಿಗಳು ಜಿಂಕೆ ಮಾಂಸವನ್ನೇ ಕುರಿ ಮಾಂಸ ಎಂದು ಮಾರಾಟ ಮಾಡಲು ಯೋಜಿಸಿದ್ದರು ಎನ್ನಲಾಗಿದೆ. ಆದರೆ ಜಿಂಕೆಗಳನ್ನು ಬೇಟೆಯಾಡಿ ಬೈಕ್ ನಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಅರಣ್ಯ ಸಿಬ್ಬಂದಿ ಹೊಸಹಳ್ಳಿ ಗುಡ್ಡದ ಬಳಿ ಹೊಂಚು ಹಾಕಿ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಂಸವನ್ನು ಮಾರಾಟ ಮಾಡುವ ಸಲುವಾಗಿ ಜಿಂಕೆಗಳನ್ನು ಬೇಟೆಯಾಡಿ ಅವುಗಳನ್ನು ಕತ್ತರಿಸಿ ಸಾಗಿಸುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದರ್ ತಿಳಿಸಿದ್ದಾರೆ. ಮೊಕದ್ದಮೆ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಮುಂದಿನ ತನಿಖೆ ನಡೆಸುತಿದ್ದಾರೆ.












Click it and Unblock the Notifications