ಬಾಗಿಲು ಮುಚ್ಚಿದ್ದ ಸುಳ್ವಾಡಿ ಮಾರಮ್ಮನ ದೇಗುಲದಲ್ಲೂ ಆದಾಯ
ಚಾಮರಾಜನಗರ, ಅಕ್ಟೋಬರ್ 1: ಕೊರೊನಾದಿಂದಾಗಿ ರಾಜ್ಯದ ಹಲವು ಪ್ರಸಿದ್ಧ ದೇವಾಲಯಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ಸುಮಾರು ಒಂದೂವರೆ ವರ್ಷಗಳಿಂದಲೂ ಬಾಗಿಲು ಮುಚ್ಚಿದ್ದ ದೇವಸ್ಥಾನದಲ್ಲಿ ಆದಾಯ ಹೆಚ್ಚಾಗಿರುವುದು ಅಚ್ಚರಿ ಮೂಡಿಸಿದೆ.
ವಿಷ ಪ್ರಸಾದ ಪ್ರಕರಣದ ಕಾರಣದಿಂದಾಗಿ 2018ರ ಡಿಸೆಂಬರ್ ನಂತರ ಬಾಗಿಲು ಮುಚ್ಚಿದ್ದ ಚಾಮರಾಜನಗರದ ಹನೂರಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇಗುಲದ ಹುಂಡಿಯಲ್ಲಿ ಲಕ್ಷಾಂತರ ಹಣ ಸೇರಿದೆ. ಬಾಗಿಲು ಮುಚ್ಚಿದ್ದರಿಂದ ದರ್ಶನ ನೀಡದೆಯೂ ಲಕ್ಷ ಲಕ್ಷ ಆದಾಯ ಗಳಿಸಿದ್ದಾಳೆ ಮಾರಮ್ಮ ದೇವಿ.
ವಿಷ ಪ್ರಸಾದ ಪ್ರಕರಣದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕಿಚ್ಚುಗುತ್ತಿ ಮಾರಮ್ಮನ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 2.60 ಲಕ್ಷ ರೂ ಹಣ ಸಂಗ್ರಹವಾಗಿದೆ.

2018ರ ಡಿಸೆಂಬರ್ 14ರಂದು ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ 17 ಜನರು ಮೃತಪಟ್ಟಿದ್ದರು. ಹೀಗಾಗಿ ದೇಗುಲವನ್ನು ಬಂದ್ ಮಾಡಲಾಗಿತ್ತು. ಅಂದಿನಿಂದ ಹುಂಡಿಯ ಎಣಿಕೆಯನ್ನು ಮಾಡಲಾಗಿರಲಿಲ್ಲ. ಈ ಬಾರಿ ಅಧಿವೇಶನದಲ್ಲಿ ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಅ.20 ರಿಂದ ದೇಗುಲವನ್ನು ತೆಗೆಯುವ ಭರವಸೆ ನೀಡಿದ್ದಾರೆ. ಆ ಹಿನ್ನೆಲೆ ಕಂದಾಯ ಇಲಾಖೆಯ ಅಧಿಕಾರಿಗಳು ದೇಗುಲದ ಸಿಬ್ಬಂದಿಯಿಂದ ಹುಂಡಿ ಎಣಿಕೆ ಕಾರ್ಯ ನಡೆಸಿದ್ದಾರೆ.
ರಾಮಾಪುರ ಪೊಲೀಸರ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ನಡೆಸಿದ್ದು, ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.60 ಲಕ್ಷ ರೂ ನಗದು, 2 ಗ್ರಾಂ ಚಿನ್ನ ಹಾಗೂ 30 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ.












Click it and Unblock the Notifications