ಕೆರೆ ತುಂಬಿಸುವ 1,100 ಕೋಟಿ ಯೋಜನೆ ಶೀಘ್ರವೇ ಅನುಮೋದನೆ: ಬೊಮ್ಮಾಯಿ
ಚಾಮರಾಜನಗರ, ಡಿಸೆಂಬರ್ 13: ಜಿಲ್ಲೆಯ ಕೆರೆಗಳನ್ನು ತುಂಬಿಸಲು 1,100 ಕೋಟಿ ರೂ.ಗಳ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಅದಕ್ಕೆ ಅನುಮೋದನೆ ದೊರೆತರೆ ವಿವಿಧ ಹಂತಗಳಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ತಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಒಟ್ಟು ಯೋಜನೆ ಪೈಕಿ ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ 754 ಕೋಟಿ ರೂ.ಗಳ ಎರಡು ಪ್ರಸ್ತಾವನೆಗಳನ್ನು ಅನುಮೋದನೆಗಾಗಿ ಕಳುಹಿಸಲಾಗಿದೆ. ಅವುಗಳಿಗೆ ಶೀಘ್ರವೇ ಅನುಮೋದನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟು 1,100 ಕೋಟಿ ರೂ. ಬೃಹತ್ ಯೋಜನೆ ಇದಾಗಿದ್ದು, ಈಗಾಗಲೇ ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇಡೀ ಜಿಲ್ಲೆಯ ಕೆರೆ ತುಂಬಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನೀರಾವರಿಯ ಐದು ಯೋಜನೆಗಳಿಗೆ ಮಂಜೂರಾತಿ ನೀಡಿ 694 ಕೋಟಿ ರೂ.ಗಳ ವೆಚ್ಚದಲ್ಲಿ 2 ಹಂತಗಳಲ್ಲಿ 63 ಕೆರೆ ತುಂಬಿಸುವ ಕೆಲಸ ಪೂರ್ಣವಾಗಿದೆ. ಗುಂಡ್ಲುಪೇಟೆ, ಮಟೇಹಳ್ಳ, ಕುಡ್ತರಿಹಳ್ಳ ಸೇರಿದಂತೆ ವಿವಿಧೆಡೆ ಇನ್ನೂ 3 ಯೋಜನೆಯಡಿ 121 ಕೆರೆಗಳನ್ನು ತುಂಬಿಸಲಾಗುವುದು ಎಂದರು.

ಚಾಮರಾಜನಗರ ಕೈಗಾರಿಕಾ ಜಿಲ್ಲೆಯಾಗಿ ಪರಿವರ್ತನೆ
ನೀರಾವರಿ ಯೋಜನೆಗಳಿಂದ ಅಂತರ್ಜಲ ಹೆಚ್ಚಳವಾಗಿ, ಕೃಷಿ, ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದ ಇಲ್ಲಿನ ಜನರು ಉತ್ತಮ ಆರೋಗ್ಯ ಹೊಂದುತ್ತಾರೆ. ಚಾಮರಾಜನಗರ ಜಿಲ್ಲೆಯನ್ನು ಕೈಗಾರಿಕಾ ಜಿಲ್ಲೆಯಾಗಿ ಪರಿವರ್ತಿಸಲು ಸಾಧ್ಯವಿದೆ. ಈಗಾಗಲೇ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಟೌನ್ಶಿಪ್ ಸ್ಥಾಪಿಸಿ, ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳನ್ನು ಮಂಜೂರಾತಿ ಮಾಡಲಾಗುವುದು. ಯುವಕರ ಕೈಗೆ ಕೆಲಸ ಸಿಗಬೇಕು ಎಂಬ ಕಾರಣದಿಂದ ಚಾಮರಾಜನಗರಕ್ಕೆ ಈ ಯೋಜನೆಗಳಿಗೆ ಮಂಜೂರಾತಿ ನೀಡಲಿದ್ದೇವೆ ಎಂದು ಹೇಳಿದರು.

ಜಿಲ್ಲೆಗೆ ಬಂದರೆ ರಾಜಕೀಯ ಶಕ್ತಿ ವೃದ್ಧಿ: ಸಿಎಂ
ಚಾಮರಾಜನಗರ ಜಿಲ್ಲೆಗೆ ಹೋಗುವ ಮೂಲಕ ನಮ್ಮ ರಾಜಕೀಯ ಶಕ್ತಿ ವೃದ್ಧಿಯಾಗುತ್ತದೆಯೇ ವಿನ: ಕಡಿಮೆಯಾಗುವುದಿಲ್ಲ. ಬಹಳ ವರ್ಷಗಳಿಂದ ಅನಾವಶ್ಯಕವಾಗಿ ಒಂದು ಮೂಢನಂಬಿಕೆ ಉಳಿದುಕೊಂಡಿದೆ. ಇಲ್ಲಿರುವ ಜನರ ದರ್ಶನವೇ ಒಂದು ಶುಭ ಸೂಚನೆ. ಚಾಮರಾಜನಗರ ಗಡಿ ಜಿಲ್ಲೆ. ಇದರ ಸಮಗ್ರ ಹಾಗೂ ಯೋಜನಾಬದ್ಧವಾಗಿ ಅಭಿವೃದ್ಧಿಯಾಗಬೇಕು. ಇಲ್ಲಿ ನೈಸರ್ಗಿಕ ಸಂಪತ್ತಿದೆ. ಅತ್ಯುತ್ತಮವಾದ ವನ್ಯಜೀವಿ ಸಂಪತ್ತು, ಕೆರೆಕಟ್ಟೆಗಳ ಸಂಪತ್ತು, ಕಷ್ಟಪಟ್ಟು ದುಡಿಯುವ ರೈತಾಪಿ ವರ್ಗದವರಿದ್ದಾರೆ. ಜಿಲ್ಲೆಯಾಗಿ 25 ವರ್ಷಗಳಾದ ಮೇಲೆ ಮೂಲ ಸೌಕರ್ಯಗಳು ಅಭಿವೃದ್ಧಿ ಆಗುತ್ತಿದೆ. ಈ ಜಿಲ್ಲೆ ರಚನೆಗೆ ಸಹಾಯ ಮಾಡಿದ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲರನ್ನು ಸ್ಮರಿಸಬೇಕು ಎಂದರು.

ಎಲ್ಲ ವರ್ಗಕ್ಕೆ ಆರ್ಥಿಕ ಶಕ್ತಿ ತುಂಬಿದ್ದೇವೆ
ದುಡಿಯುವ ವರ್ಗಕ್ಕೆ ಮಹತ್ವ ಕೊಡುವ ಮೊದಲು ಸರ್ಕಾರ ನಮ್ಮದು. ರೈತ ವಿದ್ಯಾ ನಿಧಿ, ಕುಶಲಕರ್ಮಿಗಳಿಗೆ ಸಹಾಯಧನ ಯೋಜನೆ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ರಾಜ್ಯದ ಜನ ಹಾಗೂ ಚಾಮರಾಜನಗರ ಜಿಲ್ಲೆಯು ಆರ್ಥಿಕವಾಗಿ ಸಲರಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ಅಭಿವೃದ್ಧಿಯಲ್ಲಿ ಪಕ್ಷಬೇಧವಿಲ್ಲ. ಸಾಮಾಜಿಕ ಸಾಮರಸ್ಯ ಮೂಡಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿದೆ. ಜನಶಕ್ತಿಯ ಪರವಾಗಿ ರಾಜಶಕ್ತಿ ಸದಾ ಇರಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು.
ಅಮೃತ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ 205 ಕೋಟಿ ರೂ., ಹನೂರು 435, ಕೊಳ್ಳೇಗಾಲಕ್ಕೆ 116 ಕೋಟಿ ಸೇರಿದಂತೆ ಒಟ್ಟು 1048 ಕೋಟಿ ರೂ.ಗಳ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.

ಚಾಮರಾಜನಗರದಲ್ಲಿವೆ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳು
ಚಾಮರಾಜನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಎಂದು ಪರಿಗಣಿಸಲಾಗಿದೆ. ಇಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣದ ಬಗ್ಗೆ ಗಮನಹರಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜಗೆ ಏರಿಸಲಾಗಿದೆ. ಆರೋಗ್ಯ ಅಭಿವೃದ್ಧಿ ಮತ್ತು ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗುತ್ತಿದೆ. ಕೃಷಿಕರು ಸೇರಿದಂತೆ ಎಲ್ಲ ವರ್ಗದವರು ಆರ್ಥಿಕವಾಗಿ ಸದೃಢರಾಗಬೇಕು. ಶೂನ್ಯಬಡ್ಡಿದರದಲ್ಲಿ ಕೃಷಿ ಸಾಲ, ಯಶಸ್ವಿನಿ ಯೋಜನೆ ಪುನರಾರಂಭ, 600 ಕೋಟಿ ರೂ. ವೆಚ್ಚದಲ್ಲಿ ರೈತಶಕ್ತಿ ಯೋಜನೆ, ರೈತ ವಿದ್ಯಾನಿಧಿ ಜಾರಿ ಮಾಡಲಾಗಿದೆ ಎಂದು ಸರ್ಕಾರದ ಕಾರ್ಯಕ್ರಮ ಬಗ್ಗೆ ಬೊಮ್ಮಾಯಿ ತಿಳಿಸಿದರು.
ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ನಿರಂಜನ ಕುಮಾರ್, ಮರಿತಿಬ್ಬೇಗೌಡ, ಸಂಸದ ಶ್ರೀನಿವಾಸ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications