ಮಲ್ಯಗೆ ಭಾರಿ ಹಿನ್ನಡೆ, ಭಾರತಕ್ಕೆ ಹಸ್ತಾಂತರಿಸಲು 28 ದಿನ ಗಡುವು
ಲಂಡನ್, ಮೇ 14: ಉದ್ದೇಶಪೂರ್ವಕ ಸುಸ್ತಿದಾರ, ದೇಶಭ್ರಷ್ಟ ಆರ್ಥಿಕ ಅಪರಾಧಿ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದೆ. ಇಂಗ್ಲೆಂಡಿನಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಮೇ 14ರಂದು ವಜಾಗೊಂಡಿದ್ದು, ಈಗ ಸುಪ್ರೀಂಕೋರ್ಟ್ ನಲ್ಲಿ ಮರು ಅರ್ಜಿ ಹಾಕುವ ಅವಕಾಶ ಕಳೆದುಕೊಂಡಿದ್ದಾರೆ.
Recommended Video
ಹೀಗಾಗಿ, ಮಲ್ಯರನ್ನು ಇನ್ನು 28ದಿನಗಳಲ್ಲಿ ಭಾರತಕ್ಕೆ ಹಸ್ತಾಂತರಿಸಬಹುದಾಗಿದೆ. ಈ ಕುರಿತಂತೆ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಎಸ್ ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟದ ಮಾಡಿಕೊಂಡಿರುವ ಮನವಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ, ಯುಕೆ ಸುಪ್ರೀಂಕೋರ್ಟ್ ನಲ್ಲಿ ಮಲ್ಯ ಅರ್ಜಿ ಹಾಕಿದ್ದರು.

ಮನಿ ಲಾಂಡ್ರಿಂಗ್ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಅರ್ಜಿ ಸ್ವೀಕರಿಸಲು ನಿರಾಕರಿಸಿರುವುದರಿಂದ ಮಲ್ಯ ಬಳಿ ಬೇರೆ ಯಾವುದೇ ಕಾನೂನು ಆಯ್ಕೆಗಳಿಲ್ಲ ಎಂದು ತಿಳಿದು ಬಂದಿದೆ.
ವಿಜಯ್ ಮಲ್ಯ ಅವರಿಂದ 1, 145 ಬಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್(1 GBP = 94.7784 INR) ಸಾಲದ ಮೊತ್ತ ಹಿಂಪಡೆಯಲು ಎಸ್ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ ಯತ್ನಿಸುತ್ತಿದೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ಮಲ್ಯರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ, ಸಿಬಿಐ ಮನವಿ ಸಲ್ಲಿಸಿವೆ. ಸುಮಾರು 11,000 ಕೋಟಿ ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಮಲ್ಯ ಪ್ರಮುಖ ಆರೋಪಿಯಾಗಿದ್ದಾರೆ.
''ನನ್ನ ಕಕ್ಷಿದಾರರನ್ನು ಬೇಕಂತಲೇ ದಿವಾಳಿ ಎಂದು ಘೋಷಿಸಿ, ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಭಾರತ ಹಾಗೂ ಯುಕೆಯಲ್ಲಿ ಸರಿಯಾಗಿ ವಿಚಾರಣೆ ನಡೆಸಬೇಕಿದೆ. ಬ್ಯಾಂಕ್ ಸಾಲ ಮರುಪಾವತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಆದರೆ, ಒಂದೇ ಸಾರಿ ಎಲ್ಲವನ್ನು ತೀರಿಸುವ ನಮ್ಮ ಆಫರ್ ಗೆ ಬ್ಯಾಂಕುಗಳು ಒಪ್ಪಿಲ್ಲ. ಜೊತೆಗೆ ಜಾರಿ ನಿರ್ದೇಶನಾಲಯದ ಪ್ರವೇಶದಿಂದ ಈಗ ಸಾಲ ಮರು ಪಾವತಿ ಕಷ್ಟಸಾಧ್ಯವಾಗಿದೆ'' ಎಂದು ಮಲ್ಯ ಪರ ವಕೀಲ ಫಿಲೀಫ್ ಮಾರ್ಷಲ್ ಎಂದು ಪ್ರತಿಕ್ರಿಯಿಸಿದ್ದಾರೆ.
A mutual legal assistance treaty (MLAT) ಎಂದು ಕರೆಯುವ ಒಪ್ಪಂದಕ್ಕೆ ಭಾರತ ಮತ್ತು ಇಂಗ್ಲೆಂಡ್ 1995ರಲ್ಲಿ ಸಹಿ ಮಾಡಿವೆ. ಈ ಪರಸ್ಪರ ಕಾನೂನು ಸಹಕಾರ ಒಪ್ಪಂದದ ಪ್ರಕಾರ ಎರಡು ದೇಶಕ್ಕೆ ಬೇಕಾದ ವ್ಯಕ್ತಿಯನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳಲು ಅವಕಾಶ ಇದೆ. ಇಲ್ಲಿ ತನಕ ಈ ಒಪ್ಪಂದ ಬಳಸಿಕೊಂಡು ಒಬ್ಬರನ್ನು ಮಾತ್ರ ಇಂಗ್ಲೆಂಡಿನಿಂದ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ವಿನುಭಾಯಿ ಪಟೇಲ್ ಅವರು ಗಡಿಪಾರು ಮಾಡಿದರೂ ನನ್ನ ಅಭ್ಯಂತರವಿಲ್ಲ ಎಂದಿದ್ದರಿಂದ ಕೆಲಸ ಸುಲಭವಾಗಿತ್ತು. ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರಲು ಇಲ್ಲಿನ ತನಿಖಾ ಸಂಸ್ಥೆಗಳಿಗೆ ಕನಿಷ್ಟ 10 ರಿಂದ 15 ವರ್ಷಗಳಾದರೂ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications