ಚೆಕ್ ಬೌನ್ಸ್ ಪ್ರಕರಣ: ವಿಜಯ್ ಮಲ್ಯ ತಪ್ಪಿತಸ್ಥ
ಹೈದರಾಬಾದ್, ಏಪ್ರಿಲ್ 21: ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಿಎಂಆರ್ ಹೈದರಾಬಾದ್ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ ಸಲ್ಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ತೀರ್ಪು ಹೊರ ಬಂದಿದೆ. ಹೈದರಾಬಾದ್ ನ್ಯಾಯಾಲಯವು ಮಲ್ಯರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದೆ.
ಸುಮಾರು 9 ಸಾವಿರ ಕೋಟಿ ರು.ಗೂ ಅಧಿಕ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ಮಾರ್ಚ್ ತಿಂಗಳಿನಲ್ಲಿ ದೇಶ ಬಿಟ್ಟು ಇಂಗ್ಲೆಂಡಿಗೆ ಪರಾರಿಯಾಗಿದ್ದಾರೆ. ರಾಜ್ಯಸಭಾ ಸದಸ್ಯ ಮಲ್ಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿಲ್ಲ.[ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್]
ಮೇ 5 ರಂದು ಶಿಕ್ಷೆಯ ಪ್ರಮಾಣ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಜಿಎಂಆರ್ ಪರ ವಕೀಲ ಅಶೋಕ್ ರೆಡ್ಡಿ ಅವರು ಪಿಟಿಐಗೆ ತಿಳಿಸಿದ್ದಾರೆ.[ಮಲ್ಯ ಅವರ ಪಾಸ್ ಪೋರ್ಟ್ ಅಮಾನತು]
ಮಲ್ಯ ಮಾಲೀಕತ್ವದ ಕಿಂಗ್ಫಿಶರ್ ಏರ್ಲೈನ್ಸ್ ವಿರುದ್ದ ಎರಡು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿತ್ತು. ವಾದ-ವಿವಾದ ಆರಂಭವಾಗಿದ್ದು, ನ್ಯಾಯಾಲಯ ಸೆಕ್ಷನ್ 138ರ ಅಡಿಯಲ್ಲಿ ಮಲ್ಯ, ಕಿಂಗ್ಫಿಶರ್ ಹಾಗೂ ಏರ್ಲೈನ್ನ ಹಿರಿಯ ಅಧಿಕಾರಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿದೆ.
ಜಿಎಂಆರ್ ಹೈದರಾಬಾದ್ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿ.ಗೆ ನೀಡಿದ್ದ 50 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ಮೊದಲು ಕಿಂಗ್ಫಿಶರ್ ಏರ್ಲೈನ್ಸ್, ಅದರ ಚೇರ್ಮೆನ್ ವಿಜಯ್ ಮಲ್ಯ ಹಾಗೂ ಕಂಪೆನಿಯ ಇನೊಬ್ಬ ಹಿರಿಯ ಅಧಿಕಾರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. (ಪಿಟಿಐ)