ಪಾನ್ ಮಸಾಲ ಮೇಲಿನ ಜಿಎಸ್ಟಿ ತಗ್ಗಿಸಲು ಕರ್ನಾಟಕ ಬಿಜೆಪಿ ಒತ್ತಾಯ!
ನವದೆಹಲಿ, ಆಗಸ್ಟ್ 10: ಪಾನ್ ಮಸಾಲಾದ ಮೇಲಿನ ಜಿಎಸ್ಟಿಯನ್ನು ಈಗಿರುವ ಶೇ.18ರಿಂದ ಶೇ.5ಕ್ಕೆ ಇಳಿಸಬೇಕೆಂದು ಹಾಗೂ ಅಡಿಕೆಯ ಆಮದಿನ ಗರಿಷ್ಠ ಬೆಲೆಯನ್ನು ಕೆಜಿಗೆ 300 ರೂ.ಗಳಿಗೆ ಏರಿಸಬೇಕೆಂದು ಕರ್ನಾಟಕ ಬಿಜೆಪಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಅಡಿಕೆಯನ್ನು ಪಾನ್ ಮಸಾಲಾಗೆ ಬಳಸಲಾಗುತ್ತದೆ. ಆದರೆ, ಇದರ ಮೇಲೆ ಶೇ.18ರ ತೆರಿಗೆ ಹೇರಲಾಗುತ್ತಿದೆ. ಪಾನ್ ಮಸಾಲಾವನ್ನು ಸಣ್ಣ ಉದ್ಯಮಗಳೇ ಉತ್ಪಾದಿಸುವುದರಿಂದ ಇದರ ಮೇಲಿನ ಜಿಎಸ್ಟಿಯನ್ನು ಶೇ.5ಕ್ಕೆ ಇಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಅಡಿಕೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕೆಜಿಗೆ 280 ರೂ.ಗಳವರೆಗೆ ಕುಸಿದಿದೆ. ಕಳೆದ ವರ್ಷ ಅಡಿಕೆ ಬೆಲೆ ಕೆಜಿಗೆ 380 ರೂ.ಗಳವರೆಗೆ ತಲುಪಿತ್ತು. ಕಡಿಮೆ ಬೆಲೆಯ ಹಾಗೂ ಕಳಪೆ ಗುಣಮಟ್ಟದ ಅಡಿಕೆಯನ್ನು ಶ್ರೀಲಂಕಾ ಹಾಗೂ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.

ರಾಜ್ಯ ಬಿಜೆಪಿ ಅಡಿಕೆ ಬೆಳೆಗಾರರ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಕೃಷಿ, ಹಣಕಾಸು ಹಾಗೂ ವಾಣಿಜ್ಯ ಸಚಿವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ.
ಬೆಲೆ ಕುಸಿತದಿಂದಾಗಿ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಡಿಮೆ ಬೆಲೆಯ ಆಮದಿಗೆ ತಡೆ ಹಾಕಬೇಕಿದೆ ಮತ್ತು ಅಡಿಕೆಯ ಮೌಲ್ಯವರ್ಧನೆಗೆ ಒತ್ತು ನೀಡಬೇಕಿದೆ ಎಂದು ಪತ್ರಕರ್ತರೊಂದಿಗೆ ಮಾತನಾಡಿದ ಜ್ಞಾನೇಂದ್ರ
ತಿಳಿಸಿದ್ದಾರೆ.
ಇದರ ಜೊತೆಗೆ ಅಡಿಕೆಯ ಕನಿಷ್ಠ ಆಮದುಬೆಲೆಯನ್ನು ಕೆಜಿಗೆ 300 ರೂ.ಗಳಿಗೆ ಹೆಚ್ಚಿಸಬೇಕು. ಪ್ರಸಕ್ತ ಕನಿಷ್ಠ ಆಮದು ಬೆಲೆ 251 ರೂ.ಗಳಾಗಿದೆ. ಇದರಿಂದಾಗಿ ಕಡಿಮೆ ಗುಣ ಮಟ್ಟದ ಸರಕು ಬರುವುದನ್ನು ತಡೆದಂತಾಗುತ್ತದೆ ಎಂದು ಜ್ಞಾನೇಂದ್ರ ಹೇಳಿದ್ದಾರೆ. ಕಡಿಮೆ ಬೆಲೆ ನಮೂದಿಸಿ ಅಡಿಕೆ ಆಮದು ಮಾಡಿಕೊಳ್ಳುವ ಪ್ರಕರಣಗಳೂ ಸಹ ನಡೆಯುತ್ತಿವೆ.
ಹೀಗಾಗಿ ಈ ಬಗ್ಗೆ ತೀವ್ರ ನಿಗಾ ವಹಿಸಬೇಕು. ಆಮದಿಗೆ ಮುಂಚೆ ಅಡಿಕೆಯ ಗುಣಮಟ್ಟ ಸಹ ಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ದಕ್ಷಿಣ ಏಷಿಯಾ ಮುಕ್ತ ವ್ಯಾಪಾರಿ ಪ್ರದೇಶ (ಸಾಫ್ಟಾ) ನಿಯಮಗಳ ನೆರವಿನಿಂದ ಶ್ರೀಲಂಕಾ ಕಡಿಮೆ ಬೆಲೆಯ ಅಡಿಕೆ ಪೂರೈಸುತ್ತಿದೆ. ಅಡಿಕೆ ಆಮದಿನ ಕನಿಷ್ಠ ಬೆಲೆ ಈ ಹಿಂದೆ ಕೆಜಿಗೆ 162 ರೂ. ಆಗಿತ್ತು. ಅದನ್ನು ಇತ್ತೀಚೆಗೆ ಕೇಂದ್ರ ಸರ್ಕಾರ 251 ರೂ.ಗಳಿಗೆ ಹೆಚ್ಚಿಸಿತ್ತು.
ದೇಶದಲ್ಲಿ ಪ್ರತಿವರ್ಷ 5 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ.60ರಷ್ಟು ಕರ್ನಾಟಕ, ತಮಿಳುನಾಡು, ಗೋವಾ ಹಾಗೂ ಅಸ್ಸಾಂಗಳಿಂದ ಬರುತ್ತದೆ.












Click it and Unblock the Notifications