ದೇಶದ ಆರ್ಥಿಕತೆ ನಿರಾಶಾದಾಯಕ, ಉದ್ಯೋಗ ಸೃಷ್ಟಿಯೇ ಸಮಸ್ಯೆ: ಆರ್ ಬಿಐ
ಗ್ರಾಹಕರ ವಿಶ್ವಾಸ ಕುಸಿಯುತ್ತಿದೆ, ಉತ್ಪಾದನಾ ವಲಯದ ವ್ಯಾಪಾರ ಸ್ಥಿತಿಗತಿ ನೆಟ್ಟಗಿಲ್ಲ, ಹಣದುಬ್ಬರ ಏರುತ್ತಿದೆ, ಪ್ರಗತಿ ಇಳಿಮುಖವಾಗುತ್ತಿದೆ...
-ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಲು ಸಾಲು ಸಮೀಕ್ಷೆಗಳು ಹೀಗೆ ದೇಶದ ಸ್ಥಿತಿಯ ಬಗ್ಗೆ ಎಚ್ಚರಿಕೆಯ ಸೂಚನೆಗಳು ನೀಡುತ್ತಿವೆ. ಈಚೆಗಷ್ಟೇ ಆರ್ ಬಿಐನ ಹಣಕಾಸು ನೀತಿಯ ಪರಾಮರ್ಶೆ ಸಭೆ ನಡೆದಿದ್ದು, ಆ ವೇಳೆಯಲ್ಲಿ 2017-18ನ ಸಾಲಿನಲ್ಲಿ ಪ್ರಗತಿ ದರವು 7.3ರಿಂದ 6.7ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಸತತವಾಗಿ ನಾಲ್ಕನೇ ತ್ರೈ ಮಾಸಿಕವೂ ನಿರಾಶಾದಾಯಕವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರ್ ಬಿಐ ಹೇಳಿದೆ.
ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ಸೆಪ್ಟೆಂಬರ್ ಗೆ ಹೋಲಿಸಿದರೆ ಈ ವರ್ಷದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಶೇ 40.7ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಶೇ 66.3ರಷ್ಟು ಮಂದಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದರು. ಆ ಪ್ರಮಾಣ ಈಗ ಶೇ 50.8ಕ್ಕೆ ಕುಸಿತವಾಗಿದೆ.
ಅಂದಹಾಗೆ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಹಲವರು ಉದ್ಯೋಗ ಸೃಷ್ಟಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವರ್ಷ ನವೆಂಬರ್ ಗೆ ಹೋಲಿಸಿದರೆ ಪರಿಸ್ಥಿತಿ ತೀರಾ ಹಾಳಾಗಿದೆ ಎಂಬುದು ಗೊತ್ತಾಗುತ್ತದೆ.
ಎಲ್ ಅಂಡ್ ಟಿ, ಬ್ಯಾಂಕ್ ಗಳು, ಟೆಲಿಕಾಂ ವಲಯ ಮತ್ತು ಐಟಿ ಕಂಪೆನಿಗಳು ಕಳೆದ ಹನ್ನೆರಡು ತಿಂಗಳಲ್ಲಿ ಉದ್ಯೋಗ ಕಡಿತ ಮಾಡಿವೆ. ಆದರೆ ಹಣದುಬ್ಬರ ವಿಚಾರದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಉತ್ತರ ಸಮಾಧಾನಕರವಾಗಿದೆ.
ಜಿಎಸ್ ಟಿ ಜಾರಿಯಿಂದ ಆಗಿರುವ ಪರಿಣಾಮಗಳು ಕಂಪೆನಿಗಳು ಮತ್ತು ಬ್ಯಾಂಕ್ ಗಳ ಆಯವ್ಯಯಕ್ಕೆ ಪೂರಕವಾಗಿಲ್ಲ. ಇದರಿಂದ ಆರ್ಥಿಕತೆಯೊಳಗೆ ಬಂಡವಾಳ ಹರಿದು ಬರದೆ ಒತ್ತಡ ಹೆಚ್ಚಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.












Click it and Unblock the Notifications