ಪಿಎಂ ಗೃಹ ಯೋಜನೆ: ಡಿಎಚ್ಎಫ್ಎಲ್ನಿಂದ ಸಾವಿರಾರು ಕೋಟಿ ವಂಚನೆ
ನವದೆಹಲಿ, ಮಾರ್ಚ್ 24: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ (ಪಿಎಂಎವೈ) ಸಂಬಂಧಿಸಿದಂತೆ ಬೃಹತ್ ಹಗರಣವೊಂದನ್ನು ಸಿಬಿಐ ಭೇದಿಸಿದೆ. ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ ಜೈಲಿನಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ (ಡಿಎಚ್ಎಫ್ಎಲ್) ಮಾಲೀಕರಾದ ಕಪಿಲ್ ಮತ್ತು ಧೀರಜ್ ವಧವಾನ್ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದೆ.
14,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಕಲಿ ಹಾಗೂ ಕಲ್ಪಿತ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ ಅದರ ಮೂಲಕ ಭಾರತ ಸರ್ಕಾರದಿಂದ 1,880 ಕೋಟಿ ರೂ ಬಡ್ಡಿ ಸಬ್ಸಿಡಿಯನ್ನು ಪಡೆದುಕೊಂಡಿದ್ದರು ಎಂದು ವಧವಾನ್ ಸಹೋದರ ವಿರುದ್ಧ ಸಿಬಿಐ ಆರೋಪಿಸಿದೆ.
ಎಲ್ಲರಿಗೂ ಮನೆ ನೀಡುವ ಪಿಎಂಎವೈ ಯೋಜನೆಯನ್ನು 2015ರ ಅಕ್ಟೋಬರ್ನಲ್ಲಿ ಘೋಷಿಸಲಾಗಿತ್ತು. ಸಾಲ ಆಧಾರಿತ ಬಡ್ಡಿ ಸಬ್ಸಿಡಿಗೆ ಅರ್ಹರಾಗುವ ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದವರು, ಕಡಿಮೆ ಹಾಗೂ ಮಧ್ಯಮ ಆದಾಯ ಗುಂಪುಗಳ ಜನರಿಗೆ ಗೃಹ ಸಾಲವನ್ನು ನೀಡಲಾಗುತ್ತದೆ. ಡಿಎಚ್ಎಫ್ಎಲ್ನಂತಹ ಹಣಕಾಸು ಸಂಸ್ಥೆಗಳು ಈ ಸಾಲಗಳನ್ನು ನೀಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸುತ್ತಿದ್ದವು.

2018ರ ಡಿಸೆಂಬರ್ನಲ್ಲಿ ತಾನು ಪಿಎಂಎವೈ ಅಡಿ 88,651 ಸಾಲಗಳ ಪ್ರಕ್ರಿಯೆ ನಡೆಸಿದ್ದು, 539.4 ಕೋಟಿ ರೂಪಾಯಿ ಸಬ್ಸಿಡಿ ಪಡೆದುಕೊಂಡಿದ್ದಾಗಿ ಮತ್ತು ಇನ್ನೂ 1,347.8 ಕೋಟಿ ರೂ ಬಾಕಿ ಉಳಿದಿದೆ ಎಂದು ಡಿಎಚ್ಎಫ್ಎಲ್ ತನ್ನ ಹೂಡಿಕೆದಾರರಿಗೆ ತಿಳಿಸಿತ್ತು.
ಆದರೆ ಕಪಿಲ್ ಮತ್ತು ಧೀರಜ್ ವಧವಾನ್ ಇಬ್ಬರೂ 2.6 ಲಕ್ಷ ನಕಲಿ ಸಾಲ ಖಾತೆಗಳನ್ನು ಸೃಷ್ಟಿಸಿದ್ದರು. ಇದರಲ್ಲಿ ಕೆಲವು ಪಿಎಂಎವೈ ಯೋಜನೆಯಡಿ ಇದ್ದು, ಅದರ ನಿಯಮಕ್ಕೆ ಅನುಗುಣವಾಗಿ ಬಡ್ಡಿ ಸಬ್ಸಿಡಿ ಪಡೆದುಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಡಿಎಚ್ಎಫ್ಎಲ್ನಲ್ಲಿ ಹೂಡಿಕೆ ಮಾಡಿದ್ದಕ್ಕೆ ಕಪೂರ್ ಕುಟುಂಬ ಕಿಕ್ಬ್ಯಾಕ್ ಪಡೆದಿದೆ ಎಂಬ ಆರೋಪದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತು ವಧವಾನ್ ಸಹೋದರರ ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಕಳೆದ ವರ್ಷದ ಏಪ್ರಿಲ್ನಲ್ಲಿ ವಧ್ವಾನ್ ಸಹೋದರರನ್ನು ಬಂಧಿಸಲಾಗಿತ್ತು.












Click it and Unblock the Notifications